ಲಿಂಗಾಯತ ಮಠಾಧೀಶರೆಲ್ಲ ಒಂದಾಗಿ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಾರ್ಚ್ 27 ರಂದು ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಿಕೆಟ್ ಬದಲಾವಣೆಗೆ ಒತ್ತಾಯಿಸಿದ್ದರು.
ಮಾರ್ಚ್ 27 ರಂದು ಎಲ್ಲ ಸಮಾಜದ ಸ್ವಾಮಿಗಳ ಸಹಭಾಗಿತ್ವದಲ್ಲಿ, ದಿಂಗಾಲೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಒಂದು ಚಿಂತನ ಮಂಥನ ಸಭೆ ನಡೆಯಿತು. ಆ ಸಭೆಯ ಅಧ್ಯಕ್ಷತೆಯನ್ನು ಧಾರವಾಡದ ಮುರುಘಾಮಠದ ಶ್ರೀಗಳೇ ವಹಿಸಿಕೊಂಡಿದ್ದರು. ಆ ದಿನ ನಡೆದ ಪತ್ರಿಕಾಗೋಷ್ಠಿಯಲ್ಲಿಯೂ ಭಾಗವಹಿಸಿದ್ದರು. ಮರುದಿನ ಅವರು, ನಮಗೂ ಇದಕೂ ಯಾವುದೇ ಸಂಬಂಧವೇ ಇಲ್ಲ ಎಂಬ ಹೇಳಿಕೆ ಜನರನ್ನು ಗೊಂದಲಕ್ಕೀಡು ಮಾಡಿತ್ತು. ಆದರೆ ಇದೀಗ ಸಂಬಂಧವಿಲ್ಲ ಎಂಬ ಒತ್ತಡದ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಮುರುಘಾಮಠ ಮಲ್ಲಿಕಾರ್ಜುನ ಶ್ರೀಗಳು ದಿಂಗಾಲೇಶ್ವರ ಶ್ರೀಗಳ ಧ್ವನಿಗೆ ಜೊತೆಯಾಗಿ ಬೆಂಬಲ ಸೂಚಿಸಿದ್ದಾರೆ.
ಸಭೆಯಲ್ಲಿ ತೆಗದುಕೊಂಡ ನಿರ್ಣಯಗಳು ಎಲ್ಲ ಸ್ವಾಮೀಜಿಗಳ ಸಹಮತವಾಗಿರುತ್ತವೆ. ಎಲ್ಲರ ಅಭಿಪ್ರಾಯಗಳೇ ನಿರ್ಧಾರಗಳಲ್ಲಿ ವ್ಯಕ್ತವಾಗಿರುತ್ತವೆ. ಹೀಗೆ ಆದರೆ ಜೋಶಿಯವರಿಗೆ ರಾಜಕೀಯದಲ್ಲಿ ಹಿನ್ನಡೆಯಾಗುತ್ತದೆ ಎಂಬ ಯೋಚನೆಯಿಂದ ಬಿಜೆಪಿಯವರು ಲಿಂಗಾಯತ ಸ್ವಾಮೀಜಿಗಳನ್ನು ಒತ್ತಡಕ್ಕೆ ಒಳಪಡಿಸಿ, ಹೆದರಿಸಿ ಅವರಿಂದ ಜೋಶಿ ವಿರೋಧವಿಲ್ಲ ಎಂಬ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಅದರ ಬೆನ್ನಲ್ಲೆ ಮೂರುಸಾವಿರ ಮಠದ ರಾಜಯೋಗಿಂದ್ರ ಸ್ವಾಮೀಜಿ ಸಹಿತ ನಾವು ಜೋಶಿ ವಿರೋಧಿಗಳಲ್ಲ ಎಂಬ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಪ್ರಲ್ಹಾದ್ ಜೋಶಿ ಬಲಗೈ ಆಗಿರುವ ಈರೇಶ ಅಂಚಟಗೇರಿ, ನಾವು ಜೋಶಿ ವಿರೋಧವಿಲ್ಲ ಎಂಬಂತೆ ಪತ್ರವನ್ನು ಟೈಪ್ ಮಾಡಿಸಿ ಒತ್ತಾಯಪೂರ್ವಕವಾಗಿ ಲಿಂಗಾಯತ ಸ್ವಾಮೀಜಿಗಳಿಂದ ಜೋಶಿ ಪರ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂಬ ಗುಸುಗುಸು ಮಾತುಗಳೂ ಕೇಳಿಬರುತ್ತಿವೆ. ಬಿಜೆಪಿಯನ್ನು ಲಿಂಗಾಯತರೇ ಬೆಳೆಸಿದರಾದರೂ ಒಳಗೊಳಗೆ ಲಿಂಗಾಯತರನ್ನು ತುಳಿಯುತ್ತಿದೆ ಎಂದು ಜನ ಮಾತನಾಡುತ್ತಿದ್ದಾರೆ. ಈ ಕುರಿತು ಮುರುಘಾಮಠ ಸ್ವಾಮಿಗಳೂ ಸ್ಪಷ್ಟೀಕರಣ ನೀಡಿದ್ದಾರೆ.
ಇನ್ನು ಈ ಎಲ್ಲ ತಿರುವುಗಳಿಂದ ದಿಂಗಾಲೇಶ್ವರ ಶ್ರೀಗಳಿಗೆ ಮತ್ತಷ್ಟು ಬಲ ಬಂದಿರುವುದಂತೂ ಸತ್ಯ. ಇದೇ ಮುಂದುವರೆದರೆ ಲಿಂಗಾಯತರು ಜೋಶಿ ಕೈಬಿಡುವುದಂತೂ ಸತ್ಯ ಎಂಬುದು ಕೇಳಿಬರುತ್ತಿದೆ. ಒಂದು ವೇಳೆ ಮಾರ್ಚ್ 31 ಕ್ಕೆ ಕೇಂದ್ರ ಸಚಿವ ಜೋಶಿ ಟಿಕೆಟ್ ಬದಲಾವಣೆ ಮಾಡಿದರೆ ದಿಂಗಾಲೇಶ್ವರ ಶ್ರೀಗಳೆ ಕಣಕ್ಕಿಳಿಯುತ್ತಾರಾ, ಬದಲಾವಣೆ ಮಾಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗುತ್ತಾರಾ ಅಥವಾ ಬೇರೆಯವರ ಕಣಕ್ಕಿಳಿಸುತ್ತಾರಾ ಎಂಬುದು ಕುತೂಹಲಕಾರಿಯಾಗಿದೆ.





