ರಾಜಕಾರಣದಲ್ಲಿ ಯಾವಾಗ ಯಾವ ನಡೆ-ನುಡಿ ಮೇಲೆದ್ದುಬಂದು ಕಾಟ ಕೊಡುತ್ತದೆ ಎನ್ನುವುದನ್ನು ಹೇಳಲಾಗದು. ಅದೇ ರೀತಿ ಈಗ ಪ್ರಶಾಂತ್ ಕಿಶೋರ್ ಹೇಳಿದ 11 ಕೋಟಿ ಕತೆ ಕೂಡ ಕಾಟ ಕೊಡುತ್ತಿದೆ. ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಹಾರ ಚುನಾವಣೆಗೆ ಕೇವಲ ಆರು ದಿನಗಳಿರುವಾಗಲೇ ನಡೆಯಬಾರದ ಘಟನೆಗಳೆಲ್ಲ ನಡೆಯುತ್ತಿವೆ. ಲಾಲೂ ಪ್ರಸಾದ್ ಯಾದವ್ ಅವರ ಒಂದು ಕಾಲದ ಬೆಂಬಲಿಗರಾದ ದುಲಾರ್ ಚಂದ್ ಹತ್ಯೆಯಾಗಿದೆ. ಇವರು ಈಗ ಪ್ರಶಾಂತ್ ಕಿಶೋರ್ ಪಕ್ಷದ ಬೆಂಬಲಿಗರಾಗಿದ್ದರು. ಇವರ ಹತ್ಯೆಯಲ್ಲಿ ಬಿಜೆಪಿಯ ಅನಂತ್ ಸಿಂಗ್ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ‘ನ್ಯೂಸ್ ಲಾಂಡ್ರಿ’ಯ ಶ್ರೀನಿವಾಸನ್ ಜೈನ್ ಜನ ಸುರಾಜ್ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಮೇಲೆ, ಖಾಸಗಿ ಕಂಪನಿಯಿಂದ ಕೇವಲ 2 ಗಂಟೆಗಳ ಸಲಹೆಗೆ 11 ಕೋಟಿ ಪಡೆದ ಗಂಭೀರ ಆರೋಪ ಮಾಡಿದ್ದಾರೆ. ಅದಕ್ಕೆ ಪುರಾವೆಯಾಗಿ ಅವರೇ ಮಾತನಾಡಿದ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಆ ವಿಡಿಯೋದಲ್ಲಿ ಪ್ರಶಾಂತ್ ಕಿಶೋರ್, ‘ಜನ್ ಸುರಾಜ್ ಪಕ್ಷ ಸಂಘಟನೆಗಾಗಿ ಹಣ ಬೇಕಾಗಿದೆ. ನನ್ನ ಮೂರು ವರ್ಷಗಳ ಆದಾಯವಾದ 241 ಕೋಟಿಯಲ್ಲಿ, 51 ಕೋಟಿ ತೆರಿಗೆ ಕಟ್ಟಿದ್ದೇನೆ, 98.5 ಕೋಟಿ ರೂಪಾಯಿಗಳನ್ನು ಜನ್ ಸುರಾಜ್ ಪಕ್ಷಕ್ಕೆ ದಾನ ಮಾಡಿದ್ದೇನೆ. ಯಾವುದೋ ಕಂಪನಿ ಸಲಹೆ ಕೇಳಿತು, ಎರಡೇ ಎರಡು ಗಂಟೆಗಳ ಸಲಹೆಗೆ 11 ಕೋಟಿ ಕೋಡ್ತೀನಿ ಅಂದಿತು. ಅದನ್ನೂ ಜನ್ ಸುರಾಜ್ ಪಕ್ಷಕ್ಕಾಗಿಯೇ ವಿನಿಯೋಗಿಸಿದ್ದೇನೆ. ಇದು ಬಿಹಾರದ ಬಾಲಕನ ಶಕ್ತಿ’ ಎಂದು ಗರ್ವದಿಂದ ಹೇಳಿಕೊಂಡಿದ್ದರು.
ಇದನ್ನು ಓದಿದ್ದೀರಾ?: ಬಿಹಾರ ಚುನಾವಣೆ | ಬಿಜೆಪಿ ಪ್ರಣಾಳಿಕೆ ಬಿಡುಗಡೆ; 1 ಕೋಟಿ ಸರ್ಕಾರಿ ಉದ್ಯೋಗದ ಭರವಸೆ
ಈ ಹೇಳಿಕೆಯು ವಿವಾದವಾಗಿತ್ತು. ಜನ್ ಸುರಾಜ್ ಪಕ್ಷದ ಹಣಕಾಸು ಮೂಲಗಳ ಬಗ್ಗೆ ಬಿಜೆಪಿ ಮತ್ತು ಜೆಡಿಯು ಪಕ್ಷಗಳಿಂದ ಆರೋಪಗಳು ಕೇಳಿಬಂದಿದ್ದವು. ಅದರಲ್ಲೂ ಬಿಜೆಪಿ ಎಂಪಿ ಸಂಜಯ್ ಜೈಸ್ವಾಲ್, ‘ಜನ್ ಸುರಾಜ್ ಪಕ್ಷಕ್ಕೆ ತಮಿಳುನಾಡು, ತೆಲಂಗಾಣದ ಕಂಪನಿಗಳಿಂದ ಅಕ್ರಮ ಧನಸಹಾಯ ಬಂದಿದೆ’ ಎಂದು ಆರೋಪಿಸಿದ್ದರು.
ಬಿಜೆಪಿಯ ಎಂಪಿ ಸಂಜಯ್ ಜೈಸ್ವಾಲ್ ಪ್ರಕಾರ, ಪಕ್ಷಗಳಿಗೆ ಕಂಪನಿಗಳಿಂದ ಬರುವ ಧನಸಹಾಯ ಅಕ್ರಮ ಎಂದು ಯೋಚಿಸುವುದಾದರೆ, ನವಯುಗ ಎಂಜಿನಿಯರಿಂಗ್ ಕಂಪನಿಯ ಅಣಬೆಯ ಉಪಉತ್ಪನ್ನದ ಮಾರುಕಟ್ಟೆಗಾಗಿ, ಕೇವಲ ಎರಡು ಗಂಟೆ ಸಲಹೆ ನೀಡಿದ್ದಕ್ಕಾಗಿ, ಅವರಿಂದ 11 ಕೋಟಿ ರೂಪಾಯಿಗಳನ್ನು ಪ್ರಶಾಂತ್ ಕಿಶೋರ್ ಪಡೆದಿರುವುದು ಕೂಡ ಅಕ್ರಮವಾಗುತ್ತದೆ. ಅದನ್ನು ಪ್ರಶಾಂತ್ ಕಿಶೋರ್ ಅಲ್ಲಗಳೆದು, ನಾನು ಪಡೆದದ್ದು ಕೇವಲ 2 ಕೋಟಿ ಎಂದು ಸಮಜಾಯಿಷಿ ನೀಡಿದ್ದಾರೆ.
ಭಾರತೀಯ ಜನತಾ ಪಕ್ಷದ ಮೇಲಿರುವ ಆರೋಪಗಳಿಗೆ ಹೋಲಿಸಿದರೆ, ಇದು ಚಿಲ್ಲರೆ ಕಾಸಿನಂತೆ ಕಾಣಬಹುದು. ಇದೇ ನವಯುಗ ಎಂಜಿನಿಯರಿಂಗ್ ಕಂಪನಿಯಿಂದ ಬಿಜೆಪಿಗೆ, ಚುನಾವಣಾ ಬಾಂಡ್ ಮೂಲಕ 55 ಕೋಟಿ ರೂಪಾಯಿಗಳು ಸಂದಾಯವಾಗಿತ್ತು. ಬಿಜೆಪಿ ಎಂಪಿ ಸಂಜಯ್ ಜೈಸ್ವಾಲ್ ಇದನ್ನು ಕೂಡ ಅಕ್ರಮ ಎಂದು ಸಾರ್ವಜನಿಕವಾಗಿ ಹೇಳುತ್ತಾರ ಎಂದು ಕೇಳಬೇಕಾಗಿದೆ, ಇರಲಿ.
ನವಯುಗ ಕಂಪನಿ ಬಿಜೆಪಿಗೆ ಕೊಟ್ಟ 55 ಕೋಟಿಗೆ ಪ್ರತಿಯಾಗಿ ಕೇಂದ್ರದ ಎನ್ಡಿಎ ಸರ್ಕಾರದಿಂದ ಭರಪೂರ ಯೋಜನೆಗಳ ಗುತ್ತಿಗೆ ಕಾಮಗಾರಿ ದಕ್ಕಿತ್ತು. ಅವುಗಳಲ್ಲಿ ಉತ್ತರಾಕಾಂಡದ ಬಹುಕೋಟಿ ಯೋಜನೆಗಳ ಸಿಲ್ಕ್ಯಾರ-ಬಾಲ್ಕೋಟ್ ಸುರಂಗ ಮಾರ್ಗದ ಕಾಮಗಾರಿಯೂ ಒಂದು. ಆ ಕಾಮಗಾರಿಯ ಗುಣಮಟ್ಟ ಮತ್ತು ಕಾರ್ಮಿಕರ ಭದ್ರತೆ ಹೇಗಿತ್ತು ಎಂದರೆ, 2023ರ ನವೆಂಬರ್ 12ರಂದು ಸಿಲ್ಕ್ಯಾರ ಸುರಂಗ ಮಾರ್ಗ ಭೂಕುಸಿತ ಕಂಡಿತ್ತು. 41 ಮಂದಿ ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದರು. ಬಡ ಕಾರ್ಮಿಕರು 17 ದಿನಗಳ ಕಾಲ ಸುರಂಗದಲ್ಲಿ ಅರೆಜೀವವಾಗಿ ದೇಶಾದ್ಯಂತ ಆತಂಕ ಸೃಷ್ಟಿಯಾಗಿತ್ತು.

ಪಾರ್ಟಿಗೆ ಫಂಡ್ ಕೊಡುವ ಕಂಪನಿಗೆ ಗುತ್ತಿಗೆ ನೀಡಿದ ಪರಿಣಾಮವಾಗಿ, ಸುರಂಗ ಕುಸಿದಿತ್ತು, ಕಾರ್ಮಿಕರು ದುರಂತಕ್ಕೆ ಸಿಲುಕಿದ್ದರು. ಆದರೂ ಪ್ರಧಾನಿ ಮೋದಿಯವರು ಮತ್ತು ಗೋದಿ ಮೀಡಿಯಾಗಳು ಕಾರ್ಮಿಕರ ರಕ್ಷಣೆ ಕುರಿತು ಮಾತನಾಡಿದರೆ ಹೊರತು, ಅಕ್ರಮ ಪಾರ್ಟಿ ಫಂಡ್ ಬಗ್ಗೆ ತುಟಿಬಿಚ್ಚಿರಲಿಲ್ಲ.
ದೇಶವನ್ನಾಳುವ ಪ್ರಧಾನಿಗಳ ಪಾರ್ಟಿಯೇ ನವಯುಗ ಕಂಪನಿಯಿಂದ ದೇಣಿಗೆ ಸ್ವೀಕರಿಸಿದರೆ, ಈಗ ತಾನೆ ಕಣ್ಣು ಬಿಡುತ್ತಿರುವ ಜನ್ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಸುಮ್ಮನಿರುತ್ತಾರೆಯೇ? ಹೊಸ ಉತ್ಪನ್ನವೊಂದಕ್ಕೆ ಸಲಹೆ ನೀಡಿದ್ದಕ್ಕಾಗಿ 11 ಕೋಟಿ ಪಡೆದರು. ಅದನ್ನು ‘ಬಿಹಾರದ ಬಾಲಕನ ಶಕ್ತಿ’ಗೆ ಹೋಲಿಸಿಕೊಂಡರು.
ಪ್ರಶಾಂತ್ ಕಿಶೋರ್ ರಾಜಕೀಯ ತಂತ್ರಜ್ಞರೇ ಇರಬಹುದು. ದೇಶದ ರಾಜಕಾರಣದ ದಿಕ್ಕು ದೆಸೆಗಳನ್ನು, ಚುನಾವಣೆಯಲ್ಲಿ ಪಕ್ಷಗಳ ಗಾಳಿಯನ್ನು, ಗೆಲ್ಲಲಿರುವ ಸ್ಥಾನಗಳನ್ನು ಹೇಳಬಲ್ಲ ಚಾಣಾಕ್ಷನೇ ಇರಬಹುದು. ಆದರೆ ರಾಜಕಾರಣದಲ್ಲಿ ಯಾವಾಗ ಯಾವ ನಡೆ-ನುಡಿ ಮೇಲೆದ್ದುಬಂದು ಕಾಟ ಕೊಡುತ್ತದೆ ಎನ್ನುವುದನ್ನು ಹೇಳಲಾಗದು. ಅದೇ ರೀತಿ ಈಗ ಪ್ರಶಾಂತ್ ಕಿಶೋರ್ ಹೇಳಿದ 11 ಕೋಟಿ ಕತೆ ಕೂಡ ಕಾಟ ಕೊಡುತ್ತಿದೆ. ಚುನಾವಣಾ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಿಸುತ್ತಿದೆ, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ.
ಇದನ್ನು ಓದಿದ್ದೀರಾ?: ಜನಪ್ರಿಯ ಆಟಕ್ಕೆ ಮೆರಗು ತಂದವರು; ಭಾರತೀಯ ಮಹಿಳೆಯರ ಕ್ರಿಕೆಟ್ ಯಶೋಗಾಥೆ
ಇಷ್ಟಕ್ಕೆಲ್ಲ ಎದೆಗುಂದದ ಪ್ರಶಾಂತ್ ಕಿಶೋರ್, ಈ ಆರೋಪಗಳು ರಾಜಕೀಯ ಆಟದ ಭಾಗ ಎಂದಿದ್ದಾರೆ. ಮತ್ತು ತಮ್ಮ ಎಂದಿನ ವರಸೆಗೆ ಹೊರಳಿ, ‘ರಾಹುಲ್ ಗಾಂಧಿ, ಅಮಿತ್ ಶಾ ಮತ್ತು ನರೇಂದ್ರ ಮೋದಿಯವರು ಬಿಹಾರಕ್ಕೆ ಈಗ ಭೇಟಿ ಕೊಡುತ್ತಿದ್ದಾರೆ. ಅದು ಅವರ ಸ್ವಾರ್ಥ ರಾಜಕಾರಣ. ಒಳನುಸುಳುಕೋರರ ಬಗ್ಗೆ ಅಮಿತ್ ಶಾ, ಎಸ್ಐಆರ್ ಬಗ್ಗೆ ರಾಹುಲ್ ಮಾತನಾಡುತ್ತಿದ್ದಾರೆ. ಆದರೆ ಬಿಹಾರದ ನಿಜವಾದ ಸಮಸ್ಯೆಗಳಾದ ನಿರುದ್ಯೋಗ, ವಲಸೆ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಎಂದು ನಿಜವಾದ ಬಿಹಾರದ ಬಾಲಕನಂತೆಯೇ ಮಾತನಾಡಿದ್ದಾರೆ.
ಒಟ್ಟಿನಲ್ಲಿ ಶುದ್ಧ ರಾಜಕಾರಣಕ್ಕೆ ಕಳಂಕ ತಂದಿರುವ ಪ್ರಸ್ತುತ ರಾಜಕೀಯ ನಾಯಕರು, ರಾಜಕಾರಣವೆಂದರೆ ಸುಲಭವಲ್ಲ; ಚುನಾವಣೆಗಳನ್ನು ನಿಭಾಸಲಿಕ್ಕಾಗುವುದಿಲ್ಲ; ಭ್ರಷ್ಟಾಚಾರ ಪಾಪವಲ್ಲ ಎಂಬ ಸಮರ್ಥನೆಗಿಳಿದಿದ್ದಾರೆ. ಹೊಸದಾಗಿ ರಾಜಕಾರಣಕ್ಕಿಳಿದಿರುವ ಪ್ರಶಾಂತ್ ಕಿಶೋರ್, ‘ಭಿಕ್ಷೆ ಬೇಡಿದರೂ ಕೂಡ ಭ್ರಷ್ಟ ರಾಜಕಾರಣಿಗಳ ಜೊತೆ ನಿಲ್ಲುವುದಿಲ್ಲ’ ಎಂದಿದ್ದವರು, ಈಗ 11 ಕೋಟಿಯನ್ನು ಚಿಲ್ಲರೆ ಕಾಸು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಮೇಧ್ಯ 5 ಗ್ರಾಂ ಆದರೇನು, 5 ಕೇಜಿ ಆದರೇನು?

ಲೇಖಕ, ಪತ್ರಕರ್ತ




