ಸುರಂಗ ರಸ್ತೆ ಯೋಜನೆಯ ಕುರಿತು ನಿರಂತರ ವಾಗ್ದಾದ ನಡೆಸಿದ್ದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಂಚಾರ ಅವ್ಯವಸ್ಥೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗಗಳ ಬಗ್ಗೆ ಚರ್ಚಿಸಿದರು. ಕಾರು ಮಾತ್ರ ಸಾಗಲು ಅವಕಾಶ ನೀಡುವ ಬಹುಕೋಟಿ ಮೌಲ್ಯದ ಸುರಂಗ ರಸ್ತೆ ಯೋಜನೆಯನ್ನು ರದ್ದುಗೊಳಿಸುವಂತೆ ಸೂರ್ಯ ವಾದಿಸಿದರು. ಹಾಗೆಯೇ ಮೆಟ್ರೋದಂತಹ ಸಾಮೂಹಿಕ ಸಾರಿಗೆಯಲ್ಲಿ ಹೂಡಿಕೆ ಮಾಡಿ ಎಂದು ಸೂಚಿಸಿದರು. ಇದನ್ನು ನಿರಾಕರಿಸಿದ ಡಿ ಕೆ ಶಿವಕುಮಾರ್, “ಕಾರು ಇಲ್ಲದ ವ್ಯಕ್ತಿಯನ್ನು ಯಾರೂ ಮದುವೆಯಾಗಲು ಬಯಸಲ್ಲ” ಎಂದು ವ್ಯಂಗ್ಯವಾಡಿದರು.
ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು ಉತ್ತಮ. ಇದರಿಂದ ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡಬಹುದು ಎಂಬ ತೇಜಸ್ವಿ ಸೂರ್ಯ ವಾದವನ್ನು ವಿರೋಧಿಸಿದ ಡಿ ಕೆ ಶಿವಕುಮಾರ್, “ನೀವು ವಾಹನ ಚಲಾಯಿಸುವುದನ್ನು ನಾನು ತಡೆಯಬಹುದೇ? ಇದು ಸಾಮಾಜಿಕ ಜವಾಬ್ದಾರಿಯ ವಿಷಯ. ಜನರು ತಮ್ಮ ಕುಟುಂಬಗಳೊಂದಿಗೆ ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಅದನ್ನು ತಡೆಯಲಾಗುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಟನಲ್ ರೋಡ್ ದೈತ್ಯ ಯೋಜನೆಯನ್ನು ಸಾರ್ವಜನಿಕ ಚರ್ಚೆಗಿಡಲಿ ಸರ್ಕಾರ
ಹಾಗೆಯೇ, “ಅಗತ್ಯವಿದ್ದರೆ, ಸಂಸದರು ತಮ್ಮ ಮತದಾರರಿಗೆ ತಮ್ಮ ಕಾರುಗಳನ್ನು ಮನೆಯಲ್ಲಿಯೇ ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಮನವಿ ಮಾಡಬಹುದು. ಎಷ್ಟು ಜನರು ಅದನ್ನು ಅನುಸರಿಸುತ್ತಾರೆ ನೋಡೋಣ. ಇಂದು ಕಾರು ಇಲ್ಲದ ಹುಡುಗನನ್ನು ಮದುವೆಯಾಗಲು ಹಿಂಜರಿಯುತ್ತಾರೆ. ಸಂಸದರಿಗೆ ಅಂತಹ ಸಾಮಾಜಿಕ ವಾಸ್ತವಗಳ ಬಗ್ಗೆ ಅರಿವು ಅಗತ್ಯ. ನಮಗೆ ಬೇಕಾಗಿರುವುದು ಹಣ, ಸಲಹೆಯಲ್ಲ” ಎಂದರು.
ಈ ಹಿಂದೆ ಸುರಂಗ ಯೋಜನೆಯನ್ನು ವಿರೋಧಿಸಿದ್ದ ತೇಜಸ್ವಿ ಸೂರ್ಯ, “ಸುಮಾರು 69,000 ಪ್ರಯಾಣಿಕರನ್ನು ಚಲಿಸಬಲ್ಲ ಮೆಟ್ರೋ ಮಾರ್ಗಕ್ಕೆ ಹೋಲಿಸಿದರೆ, ಸುರಂಗದಲ್ಲಿ ಒಂದು ದಿಕ್ಕಿನಲ್ಲಿ ಗಂಟೆಗೆ ಕೇವಲ 1,800 ಕಾರುಗಳು ಮಾತ್ರ ಚಲಿಸುತ್ತದೆ. ನಾವು ಹೆಚ್ಚಿನ ಕಾರುಗಳಲ್ಲ, ಹೆಚ್ಚಿನ ಜನರು ಚಲಿಸಲು ಸಾಧ್ಯವಾಗುವತ್ತ ಗಮನಹರಿಸಬೇಕು. ಸುರಂಗ ಮಾರ್ಗವು ಕೇವಲ ಒಂದು ಸಣ್ಣ ಭಾಗದ ಪ್ರಯಾಣಿಕರಿಗೆ ಮಾತ್ರ ಸೇವೆ ನೀಡುತ್ತದೆ. ಆದರೆ ಸಾರ್ವಜನಿಕ ಸಾರಿಗೆಯು ಬೆಂಗಳೂರಿನ ದೀರ್ಘಕಾಲದ ಸಂಚಾರ ಸಮಸ್ಯೆಗಳಿಗೆ ದೀರ್ಘಾವಧಿಯ ಪರಿಹಾರವನ್ನು ನೀಡುತ್ತದೆ” ಎಂದು ಹೇಳಿದ್ದರು.





