ಬೆಂಗಳೂರು ಜನರ ಸಮಸ್ಯೆ ಮತ್ತು ಅಭಿಪ್ರಾಯ ಆಲಿಸಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ‘ಬೆಂಗಳೂರು ನಡಿಗೆ’ ಕಾರ್ಯಕ್ರಮ ನಡೆಸುತ್ತಿದ್ದಾರೆ. ಭಾನುವಾರ ಬೆಳಗ್ಗೆ ಮತ್ತಿಕೆರೆಯ ಬಳಿಕ ಜೆ.ಪಿ ಪಾರ್ಕ್ನಲ್ಲಿ ಕಾರ್ಯಕ್ರಮ ನಡೆದಿದೆ. ಈ ವೇಳೆ, ಬಿಜೆಪಿ ಶಾಸಕ ಮುನಿರತ್ನ ಅವರು ಆರ್ಎಸ್ಎಸ್ ಬಟ್ಟೆ ಧರಿಸಿ ಹೈಡ್ರಾಮ ನಡೆಸಿದ್ದಾರೆ. ತಮ್ಮ ಮೇಲೆ ಡಿ.ಕೆ ಶಿವಕುಮಾರ್ ಕೈ ಎತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತಿಕೆರೆಯ ಜೆ.ಪಿ ಪಾರ್ಕ್ ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇದೇ ಕಾರಣದಿಂದಾಗಿ, ಪಾರ್ಕ್ನಲ್ಲಿ ನಡೆಯುತ್ತದ್ದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ವೇಳೆಗೆ ಮುನಿರತ್ನ ಪಾರ್ಕ್ಗೆ ಬಂದಿದ್ದರು. ಅವರನ್ನು ಡಿ.ಕೆ ಶಿವಕುಮಾರ್ ನಿರ್ಲಕ್ಷ್ಯಸಿ, ವೇದಿಕೆ ಎಡೆಗೆ ಹೋದರು. ಮುನಿರತ್ನ ಜನರ ನಡುವೆ ಕುರ್ಚಿಯಲ್ಲಿ ಕುಳಿತರು ಎಂದು ಹೇಳಲಾಗಿದೆ.
ವೇದಿಕೆಯಿಂದ ಮುನಿರತ್ನ ಅವರನ್ನು ‘ಹೇಯ್, ಕಪ್ಪು ಟೋಪಿ ಎಂಎಲ್ಎ ಬಾರಯ್ಯ’ ಎಂದು ಡಿ.ಕೆ ಶಿವಕುಮಾರ್ ಕರೆದಿದ್ದಾರೆ. ಆದರೆ, ವೇದಿಕೆಗೆ ಬರಲು ನಿರಾಕರಿಸಿದ ಮುನಿರತ್ನ ಜನರ ನಡುವೆಯೇ ಕುಳಿತಿದ್ದಾರೆ. ಬಳಿಕ, ಪ್ರತಿಭಟನೆ ಆರಂಭಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬೂಟು- ಅಸ್ತವ್ಯಸ್ತಗೊಂಡ ಭಾರತದ ಸಂಕೇತ
“ಇಂದೊಂದು ಸರ್ಕಾರಿ ಕಾರ್ಯಕ್ರಮ. ಆದರೆ, ಇಲ್ಲಿನ ಸಂಸದರು ಮತ್ತು ಶಾಸಕರನ್ನು ಆಹ್ವಾನಿಸಿಲ್ಲ. ಸೋತ ಅಭ್ಯರ್ಥಿಯನ್ನು ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರೆ. ಇದೊಂದು ರಾಜಕೀಯಕ್ಕಾಗಿ ನಡೆಯುತ್ತಿರುವ ಕಾರ್ಯಕ್ರಮ. ಜನರ ಸಮಸ್ಯೆ, ಕುಂದುಕೊರತೆ ಆಲಿಸುವ ಕಾರ್ಯಕ್ರಮವಲ್ಲ” ಎಂದು ಮುನಿರತ್ನ ಕೂಗಾಡಿದ್ದಾರೆ.
“ನಾನು ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಲ್ಲಿಂದ ಇಲ್ಲಿಗೆ ಬಂದಿದ್ದೇನೆ. ನನಗೆ ಶಾಸಕ ಎನ್ನುವ ಗೌರವ ಕೊಡದೆ, ‘ಏ ಕರಿ ಟೋಪಿ ಎಂಎಲ್ಎ’ ಎಂದಿದ್ದಾರೆ. ರೀತಿ ದಬ್ಬಾಳಿಕೆ ಮಾಡುವುದು ಸರಿಯೇ” ಎಂದು ಮುನಿರತ್ನ ಪ್ರಶ್ನಿಸಿದ್ದಾರೆ.
ಮುಂದುವರೆದು ಆರೋಪಗಳನ್ನು ಮಾಡಿದ ಮುನಿರತ್ನ, “ಸಚಿವರು (ಡಿಕೆಶಿ) ನನ್ನ ಮೇಲೆಯೇ ಕೈ ಎತ್ತಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಶಾಸಕನಾಗಿರುವ ನನ್ನನ್ನೇ ಅವಮಾನಿಸಿದ್ದಾರೆ” ಎಂದು ದೂರಿದ್ದಾರೆ.




