ಉತ್ತರ ಭಾರತದ ಮಹಿಳೆಯರು ಮತ್ತು ತಮಿಳುನಾಡಿನ ಮಹಿಳೆಯರನ್ನು ಹೋಲಿಸುವ ಮೂಲಕ ಡಿಎಂಕೆ ಸಂಸದ ದಯಾನಿಧಿ ಮಾರನ್ ಭಾರಿ ರಾಜಕೀಯ ವಿವಾದ ಸೃಷ್ಟಿಸಿದ್ದಾರೆ. “ತಮಿಳುನಾಡಿನಲ್ಲಿ ಮಹಿಳೆಯರಿಗೆ ಓದುವಂತೆ, ಅಧ್ಯಯನ ಮಾಡಲು ಹೇಳಲಾಗುತ್ತದೆ. ಆದರೆ ಉತ್ತರ ಭಾರತದಲ್ಲಿ ಮಹಿಳೆಯರಿಗೆ ಅಡುಗೆ ಮನೆಯಲ್ಲಿ ಕೆಲಸ ಮಾಡಲು, ಮಕ್ಕಳನ್ನು ಹೆರಲು ಹೇಳಲಾಗುತ್ತದೆ” ಎಂದಿದ್ದಾರೆ.
ಕ್ವಾಯ್ದ್-ಇ-ಮಿಲ್ಲತ್ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಾರನ್, “ನಮ್ಮ ಹೆಣ್ಣುಮಕ್ಕಳು ಸಂದರ್ಶನಕ್ಕೆ ಹಾಜರಾಗಲಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲಿ ಲ್ಯಾಪ್ಟಾಪ್ ಹಿಡಿದು ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಇರಬೇಕು. ಆ ವಿಶ್ವಾಸ ತಮಿಳುನಾಡಿನಲ್ಲಿದೆ. ಇಲ್ಲಿ ನಾವು ಹೆಣ್ಣು ಮಕ್ಕಳು ಓದಲು, ಅಧ್ಯಯನ ಮಾಡಲು ಹೇಳುತ್ತೇವೆ. ಆದರೆ ಉತ್ತರ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಏನು ಹೇಳುತ್ತಾರೆ? ಕೆಲಸಕ್ಕೆ ಹೋಗಬೇಡಿ, ಮನೆಯಲ್ಲಿರಿ, ಅಡುಗೆಮನೆಯಲ್ಲಿರಿ, ಮಗುವನ್ನು ಹೆರಿ, ಅದು ನಿಮ್ಮ ಕೆಲಸ ಎಂದು ಹೇಳಲಾಗುತ್ತದೆ” ಎಂದು ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ತಮಿಳುನಾಡಿನಲ್ಲಿ ಯೋಜನೆಗಳನ್ನು ತಡೆ ಹಿಡಿದಿದ್ದ ಚು. ಆಯೋಗ ಬಿಹಾರದಲ್ಲಿ ಮಾಡಿದ್ದೇನು?
“ಇದು ತಮಿಳುನಾಡು, ದ್ರಾವಿಡ ರಾಜ್ಯ. ಕಲೈನಾರ್ (ಮಾಜಿ ಮುಖ್ಯಮಂತ್ರಿ ದಿವಂಗತ ಎಂ ಕರುಣಾನಿಧಿ), ಅಣ್ಣಾ (ಮಾಜಿ ಮುಖ್ಯಮಂತ್ರಿ ಸಿ ಎನ್ ಅಣ್ಣಾದೊರೈ ಮತ್ತು (ಮುಖ್ಯಮಂತ್ರಿ) ಎಂ ಕೆ ಸ್ಟಾಲಿನ್ ಅವರ ನಾಡು. ಇಲ್ಲಿ ನಿಮ್ಮ ಪ್ರಗತಿ ತಮಿಳುನಾಡಿನ ಪ್ರಗತಿಯಾಗಿದೆ. ಅದಕ್ಕಾಗಿಯೇ ಜಾಗತಿಕ ಕಂಪನಿಗಳು ಚೆನ್ನೈಗೆ ಬರುತ್ತವೆ. ಏಕೆಂದರೆ ಇಲ್ಲಿರುವ ಎಲ್ಲರೂ ತಮಿಳಿನಲ್ಲಿ ಮಾತ್ರವಲ್ಲ, ಇಂಗ್ಲಿಷ್ನಲ್ಲೂ ಶಿಕ್ಷಣ ಪಡೆದಿದ್ದಾರೆ” ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ, ಉಪಮುಖ್ಯಮಂತ್ರಿ ಮತ್ತು ಎಂ ಕೆ ಸ್ಟಾಲಿನ್ ಅವರ ಮಗ ಉದಯನಿಧಿ ಸ್ಟಾಲಿನ್ ಉಲಗಂ ಉಂಗಲ್ ಕೈಯಿಲ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ವಿತರಿಸಿದರು.
ವಿಪಕ್ಷ ಬಿಜೆಪಿ ಡಿಎಂಕೆ ಸಂಸದರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದೆ. ತಮಿಳುನಾಡಿನಲ್ಲಿ ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ, “ಮತ್ತೊಮ್ಮೆ, ದಯಾನಿಧಿ ಮಾರನ್ ಉತ್ತರ ಭಾರತೀಯರನ್ನು ನಿಂದಿಸಿದ್ದಾರೆ. ಡಿಎಂಕೆ ಪದೇ ಪದೇ ಈ ರೀತಿ ನಿಂದಿಸುತ್ತಿದೆ. ದಯಾನಿಧಿ ಮಾರನ್ ಅವರಿಗೆ ಸಾಮಾನ್ಯ ಜ್ಞಾನವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಮಹಿಳೆಯ ಮೇಲೆ ಅತ್ಯಾಚಾರ; ಬಜರಂಗದಳ ನಾಯಕ ಬಂಧನ
ಇನ್ನು ಬಿಜೆಪಿ ನಾಯಕಿ ಅನಿಲಾ ಸಿಂಗ್, “ಭಾರತವು ಶಕ್ತಿಯನ್ನು ಪೂಜಿಸುತ್ತದೆ ಎಂಬುದನ್ನು ಅವರು ಮರೆತಿದ್ದಾರೆ. ಶಕ್ತಿಯನ್ನು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಎಂದು ವಿಂಗಡಿಸಬಹುದು ಎಂದು ಅವರು ಭಾವಿಸಿದರೆ, ಅವರಿಗೆ ನಮ್ಮ ಸಂಸ್ಕೃತಿ ಅರ್ಥವಾಗಿಲ್ಲ ಎಂದರ್ಥ. ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಅಥವಾ ನಮ್ಮ ಅಧ್ಯಕ್ಷೆ ದ್ರೌಪದಿ ಮುರ್ಮು ಎಲ್ಲಿಯವರು ಎಂದು ನಾನು ಕೇಳಲು ಬಯಸುತ್ತೇನೆ. ಈ ವಿಭಜನಕಾರಿ ರಾಜಕೀಯ ಕೆಲಸ ಮಾಡುವುದಿಲ್ಲ” ಎಂದರು.
ಆದರೆ ಡಿಎಂಕೆ ನಾಯಕರು ಮಾರನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಇದು ರಾಜ್ಯವನ್ನು ಆಳುವ ಪಕ್ಷದ ಮೇಲೆ ಅವಲಂಬಿತ. ಈಗ ಕಾಂಗ್ರೆಸ್ ಮಹಿಳೆಯನ್ನು ಸಬಲೀಕರಿಸುತ್ತಿದೆ. ಕಾಂಗ್ರೆಸ್ ಎಲ್ಲೆಲ್ಲಿ ಆಡಳಿತ ನಡೆಸುತ್ತಿದೆಯೋ ಅಲ್ಲೆಲ್ಲಾ ಮಹಿಳೆಯರ ಶಿಕ್ಷಣಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಇಲ್ಲಿ ತಮಿಳುನಾಡಿನಲ್ಲಿ, ನಾವು ಮಹಿಳೆಯರಿಗಾಗಿ ಹೋರಾಡಿದ್ದೇವೆ, ಅವರನ್ನು ಸಬಲೀಕರಣಗೊಳಿಸಿದ್ದೇವೆ. ಶಿಕ್ಷಣ ನೀಡಿದ್ದೇವೆ. ಉದ್ಯೋಗ ನೀಡಿದ್ದೇವೆ. ಉತ್ತರದಲ್ಲಿ, ಮಹಿಳೆಯರಿಗಾಗಿ ಹೋರಾಡಲು ಯಾರೂ ಇಲ್ಲ” ಎಂದು ಡಿಎಂಕೆಯ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ.
ಆದರೆ ರಾಜಕೀಯಕ್ಕೆ ಮಹಿಳೆಯರನ್ನು ಬಳಸಿಕೊಳ್ಳುವುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ಮಹಿಳೆಯರು ರಾಜಕೀಯದ ವಿಷಯವಸ್ತುವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





