ಜನವರಿ 22 ರಂದು ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮಕ್ಕೂ ಮುನ್ನ ರಾಮನ ಹೆಸರಿನಲ್ಲಿ ಅಸ್ಪೃಶ್ಯತೆ ಆಚರಣೆಯ ಘಟನೆ ಗಮನ ಸೆಳೆದಿದೆ. ಶ್ರೀರಾಮನಿಂದ ದಲಿತರು ದೂರ ಉಳಿಯುವಂತೆ ಮಾಡುವ ಅನಿಷ್ಠ ಆಚರಣೆ ರಾಜಸ್ಥಾನದಲ್ಲಿ ನಡೆದಿದೆ.
ರಾಮಮಂದಿರದ ಉತ್ಸವಕ್ಕಾಗಿ ದಲಿತರು ದೇಣಿಗೆ ನೀಡಿದ್ದ ಹಣವನ್ನು ಕೆಲವು ಪ್ರಬಲ ಜಾತಿಗರು ‘ಅಶುದ್ಧ’ವೆಂದು ಹಿಂದಿರುಗಿಸಿರುವ ಘಟನೆ ರಾಜಸ್ಥಾನದ ಝಲಾವರ್ ಜಿಲ್ಲೆಯ ಮುಂಡ್ಲಾ ಗ್ರಾಮದಲ್ಲಿ ನೆಡೆದಿದೆ.
ಸಾಮಾಜಿಕ ನ್ಯಾಯದ ಸಮಸ್ಯೆಗಳ ಕುರಿತು ವರದಿ ಮಾಡುವ ವೆಬ್ಸೈಟ್ ‘ದಿ ಮೂಕನಾಯಕ‘ ಘಟನೆಯ ಬಗ್ಗೆ ವರದಿ ಮಾಡಿದೆ. ಖಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಡ್ಲಾ ಗ್ರಾಮದ ದಲಿತ ಸಮುದಾಯದವರು, ರಾಮಮಂದಿರದ ಉತ್ಸವ, ಯಾತ್ರೆ, ಪ್ರಸಾದ ವಿತರಣೆಯಂತಹ ಕಾರ್ಯಕ್ಕಾಗಿ ಹಣವನ್ನು ದೇಣಿಗೆ ನೀಡಿದ್ದಾರೆ. ಆದರೆ, ಪ್ರಬಲ ಜಾತಿಯ ಕೆಲವರು ಆ ಹಣವನ್ನು ದಲಿತರಿಗೆ ಹಿಂದಿರುಗಿಸಿದ್ದಾರೆ.
“ದಲಿತರಿಂದ ಬಂದ ಹಣವನ್ನು ದೇವಾಲಯದ ಆಚರಣೆಗಳಿಗೆ ಸ್ವೀಕರಿಸುವುದಿಲ್ಲ. ಅವರ ದೇಣಿಗೆಯಿಂದ ಮಾಡಿದ ಪ್ರಸಾದವನ್ನು ‘ಅಶುದ್ಧ’ವೆಂದು ಪರಿಗಣಿಸಲಾಗುವುದು” ಎಂದು ಬಲಿಷ್ಠ ಜಾತಿಯವರು ಹೇಳಿದ್ದಾರೆ. ಇದು, ಪಕ್ಷಪಾತ ಮತ್ತು ತಾರತಮ್ಯ ಎಂದು ಆರೋಪಿಸಿ ದಲಿತರು ಜನವರಿ 11ರಂದು ಝಲಾವರ್ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
‘ದಿ ಮೂಕನಾಯಕ’ ವರದಿ ಪ್ರಕಾರ, ಮೇಘವಾಲ್, ಬೈರ್ವಾ, ಧೋಬಿ ಮತ್ತು ಮೆಹರ್ ಸಮುದಾಯದ ಜನರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ, “ನಾಗರ ಸಮುದಾಯದ ಕೆಲವರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ನಮ್ಮನ್ನು ಸಂಪರ್ಕಿಸಿದ್ದರು. ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮಿಂದಾಗುವಷ್ಟು ದೇಣಿಗೆ ನೀಡಿದ್ದೇವೆ. ಆದರೆ, ಜನವರಿ 9 ರಂದು ರಾತ್ರಿ 9 ಗಂಟೆಗೆ ಆ ಸಮುದಾಯ ಕಲವರು ನಮ್ಮ ವಸತಿ ಪ್ರದೇಶಕ್ಕೆ ಬಂದು, ಹಣವನ್ನು ಹಿಂದಿರುಗಿಸಿದರು” ಎಂದು ವಿವರಿಸಿದ್ದಾರೆ.
“ದೇವರಿಗೆ ‘ಭೋಗ್’ಗಾಗಿ (ಪವಿತ್ರ ಅರ್ಪಣೆ) ದಲಿತರಿಂದ ಸಂಗ್ರಹಿಸಿದ ಹಣ ಮತ್ತು ಚಾಮರಗಳನ್ನು ಬಳಸಲಾಗುವುದಿಲ್ಲ. ಅದನ್ನು ‘ಅಶುದ್ಧ’ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ನಿಮ್ಮ ಹಣವನ್ನು ಹಿಂದಿರುಗಿಸುತ್ತಿದ್ದೇವೆಂದು ಅವರು ಹೇಳಿದರು” ಎಂದು ದಲಿತರು ತಿಳಿಸಿದ್ದಾರೆ.
ಘಟನೆ ಬಗ್ಗೆ ವಿವರಿಸಿರುವ ಗ್ರಾಮದ ದಲಿತ ನಿವಾಸಿ ಮುಕೇಶ್ ಮೇಘವಾಲ್, “ಪೊಲೀಸರು ಈಗ ದೂರು ಹಿಂಪಡೆಯಲು ಒತ್ತಡ ಹೇರುತ್ತಿದ್ದಾರೆ. ಅದಕ್ಕಾಗಿ, ಕೆಲವು ಅಧಿಕಾರಿಗಳು ಗ್ರಾಮಕ್ಕೆ ಪದೇ-ಪದೇ ಬರುತ್ತಿದ್ದಾರೆ. ನಮ್ಮ ದೂರು ಆಧರಿಸಿ ಪ್ರಕರಣ ದಾಖಲಿಸುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತಿದೆ; ಮಸೀದಿ ಸ್ಥಿತಿ ಏನಾಗಿದೆ?
“ಗ್ರಾಮದಲ್ಲಿ ಉದ್ವಿಗ್ನ ವಾತಾವರಣವಿದೆ. ಪೊಲೀಸರು ಪ್ರಕರಣ ದಾಖಲಿಸಲು ವಿಫಲವಾದರೆ, ದಲಿತ ಸಮುದಾಯವು ಸೋಮವಾರ ಝಲಾವರ್ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲು ಯೋಜಿಸಿದೆ” ಎಂದು ಮೇಘವಾಲ್ ಹೇಳಿದ್ದಾರೆ.
ದೂರು ಹಿಂಪಡೆಯುವಂತೆ ಒತ್ತಾಯಿಸುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಖಾನ್ಪುರ ಪೊಲೀಸ್ ಠಾಣೆಯ ಎಸ್ಎಚ್ಒ ರಾಮ್ಕಿಶನ್ ಗೋಡಾರಾ, “ದೂರು ಹಿಂಪಡೆಯಲು ಒತ್ತಾಯಿಸುವ ಆರೋಪಗಳು ಆಧಾರರಹಿತವಾಗಿವೆ. ನಿಷ್ಪಕ್ಷಪಾತ ಸಾಕ್ಷಿಗಳೊಂದಿಗೆ ಮಾತನಾಡಲು ಸ್ವತಃ ಡಿವೈಎಸ್ಪಿ ಅವರೇ ಗ್ರಾಮಕ್ಕೆ ಭೇಟಿ ನೀಡಿದ್ದರು. ಆಡಳಿತವು ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿದೆ. ಪ್ರಕರಣದ ಬಗ್ಗೆ ಪೊಲೀಸರು ನ್ಯಾಯಯುತ ತನಿಖೆ ನಡೆಸುತ್ತಾರೆ” ಎಂದು ಹೇಳಿದ್ದಾರೆ.




