ಕೃತಕ ಬುದ್ಧಿಮತ್ತೆ (AI) ಶೃಂಗಸಭೆಯ ವೇಳೆ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನದ ವಿಚಾರದಲ್ಲಿ ಹೈಡ್ರಾಮಾ ನಡೆದಿದೆ. ದೆಹಲಿ ಮತ್ತು ಹಿಮಾಚಲ ಪ್ರದೇಶದ ಪೊಲೀಸರ ನಡುವೆ ಮಧ್ಯರಾತ್ರಿಯವರೆಗೆ ಭಾರಿ ವಾಗ್ವಾದ ನಡೆದಿದೆ. ದೆಹಲಿ ಪೊಲೀಸರ ತಂಡವನ್ನೇ ಹಿಮಾಚಲ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಅಪಹರಣ ಪ್ರಕರಣದ ಬಗ್ಗೆ ಚರ್ಚೆ ನಡೆದಿದೆ. ಕೊನೆಗೆ ದೆಹಲಿ ಪೊಲೀಸರ ತಂಡದ ಕೆಲವು ಸದಸ್ಯರು ವಿಚಾರಣೆಗಾಗಿ ಹಿಮಾಚಲದಲ್ಲಿ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ದೆಹಲಿಯಲ್ಲಿ ನಡೆದ AI ಶೃಂಗಸಭೆಯ ವೇಳೆ ಪ್ರತಿಭಟನೆ ನಡೆಸಿದ್ದ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಹಿಮಾಚಲದ ರೋಹ್ರುವಿನಲ್ಲಿ ವಶಕ್ಕೆ ಪಡೆದಿದ್ದರು. ಇವರನ್ನು ದೆಹಲಿಗೆ ಕರೆದೊಯ್ಯುವ ವೇಳೆ ಶಿಮ್ಲಾ ಸಮೀಪದ ಶೋಗಿ ಗಡಿಯಲ್ಲಿ ಹಿಮಾಚಲ ಪೊಲೀಸರು ದೆಹಲಿ ಪೊಲೀಸ್ ವಾಹನಗಳನ್ನು ತಡೆದಿದ್ದಾರೆ.
ಇದನ್ನು ಓದಿದ್ದೀರಾ? AI ಶೃಂಗಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ರಾಹುಲ್ ಗಾಂಧಿಗೆ ಬಿಜೆಪಿ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶನ
ದೆಹಲಿ ಪೊಲೀಸರು ಅನುಮತಿಯಿಲ್ಲದೆ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದಾರೆ ಎಂದು ಆರೋಪಿಸಿ ಹಿಮಾಚಲ ಪೊಲೀಸರು ದೆಹಲಿ ಪೊಲೀಸರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಡರಾತ್ರಿ 1:30ರ ಸುಮಾರಿಗೆ ಆರೋಪಿಗಳನ್ನು ಮತ್ತು ದೆಹಲಿ ಪೊಲೀಸರನ್ನು ಎಸಿಜೆಎಂ ಏಕಾಂಶ್ ಕಪಿಲ್ ಅವರ ನಿವಾಸಕ್ಕೆ ಕರೆದೊಯ್ಯಲಾಗಿದ್ದು, ನ್ಯಾಯಾಲಯವು ದೆಹಲಿ ಪೊಲೀಸರಿಗೆ ಟ್ರಾನ್ಸಿಟ್ ರಿಮಾಂಡ್ (Transit Remand) ಮಂಜೂರು ಮಾಡಿದೆ. ಅಂದರೆ ಆರೋಪಿಗಳನ್ನು ಒಂದು ರಾಜ್ಯದಲ್ಲಿ ಬಂಧಿಸಿ, ಅಪರಾಧ ನಡೆದ ಬೇರೆ ರಾಜ್ಯದ ನ್ಯಾಯಾಲಯಕ್ಕೆ ಹಾಜರುಪಡಿಸಲು ದೆಹಲಿ ಪೊಲೀಸರು ಸ್ಥಳೀಯ ಮ್ಯಾಜಿಸ್ಟ್ರೇಟ್ನಿಂದ ತಾತ್ಕಾಲಿಕ ಅನುಮತಿ ಪಡೆದಿದ್ದಾರೆ.
ನ್ಯಾಯಾಲಯದ ಆದೇಶದ ನಂತರವೂ ಕನ್ಲಾಗ್ ಬಳಿ ದೆಹಲಿ ತಂಡವನ್ನು ಮತ್ತೆ ತಡೆಯಲಾಗಿದೆ. ಡಿಜಿಟಲ್ ಸಾಕ್ಷ್ಯಗಳನ್ನು ಹಸ್ತಾಂತರಿಸುವಂತೆ ಶಿಮ್ಲಾ ಪೊಲೀಸರು ಪಟ್ಟು ಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಶೋಗಿ ಗಡಿಯಲ್ಲಿ ದೆಹಲಿ ಪೊಲೀಸರ ವಾಹನವೊಂದನ್ನು ಹಿಮಾಚಲ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಈ ವಾಹನದಲ್ಲಿ ಸಿಸಿಟಿವಿ ದೃಶ್ಯಾವಳಿಗಳು, ಡಿಜಿಟಲ್ ಸಾಕ್ಷ್ಯಗಳು ಮತ್ತು ಶಸ್ತ್ರಾಸ್ತ್ರಗಳಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
“ನಮಗೆ 18 ಗಂಟೆಗಳ ಟ್ರಾನ್ಸಿಟ್ ರಿಮಾಂಡ್ ಸಿಕ್ಕಿದೆ, ಈಗಾಗಲೇ ಅದರಲ್ಲಿ 4.5 ಗಂಟೆ ವ್ಯರ್ಥವಾಗಿದೆ. ಆರೋಪಿಗಳ ಸುರಕ್ಷತೆ ನಮ್ಮ ಜವಾಬ್ದಾರಿ,” ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ವಾದಿಸಿದ್ದಾರೆ.
ಇದೀಗ ದೆಹಲಿ ತಂಡದ ಕೆಲವು ಸದಸ್ಯರು ತನಿಖೆಗೆ ಸಹಕರಿಸಲು ಶಿಮ್ಲಾದಲ್ಲೇ ಉಳಿಯಬೇಕು ಎಂದು ಸ್ಥಳೀಯ ಪೊಲೀಸರು ಸೂಚಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸದ್ಯದ ಮಾಹಿತಿ ಪ್ರಕಾರ, ಎರಡೂ ರಾಜ್ಯಗಳ ಪೊಲೀಸ್ ಇಲಾಖೆಗಳು ಈ ಬಗ್ಗೆ ಅಧಿಕೃತವಾಗಿ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ವರದಿಗಾರರು ಸ್ಥಳದಲ್ಲಿದ್ದು ಪಡೆದ ಮಾಹಿತಿಯಿದು ಎಂದು ಪಿಟಿಐ ವರದಿ ಮಾಡಿದೆ.





