ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಬಗ್ಗೆ ಪ್ರಸಿದ್ಧ ನಟ, ಮಕ್ಕಳ್ ನೀಧಿ ಮೈಯಂ (ಎಂಎನ್ಎಂ) ಸಂಸ್ಥಾಪಕ ಅಧ್ಯಕ್ಷ, ಸಂಸದ ಕಮಲ್ ಹಾಸನ್ ಕಳವಳ ವ್ಯಕ್ತಪಡಿಸಿದ್ದಾರೆ. “ಈ ಪ್ರಕ್ರಿಯೆಯ ಮೂಲಕ ಚುನಾವಣಾ ಆಯೋಗವು ಜನರ ಮತದಾನದ ಹಕ್ಕನ್ನು ದುರ್ಬಲಗೊಳಿಸುತ್ತಿದೆ. ಈ ರೋಗ ದೇಶಾದ್ಯಂತ ಹರಡುವುದನ್ನು ಸಹಿಸಲಾಗದು” ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಸಂಸದ ಕಮಲ್ ಹಾಸನ್, “ಆಯೋಗವು ಚುನಾವಣಾ ಪ್ರಕ್ರಿಯೆಯಲ್ಲಿ ಜನರು ಸಕ್ರಿಯವಾಗಿ ಭಾಗಿಯಾಗುವಂತೆ ನೋಡಿಕೊಳ್ಳುವುದರ ಬದಲಾಗಿ ಜನರ ಮತದಾನದ ಹಕ್ಕನ್ನು ಮಾತ್ರ ಪರಿಶೀಲಿಸುತ್ತಿದೆ. ನಾನು ಇದನ್ನು ‘ಜೀವಂತವಾಗಿದ್ದೂ ಸತ್ತವರ ಬಗ್ಗೆ ಪರಿಶೀಲನೆ ನಡೆಸುವ ಕಥೆ’ ಎಂದು ಕರೆಯುತ್ತೇನೆ. ಚುನಾವಣಾ ಆಯೋಗ ನಮ್ಮ ಹಕ್ಕನ್ನು ಪರಿಶೀಲಿಸುವ ಬದಲು ಕಾಗುಣಿತ, ವಿಳಾಸವನ್ನು ಪರಿಶೀಲಿಸುತ್ತಿದೆ. ಅದು ಕೂಡಾ ತಪ್ಪಾಗಿ ಪರಿಶೀಲನೆ ನಡೆಸುತ್ತಿದೆ” ಎಂದು ದೂರಿದರು.
ಇದನ್ನು ಓದಿದ್ದೀರಾ? ದೇಶ ವಿಭಜಿಸಲು, ಸೌಹಾರ್ದತೆ ಕದಡಲು ಸಿಎಎ ಜಾರಿ: ನಟ ಕಮಲ್ ಹಾಸನ್
“ಸದ್ಯ ನನ್ನ ಕಾಳಜಿ ಇರುವುದು ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಯ ಬಗ್ಗೆ. ಕಾಗುಣಿತ ತಪ್ಪುಗಳು ಭಾಷೆಯ ಆಯಾಮದಲ್ಲಿ ಮಾತ್ರ ಕೆಟ್ಟದು. ಆಧುನಿಕ ಸಾಹಿತ್ಯವು ಈ ತಪ್ಪನ್ನು ಕ್ಷಮಿಸುತ್ತದೆ. ಇಂಟರ್ನೆಟ್ ಕೂಡ ಹಾಗೆ ಮಾಡುತ್ತದೆ. ಆದರೆ ಚುನಾವಣಾ ಆಯೋಗ ಮಾತ್ರ ಈ ಕಾಗುಣಿತ ತಪ್ಪನ್ನು ಕ್ಷಮಿಸುವುದಿಲ್ಲ” ಎಂದು ಟೀಕಿಸಿದ್ದಾರೆ.
“ಚುನಾವಣಾ ಆಯೋಗ ಎಂದರೆ ಇಂಗ್ಲಿಷ್ ತರಬೇತುದಾರರು ಎಂಬ ಅರ್ಥವಲ್ಲ. ಬಿಹಾರ ಇದೀಗ ಜೀವಂತವಾಗಿದ್ದರೂ ಸತ್ತವರ ನೆಲವಾಗಿದೆ. ಈ ರೋಗವು ದೇಶಾದ್ಯಂತ ಹರಡುವುದನ್ನು ಸಹಿಸಲಾಗದು. ಇಸಿಐ ಖಂಡಿತವಾಗಿಯೂ ಈ ರೋಗ ಹರಡಲು ಸಹಾಯ ಮಾಡುತ್ತಿದೆ” ಎಂದೂ ಆರೋಪಿಸಿದರು.
ಇನ್ನು ಸುಪ್ರೀಂ ಕೋರ್ಟ್ನಲ್ಲಿ ಎಸ್ಐಆರ್ ವಿರುದ್ಧ ಅರ್ಜಿ ಸಲ್ಲಿಸಿ, ತಮ್ಮ ಪರವಾಗಿ ತಾವೇ ವಾದಕ್ಕಿಳಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿದ ಕಮಲ್ ಹಾಸನ್, “ಪಶ್ಚಿಮ ಬಂಗಾಳದ ನನ್ನ ದೀದಿ ಕೂಡ ಇಸಿಐ ಕಚೇರಿಯಲ್ಲಿ ಇದೇ ರೀತಿ ವಿಷಾದಿಸಿದರು. ಅವರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ” ಎಂದು ಹೇಳಿದರು.





