2014ರಲ್ಲಿ ಚುನಾವಣಾ ಪ್ರಚಾರಕ್ಕೆ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಪ್ರಮುಖ ವಿಚಾರವಾಗಿದ್ದು ಬೆಲೆ ಏರಿಕೆ. ಕಾಂಗ್ರೆಸ್ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ, ನಾವು ಬೆಲೆ ಇಳಿಸುತ್ತೇವೆ ಎಂದು ಹೇಳಿಕೊಂಡು ಗದ್ದುಗೆ ಹಿಡಿದ ಪ್ರಧಾನಿ ಮೋದಿ ಮಾಡಿದ್ದೇನು?
ಪ್ರಸ್ತುತ ದೇಶದಲ್ಲಿ ಬಡ, ಮಧ್ಯಮ ಕುಟುಂಬಕ್ಕೆ ಅತೀ ದೊಡ್ಡ ಸಮಸ್ಯೆಯಾಗಿರುವುದು ಬೆಲೆ ಏರಿಕೆ. ಪೆಟ್ರೋಲ್, ಡಿಸೇಲ್, ಇತರೆ ಅಗತ್ಯ ವಸ್ತುಗಳ ಬೆಲೆಯು ಏರಿಕೆಯಾಗುತ್ತಲೇ ಸಾಗುತ್ತಿರುವ ನಡುವೆ 14 ವರ್ಷಗಳಿಂದ ಸ್ಥಿರವಾಗಿದ್ದ ಬೆಂಕಿ ಪೊಟ್ಟಣ ಬೆಲೆಯೂ ಕೂಡಾ ಶೇಕಡ 100ರಷ್ಟು ಹೆಚ್ಚಳವಾಗಿದೆ.
ಭಾರತದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಲು ಉಕ್ರೇನ್-ರಷ್ಯಾ ಯುದ್ಧ, ಕೋವಿಡ್, ಇತರೆ ಜಾಗತಿಕ ಪರಿಸ್ಥಿತಿಗಳು ಕಾರಣ ಎಂದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ನಿರಂತರವಾಗಿ ಹೇಳುತ್ತಾ ಬರುತ್ತಿದೆ. ಆದರೆ ಪ್ರಸ್ತುತ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್ಗೆ 85 ಡಾಲರ್ನ ಆಸುಪಾಸಿಗೆ ಕುಸಿದರೂ ಕೂಡಾ ಇಂಧನ ಬೆಲೆ ಮಾತ್ರ ಇಳಿಕೆಯಾಗಿಲ್ಲ.
2014ರಲ್ಲಿ ಚುನಾವಣಾ ಪ್ರಚಾರಕ್ಕೆ ನರೇಂದ್ರ ಮೋದಿ ಅವರಿಗೆ ಮತ್ತು ಬಿಜೆಪಿಗೆ ಪ್ರಮುಖ ವಿಚಾರವಾಗಿದ್ದು ಬೆಲೆ ಏರಿಕೆ. ಕಾಂಗ್ರೆಸ್ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ, ನಾವು ಬೆಲೆ ಇಳಿಸುತ್ತೇವೆ ಎಂದು ಹೇಳಿಕೊಂಡು ಗದ್ದುಗೆಯನ್ನು ಹಿಡಿದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಇಂಧನ ಬೆಲೆ ಹೆಚ್ಚಿಸಿದೆ.
ಇದನ್ನು ಓದಿದ್ದೀರಾ? ‘ಈ ದಿನ’ ಸಮೀಕ್ಷೆ | ಗ್ಯಾರಂಟಿ ಯೋಜನೆ ಬೆಂಬಲಿಸಿ ಕಾಂಗ್ರೆಸ್ಗೆ ಮತ ಹಾಕ್ತೀರಾ, ಜನರು ಹೇಳೋದೇನು?
ಸರ್ಕಾರದ ಡೇಟಾ ಪ್ರಕಾರ 2014ರ ಜನವರಿಯಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ಗೆ 105.29 ಡಾಲರ್ಗೆ ಏರಿಕೆಯಾಗಿದ್ದು, ಈ ವೇಳೆ ಭಾರತದಲ್ಲಿಯೂ ಇಂಧನ ಬೆಲೆ ಹೆಚ್ಚಿಸಲಾಗಿತ್ತು. ಪೆಟ್ರೋಲ್ ಮತ್ತು ಡಿಸೇಲ್ ದರವು ಕ್ರಮವಾಗಿ 71.52 ರೂ. ಮತ್ತು 53.78 ರೂಪಾಯಿಗೆ ತಲುಪಿತ್ತು. ಆದರೆ ಡಿಸೆಂಬರ್ ವೇಳೆಗೆ ಬ್ರೆಂಟ್ ಕಚ್ಚಾ ತೈಲ ಬೆಲೆ 61.21 ಡಾಲರ್ಗೆ ಕುಸಿದಿದ್ದು ಭಾರತದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಕ್ರಮವಾಗಿ 63.33 ರೂ. ಮತ್ತು 52.51 ರೂ. ಗೆ ಇಳಿಸಲಾಗಿತ್ತು.
ಆದರೆ ಇಂಧನ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಹೆಚ್ಚಿಸುತ್ತಿದೆ ಎಂದು ಹೇಳಿಕೊಂಡು ಅಧಿಕಾರವನ್ನು ಪಡೆದುಕೊಂಡ ಮೋದಿ ಸರ್ಕಾರವು ಕಳೆದ ಹತ್ತು ವರ್ಷದಲ್ಲಿ ಭಾರೀ ಬೆಲೆ ಏರಿಕೆ ಮಾಡಿದೆ. ಪ್ರಸ್ತುತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 99.84 ರೂಪಾಯಿ ಆಗಿದ್ದರೆ, ಡಿಸೇಲ್ ಬೆಲೆ 85.93 ರೂಪಾಯಿ ಆಗಿದೆ. ಇನ್ನು ಸುಂಕಕ್ಕೆ ಅನುಗುಣವಾಗಿ ಇತರೆ ರಾಜ್ಯಗಳಲ್ಲಿ ಇಂಧನ ಬೆಲೆ 100 ರೂ. ಗಡಿ ದಾಟಿದೆ.
ಇನ್ನು ನಾವು ಅಡುಗೆ ಮತ್ತು ವಾಣಿಜ್ಯ ಅನಿಲ ಬೆಲೆಯ ಕಡೆ ಗಮನ ಹರಿಸಿದರೆ ಅದರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ನೀಡುವ ಅವಶ್ಯಕತೆಯೇ ಇಲ್ಲ. 2014ರಲ್ಲಿ 450 ರೂಪಾಯಿ ಆಸುಪಾಸಿನಲ್ಲಿದ್ದ ಗೃಹ ಬಳಕೆಯ ಎಲ್ಪಿಜಿ ಬೆಲೆಯು ಒಂದು ಸಾವಿರ ರೂಪಾಯಿಯ ಗಡಿಯನ್ನು ದಾಟಿತ್ತು. ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರವು ಸುಂಕ ಕಡಿಮೆ ಮಾಡಿ ಎಲ್ಪಿಜಿ ಬೆಲೆಯನ್ನು 803 ರೂಪಾಯಿಗೆ ಇಳಿಸಿದೆ. ಆದರೆ 450 ರೂ.ಗೂ 803 ರೂ. ನಡುವೆ ಬಹಳ ವ್ಯತ್ಯಾಸವಿದೆ.
ಇವೆರಡು ಪ್ರಮುಖ ಬೆಲೆ ಏರಿಕೆಗಳಾದರೆ ಇನ್ನೂ ಹಲವಾರು ವಸ್ತುಗಳ, ಆಹಾರ ಪದಾರ್ಥಗಳ ದರ ಗಗನಕ್ಕೇರಿದೆ. ಜಿಎಸ್ಟಿ ಜಾರಿಗೆ ತಂದು ತೆರಿಗೆಯನ್ನೂ ಕೂಡಾ ಹೆಚ್ಚಿಸಲಾಗಿದೆ. ಇದರಿಂದಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಜನರು ದಿನ ನಿತ್ಯ ಅಡುಗೆಗೆ ಬಳಸುವ ಅಕ್ಕಿ, ಗೋಧಿ, ಅಡುಗೆ ಎಣ್ಣೆ, ಸಕ್ಕರೆ, ಚಹಾ ಪುಡಿ, ಈರುಳ್ಳಿ, ಟೊಮೆಟೊ, ಇತರೆ ವಸ್ತುಗಳ ಬೆಲೆಯೂ ಗಗನಕ್ಕೇರಿದೆ.
ಬೆಲೆ ಏರಿಕೆಗೆ ಯಾರು ಹೆಚ್ಚು ಕಾರಣ?
ಲೋಕಸಭೆ ಚುನಾವಣೆಗೂ ಮುನ್ನ ‘ಈದಿನ.ಕಾಮ್’ ಸಮೀಕ್ಷೆಯನ್ನು ನಡೆಸಿದ್ದು, ಕಳೆದ ಹತ್ತು ವರ್ಷದಲ್ಲಿ ಆಗಿರುವ ಬೆಲೆ ಏರಿಕೆಗೆ ಯಾರು ಕಾರಣವೆಂದು ಜನರಲ್ಲಿ ಪ್ರಶ್ನಿಸಲಾಗಿದೆ. ಈ ಸಮೀಕ್ಷೆಯಲ್ಲಿ ಬಹುತೇಕರು ಬಿಜೆಪಿಯೇ ಕಾರಣ ಎಂದು ಹೇಳಿದರೆ, ಇನ್ನುಳಿದವರು ಯಾರೂ ಇಲ್ಲ, ಎಲ್ಲರೂ, ಕಾಂಗ್ರೆಸ್, ಜೆಡಿಎಸ್, ಗೊತ್ತಿಲ್ಲ ಎಂದಿದ್ದಾರೆ. ಪ್ರಮುಖವಾಗಿ ಸುಮಾರು ಶೇಕಡ 44.17ರಷ್ಟು ಜನರು ಬೆಲೆ ಏರಿಕೆಗೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ.
ಉದ್ಯೋಗವಾರು ವಿವರ ಹೀಗಿದೆ
ಪ್ರಮುಖವಾಗಿ ಮಾಸಿಕವಾಗಿ 25 ಸಾವಿರ ರೂಪಾಯಿಗೂ ಅಧಿಕ ಆದಾಯವನ್ನು ಪಡೆಯುವ ದೊಡ್ಡ ವ್ಯಾಪಾರಿಗಳ (ದೊಡ್ಡ ಅಂಗಡಿ, ಡಾಕ್ಟರ್, ವಕೀಲ ಇತ್ಯಾದಿ) ಪೈಕಿ ಶೇಕಡ 52ರಷ್ಟು ಜನರು ಬೆಲೆ ಏರಿಕೆಗೆ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. ಹಾಗೆಯೇ 50 ಸಾವಿರಕ್ಕೂ ಅಧಿಕ ಆದಾಯ ಪಡೆಯುವ ದೊಡ್ಡ ವ್ಯಾಪಾರಿಗಳಲ್ಲಿ ಶೇಕಡ 48ಕ್ಕೂ ಅಧಿಕ ಜನರು ಕೂಡಾ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.

ವಯೋವಾರು ವಿವರ
ವಯಸ್ಸಿನ ಆಧಾರದಲ್ಲಿ ನಾವು ನೋಡಿದಾಗ ಬೆಲೆ ಏರಿಕೆಗೆ ಬಿಜೆಪಿಯೇ ಕಾರಣ ಎಂದು ಬಹುತೇಕ ಎಲ್ಲಾ ವಯೋಮಾನದವರು ಅಭಿಪ್ರಾಯಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ 25-35ರ ನಡುವೆ ವಯಸ್ಸಿನ ಯುವಕರಲ್ಲಿ ಶೇಕಡ 46.50ರಷ್ಟು ಜನರು ಬೆಲೆ ಏರಿಕೆಯಾಗಲು ಅಧಿಕವಾಗಿ ಬಿಜೆಪಿ ಕಾರಣ ಎಂದು ಅಭಿಪ್ರಾಯಿಸಿದ್ದಾರೆ.

ಶೈಕ್ಷಣಿಕ ವಿವರ ಇಲ್ಲಿದೆ
ಶಿಕ್ಷಣದ ಆಧಾರದಲ್ಲಿ ನೋಡಿದಾಗ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದವರ ಪೈಕಿ ಬಹುತೇಕರು ಬೆಲೆ ಏರಿಕೆಗೆ ಬಿಜೆಪಿ ಅಧಿಕವಾಗಿ ಕಾರಣವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಇನ್ನು ವಿದ್ಯಾಭ್ಯಾಸ ಹೊಂದಿರದವರ ಪೈಕಿ ಹೆಚ್ಚು ಜನರ ಅಭಿಪ್ರಾಯ ಕೂಡಾ ಇದೇ ಆಗಿದೆ.

ಲಿಂಗಾವಾರು ವಿವರ
ಲಿಂಗಾವಾರು ನೋಡಿದಾಗ ಲಿಂಗತ್ವ ಅಲ್ಪಸಂಖ್ಯಾತರು ಹೆಚ್ಚಾಗಿ ಬೆಲೆ ಏರಿಕೆಗೆ ಬಿಜೆಪಿ ಅಧಿಕವಾಗಿ ಕಾರಣ ಎಂದು ಹೇಳುತ್ತಾರೆ. ಶೇಕಡ 43.99 ಮಹಿಳೆಯರು ಬಿಜೆಪಿ ಕಾರಣ ಎಂದರೆ ಶೇಕಡ 22.02ರಷ್ಟು ಮಹಿಳೆಯರು ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ ಎಂದಿದ್ದಾರೆ.

ಒಟ್ಟಾರೆಯಾಗಿ ಎಲ್ಲ ವಯಸ್ಸು, ಉದ್ಯೋಗ, ವಿದ್ಯಾರ್ಹತೆಯನ್ನು ನೋಡಿದಾಗ ದೇಶದಲ್ಲಿ ಬೆಲೆ ಏರಿಕೆಯಾಗಲು ಬಿಜೆಪಿ ಅಧಿಕವಾಗಿ ಕಾರಣ ಎಂದು ಹೇಳಿರುವವರ ಪ್ರಮಾಣ ಹೆಚ್ಚಾಗಿದೆ. ಇನ್ನು ಬಿಜೆಪಿ ಬಳಿಕ ಕಾಂಗ್ರೆಸ್ ಮತ್ತು ಎಲ್ಲರೂ ಕಾರಣ ಎಂದು ಹೇಳುವವರ ಪ್ರಮಾಣ ಒಟ್ಟು ಶೇಕಡ 20ಕ್ಕಿಂತ ಅಧಿಕವಾಗಿದೆ. ಜನರಿಗೆ ಕಳೆದ ಹತ್ತು ವರ್ಷದ ಅವಧಿಯ ಬಿಜೆಪಿ ಆಡಳಿತದಲ್ಲಿ ಆಗಿರುವ ಎಲ್ಪಿಜಿ, ಇಂಧನ, ಇತರೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿರುವುದು ‘ಈದಿನ.ಕಾಮ್’ ಸಮೀಕ್ಷೆಯಲ್ಲಿ ಕಂಡು ಬರುತ್ತದೆ.





