ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿಚಾರವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ವಿರುದ್ಧ ಮತ್ತೆ ಗುಡುಗಿದ್ದಾರೆ. ಚುನಾವಣಾ ಆಯೋಗವು ‘ತುಘಲಕ್ ಆಯೋಗವಾಗಿದೆ. ಹಿಟ್ಲರ್ ರೀತಿ ದೌರ್ಜನ್ಯ-ದಬ್ಬಾಳಿಕೆ ನಡೆಸುತ್ತಿದೆ’ ಎಂದು ಆರೋಪಿಸಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ, “ಇದು ಎಲೆಕ್ಷನ್ ಕಮಿಷನ್ ಅಲ್ಲ, ಟಾರ್ಚರ್ ಕಮಿಷನ್. ಚುನಾವಣಾ ಆಧಿಕಾರಿಗಳು ತುಘಲಕ್ ರೀತಿ ವರ್ತಿಸುತ್ತಿದ್ದಾರೆ. ಹಿಟ್ಲರ್ನಂತೆ ದೌರ್ಜನ್ಯ ಎಸಗುತ್ತಿದ್ದಾರೆ. ಆಯೋಗದ ಕ್ರಮಗಳು ಅತ್ಯಂತ ಕ್ರೂರ ಮತ್ತು ಅನಿಯಂತ್ರಿತವಾಗಿವೆ” ಎಂದು ಆರೋಪಿಸಿದ್ದಾರೆ.
“ಆಯೋಗವು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಬಿಜೆಪಿಯ ಕಾರ್ಯಕರ್ತನಂತೆ ವರ್ತಿಸುತ್ತಿದ್ದಾರೆ. ಅನ್ಯಾಯದೊಂದಿಗೆ ಬಿಜೆಪಿ ಪ್ರಯೋಜನ ನೀಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ತುಘಲಕ್ನಂತೆ ವರ್ತಿಸುತ್ತಿರುವ ಆಯೋಗವು ಬಿಹಾರದಲ್ಲಿ ಸ್ವೀಕರಿಸಲಾದ ‘ಆವಾಸ ಯೋಜನೆ ಪ್ರಮಾಣಪತ್ರ’ಗಳಂತ ದಾಖಲೆಗಳನ್ನು ಬಂಗಾಳದಲ್ಲಿ ತಿರಸ್ಕರಿಸಿದೆ. ಬಿಹಾರದಲ್ಲಿ ಸ್ವೀಕಾರ್ಯವಾದ ದಾಖಲೆಗಳು ಬಂಗಾಳದಲ್ಲಿ ಏಕೆ ಅಮಾನ್ಯ? ಏಕೆ ಬಂಗಾಳವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಜನರಿಗಾಗಿ ಹೋರಾಡಲು ನಾವು ಸಿದ್ದರಿದ್ದೇವೆ. ನಾನು ಜೈಲಿಗೆ ಹೋಗಲು ಸಿದ್ಧಳಾಗಿದ್ದೇನೆ. ನನ್ನನ್ನು ಕೊಲ್ಲಬೇಕಿದ್ದರೆ ಕೊಲ್ಲಿ. ಜನರಿಗಾಗಿ ಯಾವುದೇ ಬಲಿದಾನಕ್ಕೆ ಸಿದ್ಧ” ಎಂದು ಘೋಷಿಸಿದ್ದಾರೆ.” ಎಂದು ಪ್ರಶ್ನಿಸಿದ್ದಾರೆ.
ಬಾಂಗ್ಲಾದೇಶದ ಚುನಾವಣೆಯನ್ನು ಉದಾಹರಣೆಯಾಗಿ ನೀಡಿದ ಮಮತಾ, “ನಾವು ಬಾಂಗ್ಲಾದೇಶದ ಚುನಾವಣೆಯ ಬಗ್ಗೆ ಚಿಂತಿತರಾಗಿದ್ದೆವು. ಆದರೆ ಅವರು ಶಾಂತಿಯುತವಾಗಿ, ಸ್ವತಂತ್ರವಾಗಿ ಹಾಗೂ ನ್ಯಾಯಯುತವಾಗಿ ಚುನಾವಣೆ ನಡೆಸಿದ್ದಾರೆ. ನಮ್ಮ ದೇಶದಲ್ಲಿ ತಳ ಮತ್ತು ಹಿಂದುಳಿದ ಸಮುದಾಯಗಳನ್ನು ಬುಲ್ಡೋಜ್ ಮಾಡುತ್ತಿದ್ದಾರೆ. ಭಾರತದ ಚುನಾವಣಾ ಆಯೋಗವು ಬಾಂಗ್ಲಾದೇಶದಿಂದ ಪಾಠ ಕಲಿಯಬೇಕು” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಬಾಂಗ್ಲಾದೇಶ | ದೇಶದ ಉದಯವನ್ನೇ ವಿರೋಧಿಸಿದ್ದ ಪಕ್ಷಕ್ಕೆ ಪ್ರತಿಪಕ್ಷ ಸ್ಥಾನ
ಅಂದಹಾಗೆ, ಬಾಂಗ್ಲಾದೇಶದಲ್ಲಿ ಫೆಬ್ರವರಿ 12, ಸಂಸತ್ತಿನ ಚುನಾವಣೆ ನಡೆದಿದೆ. 2024ರ ಜನ್-ಝಡ್ ಪ್ರತಿಭಟನೆಯಿಂದಾಗಿ ಶೇಖ್ ಹಸೀನಾ ಅವರ ಆಡಳಿತವನ್ನು ಉರುಳಿಸಿದ ಬಳಿಕ ನಡೆದ ಬೃಹತ್ ಚುನಾವಣಾ ಇದಾಗಿತ್ತು. ಈ ಚುನಾವಣೆಯು ಇತ್ತೀಚಿನ ದಶಕಗಳಲ್ಲಿ ನಡೆದ ಅತ್ಯಂತ ಶಾಂತಿಯುತ ಮತ್ತು ನ್ಯಾಯಯುತ ಚುನಾವಣಗಳಲ್ಲಿ ಒಂದು ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ.
ಬಾಂಗ್ಲಾದೇಶ ಚುನಾವಣಾ ಆಯೋಗವು ಮತದಾನವನ್ನು ಸರಳವಾಗಿ, ನಿಷ್ಪಕ್ಷವಾಗಿ ನಿರ್ವಹಿಸಿದೆ. ಮತದಾನ ಪ್ರಮಾಣವು ಸುಮಾರು 59-60% ಆಗಿದೆ. ಚುನಾವಣೆಯ ಸಮಯದಲ್ಲಿ ಹಿಂಸಾಚಾರಗಳು ನಡೆದಿಲ್ಲ. ಚುನಾವಣೆಯಲ್ಲಿ ಮುಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ (ಬಿಎನ್ಪಿ) 211 ಸ್ಥಾನಗಳೊಂದಿಗೆ ಗೆಲುವು ಸಾಧಿಸಿದೆ. ಜಮಾತ್-ಎ-ಇಸ್ಲಾಮಿ 68-77 ಸ್ಥಾನಗಳನ್ನು ಗಳಿಸಿದೆ. ಹಸೀನಾ ಅವರ ಅವಾಮಿ ಲೀಗ್ಅನ್ನು ಚುನಾವಣೆಯಿಂದ ಹೊರಗಿಡಲಾಗಿತ್ತು.
ಈ ಚುನಾವಣೆಯು ಬಾಂಗ್ಲಾದೇಶವು ಪ್ರಜಾಪ್ರಭುತ್ವಕ್ಕೆ ಮರಳುವಿಕೆಯ ಸಂಕೇತವೆಂದು ಪರಿಗಣಿಸಲಾಗಿದೆ. ಮಮತಾ ಅವರು ಇದನ್ನು ಉಲ್ಲೇಖಿಸಿ ಭಾರತದ ಆಯೋಗವು ನಿಷ್ಪಕ್ಷವಾಗಿ, ಭಯರಹಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.





