ಚುನಾವಣಾ ಬಾಂಡ್ ಯೋಜನೆ ಕುರಿತು ಸುಪ್ರೀಂ ಕೋರ್ಟ್ ತನ್ನ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, “ಚುನಾವಣಾ ಬಾಂಡ್ಗಳಿಂದ ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರವು ಐದು ವರ್ಷಗಳಲ್ಲಿ ₹6,065 ಕೋಟಿ ನಗದೀಕರಣ ಮಾಡಿಕೊಂಡಿದೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
“ಕಪ್ಪು ಹಣವನ್ನು ಮರಳಿ ತರುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿದ್ದಾರೆ. ಅದನ್ನು ಮರೆಮಾಚಲು ಇದೀಗ ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಚುನಾವಣಾ ಬಾಂಡ್ಗಳ ಹೆಸರಿನಲ್ಲಿ ಬಿಜೆಪಿ ಸರ್ಕಾರವು ಖಾಸಗಿ ಕಂಪನಿಗಳಿಂದ 4 ಮಾರ್ಗಗಳಲ್ಲಿ ದೇಣಿಗೆ ಸಂಗ್ರಹಿಸಿದೆ ಎಂದು ಜೈರಾಮ್ ವಿವರಿಸಿದ್ದಾರೆ.
“ಮೊದಲನೆಯದು, ʼದೇಣಿಗೆ ಕೊಡಿ ಗುತ್ತಿಗೆ ತೆಗೆದುಕೊಳ್ಳಿʼ. ಎರಡನೆಯದು, ʼದೇಣಿಗೆ ಕೊಡಿ ಒಳಗಡೆ ಸೇರಿಕೊಳ್ಳಿʼ ಎಂಬುದು ಪೋಸ್ಟ್ಪೇಯ್ಡ್ ವ್ಯವಸ್ಥೆಯಾಗಿದ್ದು, ಮೊದಲು ನೀವು ಒಪ್ಪಂದ ಮಾಡಿಕೊಳ್ಳುತ್ತೀರಿ ನಂತರ ಲಂಚ ನೀಡಿʼ ಎಂಬುದಾಗಿದೆ. ಮೂರನೆಯದು, ʼಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಕೇಂದ್ರ ತನಿಖಾ ಸಂಸ್ಥೆಯಿಂದ (ಸಿಬಿಐ) ದಾಳಿ ನಡೆಸುವುದು. ದಾಳಿಯಿಂದ ತಪ್ಪಿಸಿಕೊಳ್ಳಲು ಈ ಕಂಪನಿಗಳು ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ದೇಣಿಗೆ ನೀಡುವುದಾಗಿದೆ. ನಾಲ್ಕನೇ ಮಾರ್ಗವೆಂದರೆ ನಿಷ್ಕ್ರಿಯಗೊಂಡ ಕಂಪನಿಗಳನ್ನು ಬಳಸಿಕೊಳ್ಳುವುದಾಗಿದೆ” ಎಂದು ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.
“ಚುನಾವಣಾ ಬಾಂಡ್ಗಳ ಮೂಲಕ ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿ ತಮ್ಮ ಖಾತೆಗೆ ತುಂಬಿಸಿಕೊಂಡಿರುವ ಬಿಜೆಪಿ ಬಗ್ಗೆ ಚುನಾವಣಾ ಆಯೋಗ ಮೌನವಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ” ಎಂದು ಟೀಕಿಸಿದ್ದಾರೆ.
“ಬಿಜೆಪಿ ವಿಶಿಷ್ಟ ಗುರುತು ಸಂಖ್ಯೆ ಬಿಡುಗಡೆ ಮಾಡಿದ್ದು, ಇದರಿಂದ ದೇಣಿಗೆ ನೀಡಿದವರನ್ನು ಪಕ್ಷಗಳೊಂದಿಗೆ ಸೇರಿಸಿಕೊಳ್ಳಲು 15 ಸೆಕೆಂಡುಗಳಿಗಿಂತ ಕಡಿಮೆ ಸಮಯ ತೆಗೆದುಕೊಂಡಿತ್ತು. ಆದರೆ, ಸುಪ್ರೀಂ ಕೋರ್ಟ್ ಕೇಳಿದ ಡೇಟಾವನ್ನು ಒದಗಿಸಲು ಎಸ್ಬಿಐ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುವುದಾಗಿ ಹೇಳಿರುವುದು ಹಾಸ್ಯಾಸ್ಪದ ಹೇಳಿಕೆ” ಎಂದು ಕಿಡಿಕಾರಿದರು.
“ವಿಶಿಷ್ಟ ಗುರುತು ಸಂಖ್ಯೆ ಸೇರಿದಂತೆ ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದ ಸಮಗ್ರ ವಿವರವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಒದಗಿಸಿದ್ದು, ಚುನಾವಣಾ ಆಯೋಗ ವೆಬ್ಸೈಟ್ನಲ್ಲಿ ಇದನ್ನು ಪ್ರಕಟಿಸಿದೆ. ಬಾಂಡ್ಗಳಿಗೆ ನೀಡಲಾಗಿರುವ ವಿಶಿಷ್ಟ ಗುರುತು ಸಂಖ್ಯೆಯಿಂದ ನಿರ್ದಿಷ್ಟ ಬಾಂಡ್ ಅನ್ನು ಯಾರು ಖರೀದಿಸಿದ್ದಾರೆ ಹಾಗೂ ಅದನ್ನು ಯಾವ ಪಕ್ಷ ನಗದೀಕರಣ ಮಾಡಿಕೊಂಡಿದೆ ಎಂಬುದು ಬಹಿರಂಗವಾಗಲಿದೆ” ಎಂದು ಹೇಳಿದರು.
“ಕೇಂದ್ರ ಅಥವಾ ಬಿಜೆಪಿ ರಾಜ್ಯ ಸರ್ಕಾರಗಳಿಂದ 179 ಪ್ರಮುಖ ಒಪ್ಪಂದಗಳು ಮತ್ತು ಯೋಜನೆಗಳ ಅನುಮೋದನೆಗಳನ್ನು ಪಡೆದ 38 ಕಾರ್ಪೊರೇಟ್ ಗುಂಪುಗಳು ಚುನಾವಣಾ ಬಾಂಡ್ಗಳನ್ನು ದೇಣಿಗೆ ನೀಡಿರುದಾಗಿ ಚುನಾವಣಾ ಆಯೋಗವನ್ನು ಬಳಸಿಕೊಂಡು ವಿಶ್ಲೇಷಿಸಿದಾಗ ಬೆಳಕಿಗೆ ಬಂದಿದೆ” ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
“ಈ ಕಂಪನಿಗಳು ಯೋಜನೆಗಳು ಮತ್ತು ಒಪ್ಪಂದಗಳಲ್ಲಿ ಒಟ್ಟು 3.8 ಲಕ್ಷ ಕೋಟಿ ರೂ.ಗಳನ್ನು ಪಡೆದುಕೊಂಡಿವೆ. ಇದಕ್ಕೆ ಪ್ರತಿಯಾಗಿ ಬಿಜೆಪಿಗೆ ಚುನಾವಣಾ ಬಾಂಡ್ ದೇಣಿಗೆಯಾಗಿ ₹2,004 ಕೋಟಿ ನೀಡಲಾಗಿದೆ. ಇದರ ಅಡಿಯಲ್ಲಿ ಎರಡು ವಿಭಾಗಗಳಿವೆ. ಅವುಗಳೆಂದರೆ ಪ್ರಿಪೇಯ್ಡ್ ಲಂಚ ಮತ್ತು ಪೋಸ್ಟ್ ಪೇಯ್ಡ್ ಲಂಚ” ಎಂದು ವ್ಯಂಗ್ಯವಾಡಿದರು.
#WATCH | On electoral bond, Congress MP Jairam Ramesh says, ” …BJP govt used private companies…there were 4 ways for this scam. The first was, ‘Chanda do dhandha lo’… the second way is ‘theka lo ghus do’, which is postpaid, you get a contract first and then you give the… pic.twitter.com/NYKYx3Md3e
— ANI (@ANI) March 23, 2024
“ದೇಣಿಗೆ ನೀಡಿದ ಮೂರು ತಿಂಗಳೊಳಗೆ ಕೇಂದ್ರ ಅಥವಾ ಬಿಜೆಪಿ ರಾಜ್ಯ ಸರ್ಕಾರಗಳು ನೀಡಿದ ಒಪ್ಪಂದಗಳು/ಯೋಜನಾ ಅನುಮೋದನೆಗಳಲ್ಲಿ ₹1.32 ಲಕ್ಷ ಕೋಟಿಗೆ ಬದಲಾಗಿ ಬಿಜೆಪಿಗೆ ₹551 ಕೋಟಿಯಷ್ಟು ದೇಣಿಗೆಯಾಗಿ ನೀಡಲಾಗಿದೆ” ಎಂದು ಆರೋಪಿಸಿದರು.
“ಕೇಂದ್ರ ಅಥವಾ ಬಿಜೆಪಿ ರಾಜ್ಯ ಸರ್ಕಾರಗಳು ₹62,000 ಕೋಟಿಗಳ ಒಪ್ಪಂದಗಳು/ಯೋಜನಾ ಅನುಮೋದನೆಗಳನ್ನು ನೀಡಿವೆ. ಇದಕ್ಕಾಗಿ ಅನುಮೋದನೆ/ಒಪ್ಪಂದದ ನಂತರ ಮೂರು ತಿಂಗಳಲ್ಲಿ ಬಿಜೆಪಿಗೆ ಚುನಾವಣಾ ಬಾಂಡ್ಗಳ ರೂಪದಲ್ಲಿ ₹580 ಕೋಟಿ ಪೋಸ್ಟ್ಪೇಯ್ಡ್ ಲಂಚ ನೀಡಲಾಗಿದೆ” ಎಂದು ಹೇಳಿದರು.
“ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅದಾನಿ ವಿಷಯದ ಬಗ್ಗೆ ಜೆಪಿಸಿ ರಚಿಸಲಾಗುವುದು ಮತ್ತು ಪಿಎಂ-ಕೇರ್ಸ್ ನಿಧಿಯ ಬಗ್ಗೆಯೂ ಎಸ್ಐಟಿ ಪರಿಶೀಲಿಸುತ್ತದೆ. 41 ಕಾರ್ಪೊರೇಟ್ ಗುಂಪುಗಳು ಒಟ್ಟು 56 ಇಡಿ, ಸಿಬಿಐ, ಐಟಿ ದಾಳಿಗಳನ್ನು ಎದುರಿಸಿದ್ದು, ಬಿಜೆಪಿಗೆ ₹2,592 ಕೋಟಿ ದೇಣಿಗೆ ನೀಡಿವೆ. ಅದರಲ್ಲಿ ₹1,853 ಕೋಟಿಯನ್ನು ದಾಳಿಯ ನಂತರ ನೀಡಲಾಗಿದೆ” ಎಂದು ಜೈರಾಮ್ ರಮೇಶ್ ಆರೋಪಿಸಿದರು.
“ಶೆಲ್ ಕಂಪನಿಗಳು ದೇಣಿಗೆ ನೀಡಿದ ಒಟ್ಟು ₹543 ಕೋಟಿಯಲ್ಲಿ 16 ಶೆಲ್ ಕಂಪನಿಗಳು ₹419 ಕೋಟಿಯನ್ನು ಬಿಜೆಪಿಗೆ ದೇಣಿಗೆ ನೀಡಿವೆ. ಮನಿ ಲಾಂಡರಿಂಗ್ಗಾಗಿ ಹಣಕಾಸು ಸಚಿವಾಲಯದ ಹೈ ರಿಸ್ಕ್ ವಾಚ್ ಲಿಸ್ಟ್ನಲ್ಲಿರುವ ಕಂಪನಿಗಳು, ರಚನೆಯಾದ ಕೆಲವೇ ತಿಂಗಳುಗಳಲ್ಲಿ ಕೋಟಿಗಟ್ಟಲೆ ದೇಣಿಗೆ ನೀಡುವ ಕಂಪನಿಗಳು ಮತ್ತು ತಮ್ಮ ಪಾವತಿಸಿದ ಷೇರು ಬಂಡವಾಳದ ಅನೇಕ ಪಟ್ಟು ದಾನ ಮಾಡುವ ಕಂಪನಿಗಳು ಇವುಗಳಲ್ಲಿ ಸೇರಿವೆ” ಎಂದು ಹೇಳಿದರು.
“ನಾವು ನೂರಾರು ಒಪ್ಪಂದಗಳು, ಯೋಜನಾ ಅನುಮತಿಗಳು, ಇಡಿ, ಐಟಿ, ಸಿಬಿಐ ದಾಳಿಗಳು ಮತ್ತು ಶೆಲ್ ಕಂಪನಿಗಳ ಸಂಪೂರ್ಣ, ಪರಿಶೀಲಿಸಿದ ಡೇಟಾಬೇಸ್ ಅನ್ನು ಒಟ್ಟುಗೂಡಿಸಿದ್ದೇವೆ. ಇವೆಲ್ಲವೂ ಬಿಜೆಪಿಯ ಚುನಾವಣಾ ಬಾಂಡ್ ದಾನಿಗಳ ಡೇಟಾಬೇಸ್ಗೆ ಎಚ್ಚರಿಕೆಯಿಂದ ಚಿತ್ರಿಸಲಾಗಿದೆ” ಎಂದು ರಮೇಶ್ ಹೇಳಿದರು.
ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ಚುನಾವಣಾ ಬಾಂಡ್ಗಳ ಅಧಿಕೃತ ಮಾರಾಟಗಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮಾರ್ಚ್ 12ರಂದು ಚುನಾವಣಾ ಆಯೋಗದೊಂದಿಗೆ ಡೇಟಾವನ್ನು ಹಂಚಿಕೊಂಡಿದೆ. ತನ್ನ ವೆಬ್ಸೈಟ್ನಲ್ಲಿ ಡೇಟಾವನ್ನು ಅಪ್ಲೋಡ್ ಮಾಡಲು ಸುಪ್ರೀಂ ಕೋರ್ಟ್ ಮಾರ್ಚ್ 15ರಂದು ಸಂಜೆ 5 ಗಂಟೆಯವರೆಗೆ ಚುನಾವಣಾ ಆಯೋಗಕ್ಕೆ ಸಮಯ ನೀಡಿತ್ತು.
2019 ಏಪ್ರಿಲ್ 1 ಮತ್ತು ಈ ವರ್ಷದ ಫೆಬ್ರವರಿ 15ರ ನಡುವೆ ದಾನಿಗಳಿಂದ ವಿವಿಧ ಮುಖಬೆಲೆಯ ಒಟ್ಟು 22,217 ಚುನಾವಣಾ ಬಾಂಡ್ಗಳನ್ನು ಖರೀದಿಸಿದ್ದಾರೆ. ಅದರಲ್ಲಿ 22,030 ಅನ್ನು ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡಿರುವುದಾಗಿ ಎಸ್ಬಿಐ ತಿಳಿಸಿದೆ.
ಐತಿಹಾಸಿಕ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು “ಅಸಾಂವಿಧಾನಿಕ” ಎಂದು ಕರೆದಿದ್ದು, ಖರೀದಿಸಿದ ಮತ್ತು ಬಾಂಡ್ಗಳಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಬಿಡುಗಡೆ ಮಾಡಲು ಆದೇಶಿಸಿತ್ತು.




