ದೇಶದ್ರೋಹಿ ಹೇಳಿಕೆ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುವೆ. ನನ್ನ ವಿರುದ್ಧ ಇಂತಹ ನೂರು ಎಫ್ಐಆರ್ ಹಾಕಿದರು ನಾನು ಹೆದರಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ” ದೇಶದ್ರೋಹಿ ಹೇಳಿಕೆ ಕೊಡುವವರ ಮೇಲೆ ಕೇಸ್ ಹಾಕಿಲ್ಲ. ಆದರೆ ನನ್ನ ಮೇಲೆ ಕೇಸ್ ಹಾಕಿದ್ದಾರೆ. ರಾಷ್ಟ್ರದ್ರೋಹಿಗಳನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ತರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ” ಎಂದರು.
“ನನ್ನ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ. ಸಂಸದ ಡಿ ಕೆ ಸುರೇಶ್ ಅವರಿಗೆ ಮೊದಲು ನೋಟಿಸ್ ಕೊಡಲಿ. ನಾನು ಎಲ್ಲೂ ಸಂಸದ ಡಿಕೆ ಸುರೇಶ್ ಅವರಿಗೆ ಗುಂಡಿಕ್ಕಿ ಕೊಲ್ಲಿ ಅಂತ ಹೇಳಿಲ್ಲ. ನನಗೆ ನೋಟಿಸ್ ಬಂದಿದೆ, ನಾನು ಉತ್ತರ ಕೊಡುತ್ತೇನೆ. ಪ್ರಕರಣದಲ್ಲಿ ನನಗೆ ಕ್ಲೀನ್ಚಿಟ್ ಸಿಗಲಿದೆ” ಎಂದರು.
“ಆರ್ಎಸ್ಎಸ್ ಬಗ್ಗೆ ನೀಡಿದ ಹೇಳಿಕೆ ಸಿಎಂ ವಾಪಸ್ ಪಡೆಯಲಿ. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು “ಎಂದರು.
ಪ್ರಿಯಾಂಕ್ ಎಂಬ ಕೆಟ್ಟ ಹುಳು ಹುಟ್ಟಿದ್ದು ವಿಪರ್ಯಾಸ
“ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೊಟ್ಟೆಯಲ್ಲಿ ಪ್ರಿಯಾಂಕ್ ಎಂಬ ಕೆಟ್ಟ ಹುಳು ಹುಟ್ಟಿದ್ದು ವಿಪರ್ಯಾಸ” ಎಂದು ಇದೇ ವೇಳೆ ನಾಲಿಗೆ ಹರಿಬಿಟ್ಟರು.





