ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದರು ಉಚ್ಛಾಟನೆ ಪ್ರಸ್ತಾವ ಮಂಡಿಸಿದ್ದಾರೆ. ಬಿಜೆಪಿಗರ ಮಲಸತ್ತಿನ ನೋಟಿಸ್ಗಳಿಂದ ನಾನು ಕುಗ್ಗುವುದಿಲ್ಲ. ಭಾರತ-ಅಮೆರಿಕ ವಾಣಿಜ್ಯ ಒಪ್ಪಂದವು ರೈತ ಹಿಕ್ಕೆ ವಿರುದ್ಧವಾಗಿದೆ. ರೈತ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಗುರುವಾರ, ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು. “ಮೋದಿ ಸರ್ಕಾರವು ಅಮೆರಿಕಗೆ ಸಂಪೂರ್ಣ ಶರಣಾಗಿದೆ. ಭಾರತದ ಶಕ್ತಿ, ಸುರಕ್ಷತೆಯನ್ನು ಅಮೆರಿಕದ ಕೈಗೆ ಒಪ್ಪಿಸಲಾಗಿದೆ” ಎಂದು ಆರೋಪಿಸಿದರು.
ವಿಶೇಷವಾಗಿ ಕೃಷಿ ಕ್ಷೇತ್ರದ ಕುರಿತು ಮಾತನಾಡಿದ ರಾಹುಲ್ ಗಾಂಧಿ, “ಭಾರತ-ಅಮೆರಿಕ ಒಪ್ಪಂದದಿಂದ ಹತ್ತಿ, ಸೋಯಾಬೀನ್, ಮೆಕ್ಕೆಜೋಳ, ಹಣ್ಣುಗಳು ಹಾಗೂ ಕಾಶ್ಮೀರಿ ಸೇಬು ಬೆಳೆಗಾರರು ಭಾರೀ ನಷ್ಟ ಅನುಭವಿಸುತ್ತಾರೆ. ಭಾರತದ ಆಹಾರ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳುವ ಒಪ್ಪಂದವಿದು. ರೈತರ ಜೀವನಾಧಾರವನ್ನೇ ಕಿತ್ತುಕೊಳ್ಳುತ್ತದೆ” ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಅವರ ಮೋದಿ ಸರ್ಕಾರವು ಶರಣಾಗಿದೆ ಎಂದು ಆರೋಪಿಸಿದ್ದಕಾಗಿ, ಅವರ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಉಚ್ಛಾಟನೆ ಪ್ರಸ್ತಾವ ಸಲ್ಲಿಸಿದ್ದಾರೆ. ‘ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ರದ್ದುಗೊಳಿಸಿ, ಜೀವನಾವಧಿವರೆಗೂ ಅವರು ಚುನಾವಣೆಗೆ ಸ್ಪರ್ಧಿಸಲು ಅಯೋಗ್ಯರೆಂದು ಘೋಷಿಸಬೇಕು. ರಾಹುಲ್ ಅವರು ದೇಶ ವಿರೋಧಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಸಂಸತ್ತಿನ ವೇದಿಕೆಯನ್ನು ಬಳಸಿಕೊಂಡು ಸುಳ್ಳುಗಳನ್ನು ಹರಡುತ್ತಿದ್ದಾರೆ. ಇದು ಖಾಸಗಿ ನಿಲುವಳಿಗಿಂತ ಮಿಗಿಲಾಗಿ, ಸಬ್ಸ್ಟ್ಯಾಂಟಿವ್ ಮೋಷನ್ ಆಗಿದೆ” ಎಂದು ಹೇಳಿಕೊಂಡಿದ್ದಾರೆ.
ಬಿಜೆಪಿ ಸಂಸದ ದುಬೆ ಅವರ ನಿಲುವಳಿಗೆ ರಾಹುಲ್ ಗಾಂಧಿ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಸಂದೇಶ ಹಂಚಿಕೊಂಡಿರುವ ಅವರು, “FIR ದಾಖಲಾಗಲಿ, ಮೊಕದ್ದಮೆ ದಾಖಲಾಗಲಿ ಅಥವಾ ಖಾಸಗಿ ನಿಲುವಳಿ ತರಲಿ — ನಾನು ರೈತರಿಗಾಗಿ ಹೋರಾಡುತ್ತೇನೆ. ನನ್ನ ವಿರುದ್ಧ ಏನೇ ಮಾಡಿದರೂ ರೈತರ ಹಿತ ಬಿಟ್ಟು ಒಂದಿಂಚು ಕೂಡ ಹಿಂದೆ ಸರಿಯುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
FIR हो,
— Rahul Gandhi (@RahulGandhi) February 12, 2026
मुकदमा दर्ज हो या
Privilege प्रस्ताव लाएं – मैं किसानों के लिए लड़ूंगा।
जो भी ट्रेड डील किसानों की रोज़ी-रोटी छीने या देश की खाद्य सुरक्षा को कमजोर करे, वह किसान-विरोधी है।
अन्नदाताओं के हितों से किसान-विरोधी मोदी सरकार को समझौता नहीं करने देंगे। pic.twitter.com/gNVMEYFp3i
ರೈತರ ಜೀವನಾಧಾರವನ್ನು ಕಸಿದುಕೊಳ್ಳುವ ಯಾವುದೇ ವಾಣಿಜ್ಯ ಒಪ್ಪಂದವನ್ನೂ ಒಪ್ಪಿಕೊಳ್ಳಲಾಗದು. ಮೋದಿ ಸರ್ಕಾರವು ರೈತ ವಿರೋಧಿಯಾಗಿದೆ. ಅನ್ನದಾತರ ಹಿತಾಸಕ್ತಿಯನ್ನು ರಕ್ಷಿಸಲು ಯಾವುದೇ ಒತ್ತಡಕ್ಕೂ ಒಗ್ಗದೆ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
ರಾಹುಲ್ ಹೇಳಿಕೆಗೆ ಕಾಂಗ್ರೆಸ್ಸಿಗರು ಬಹುಪರಾಕ್ ಹೇಳಿದ್ದು, ರಾಹುಲ್ ನಿಲುವು ರೈತರ ಹೋರಾಟದ ಬಲವಾದ ಸಂದೇಶವೆಂದು ಬಣ್ಣಿಸಿದ್ದಾರೆ. “ಭಾರತ-ಅಮೆರಿಕ ಒಪ್ಪಂದದಿಂದ ರೈತರಿಗೆ ಆಗುವ ನಷ್ಟವನ್ನು ಮರೆಮಾಚಲು ಬಿಜೆಪಿ ಈ ರೀತಿಯ ಕ್ರಮ ಕೈಗೊಳ್ಳುತ್ತಿದೆ. ರಾಹುಲ್ ಗಾಂಧಿ ಸಂಸತ್ತಿನಲ್ಲಿ ತಮ್ಮ ಹೋರಾಟವನ್ನು ಮುಂದುವರೆಸುತ್ತಾರೆ” ಎಂದು ಕಾಂಗ್ರೆಸ್ ಹೇಳಿದೆ.
ಬಿಜೆಪಿ ಸಂಸದ ದುಬೆ ಅವರ ನಿಲುವಳಿ ಕುರಿತು ಮಾತನಾಡಿರುವ ಬಿಜೆಪಿ ನಾಯಕ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ಖಾಸಗಿ ನಿಲುವಳಿಯನ್ನು ಸದನದ ಸವಲತ್ತು ಸಮಿತಿ ಅಥವಾ ನೀತಿ ಸಮಿತಿಗೆ ಕಳುಹಿಸಬೇಕೆ, ಇಲ್ಲ ನೇರವಾಗಿ ಲೋಕಸಭೆಗೆ ತರಬೇಕೆ ಎಂಬುದರ ಕುರಿತು ಸ್ಪೀಕರ್ ಅವರೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುತ್ತದೆ. ಸದ್ಯ, ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ” ಎಂದು ಹೇಳಿದ್ದಾರೆ.




