ಮಹಾರಾಷ್ಟ್ರದಲ್ಲಿ ಜನವರಿ 15ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ, ಮತದಾನಕ್ಕಾಗಿ ನನ್ನನ್ನು ಬೇರೆ ಜಿಲ್ಲೆಗೆ ಕರೆದೊಯ್ಯಲಾಗಿತ್ತು. ಅಲ್ಲಿ, ನಿರ್ದಿಷ್ಟ ಪಕ್ಷಕ್ಕೆ ಮತ ಚಲಾಯಿಸುಂತೆ ನನ್ನ ಮೇಲೆ ಒತ್ತಡ ಹೇರಲಾಯಿತು ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೀಡ್ ಜಿಲ್ಲೆಯ ಗೆವ್ರಾಯ್ ತಾಲೂಕಿನ ನಿವಾಸಿಯಾಗಿರುವ ಮಹಿಳೆ ತನ್ನ ದೂರಿನಲ್ಲಿ, “ನನಗೆ ಮತದಾನ ಪ್ರಕ್ರಿಯೆಯ ಬಗ್ಗೆ ಗೊತ್ತಿರಲಿಲ್ಲ. ನನ್ನನ್ನೂ ಸೇರಿದಂತೆ ಹಲವಾರು ಮಹಿಳೆಯರನ್ನು ಪುಣೆ ಜಿಲ್ಲೆಯ ಜೆಜುರಿಯಲ್ಲಿರುವ ಸ್ವ-ಸಹಾಯ ಗುಂಪಿನ ಸಭೆ ಮತ್ತು ಖಂಡೋಬಾ ದೇವಸ್ಥಾನಕ್ಕೆ ಕರೆದೊಯ್ಯುತ್ತೇವೆಂದು ಹೇಳಿ ಬಸ್ನಲ್ಲಿ ಕರೆದುಕೊಂಡು ಹೋದರು. ಆದರೆ, ಪುಣೆ ಬದಲಿಗೆ ಪಿಂಪ್ರಿ ಚಿಂಚ್ವಾಡ್ಗೆ ಕರೆದೊಯ್ದು, ಅಲ್ಲಿ ನಿರ್ದಿಷ್ಟ ಪಕ್ಷಕ್ಕೆ ಮತ ಚಲಾಯಿಸುವಂತೆ ಒತ್ತಾಯ ಮಾಡಿದರು” ಎಂದು ಮಹಿಳೆ ಆರೋಪಿಸಿದ್ದಾರೆ.
“ಬೀಡ್ ಜಿಲ್ಲೆಯ ಹಲವಾರು ಮಹಿಳೆಯರನ್ನು ನಾಲ್ಕು ಬಸ್ಗಳಲ್ಲಿ ಪಿಂಪ್ರಿ ಚಿಂಚ್ವಾಡ್ಗೆ ಕರೆದೊಯ್ಯಲಾಯಿತು. ನಾವು ಅಲ್ಲಿ ಮತ ಚಲಾಯಿಸಿದ್ದೇವೆ” ಎಂದು ಹೇಳಿರುವುದಾಗಿ ವರದಿಯಾಗಿದೆ.
“ನಾನು ಒಬ್ಬ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದೇನೆ. ನನಗೆ ಅವರು ಮೋಸ ಮಾಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ವಿನಂತಿಸಿದ್ದೇನೆ. ನಾನು ಆರೋಪಿ ಮಹಿಳೆಯಿಂದ ಯಾವುದೇ ಹಣ ಸ್ವೀಕರಿಸಿಲ್ಲ” ಎಂದು ಅವರು ಹೇಳಿವುದಾಗಿ ತಿಳಿದುಬಂದಿದೆ.
ಬೀಡ್ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕನ್ವತ್ ಅವರು ದೂರು ಸ್ವೀಕರಿಸಿರುವುದನ್ನು ದೃಢಪಡಿಸಿದರು. “ಮುಂದಿನ ಕ್ರಮಕ್ಕಾಗಿ ನಾವು ಪುಣೆ ಕಲೆಕ್ಟರ್ಗೆ ದೂರನ್ನು ವರ್ಗಾಯಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ಪಿಂಪ್ರಿ ಚಿಂಚವಡ್ ಮಹಾನಗರ ಪಾಲಿಕೆ ಒಟ್ಟು 128 ಸ್ಥಾನಗಳ ಪೈಕಿ ಬಿಜೆಪಿ 83 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದಿದೆ. ಎನ್ಸಿಪಿ (ಅಜಿತ್) 36, ಶಿವಸೇನೆ (ಶಿಂಧೆ) 7 ಸ್ಥಾನಗಳನ್ನು ಗೆದ್ದಿವೆ.




