ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾವನ್ನು ಸೆಪ್ಟೆಂಬರ್ 25 ರೊಳಗೆ ಬಿಡುಗಡೆ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಬಾಂಬೆ ಹೈಕೋರ್ಟ್ ಗುರುವಾರ ಸೂಚಿಸಿದೆ. ವಿವಾದಕ್ಕೆ ಸಿಲುಕಿರುವ ಸಿನಿಮಾ ನಿರ್ಮಾಪಕರು ಸಿಬಿಎಫ್ಸಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಜ್ಞೆಯ ಮೇರೆಗೆ ಉದ್ದೇಶಪೂರ್ವಕವಾಗಿಯೇ ಸಿನಿಮಾ ಬಿಡುಗಡೆಗೆ ಅವಕಾಶ ನೀಡಲು ಸಿಬಿಎಫ್ಸಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಸಿನಿಮಾ ಬಿಡುಗಡೆಗೆ ಸಿಬಿಎಫ್ಸಿ ತಡೆಯೊಡ್ಡಿದೆ. ಬಿಡುಗಡೆಗೆ ಪ್ರಮಾಣಪತ್ರವನ್ನು ನೀಡಲು ವಿಳಂಬ ಮಾಡುತ್ತಿದೆ. ಸಿಬಿಎಫ್ಸಿಯ ನಡೆಯನ್ನು ಪ್ರಶ್ನಿಸಿ ಚಿತ್ರತಂಡ ಬಾಂಬೆ ಹೈಕೋರ್ಟ್ ಮೊರೆ ಹೋಗಿದೆ. ಚಿತ್ರತಂಡದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬರ್ಗೆಸ್ ಕೊಲಬಾವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ಪೀಠವು ವಿಚಾರಣೆ ನಡೆಸಿದೆ.
”ಹರಿಯಾಣದಲ್ಲಿ ಅಕ್ಟೋಬರ್ 5 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆ ಮುಗಿಯುವವರೆಗೆ ಸಿನಿಮಾ ಬಿಡುಗಡೆ ಮಾಡುವುದನ್ನು ತಡೆಯಲು, ಉದ್ದೇಶಪೂರ್ವಕವಾಗಿ ಪ್ರಮಾಣಪತ್ರ ನೀಡಲು ಸಿಬಿಎಫ್ಸಿ ವಿಳಂಬ ಮಾಡುತ್ತಿದೆ” ಎಂದು ನಿರ್ಮಾಪಕರ ಪರ ವಕೀಲ ವೆಂಕಟೇಶ್ ಧೋಂಡ್ ವಾದಿಸಿದ್ದಾರೆ.
“ಸಿನಿಮಾದಲ್ಲಿ ನಟಿಸಿರುವ ಕಂಗನಾ ರಣಾವತ್ ಚಿತ್ರಕ್ಕೆ ಸಹ-ನಿರ್ಮಾಪಕರೂ ಆಗಿದ್ದಾರೆ. ಅವರು ಬಿಜೆಪಿ ಸಂಸದರೂ ಆಗಿದ್ದಾರೆ. ಹೀಗಾಗಿ, ತಮ್ಮ ಸದಸ್ಯರಿಂದ ಕೆಲವು ಸಮುದಾಯಗಳ ಭಾವನೆಗಳಿಗೆ ನೋವುಂಟು ಮಾಡುವ ಚಿತ್ರ ಬಿಜೆಪಿಗರಿಗೆ ಬೇಕಾಗಿಲ್ಲ. ಬಿಜೆಪಿಯ ಆಣತಿಯಂತೆ ಸಿಬಿಎಫ್ಸಿ ವರ್ತಿಸುತ್ತಿದ್ದು, ಅನಗತ್ಯ ವಿಳಂಬ ಮಾಡುತ್ತಿದೆ” ಎಂದು ವಕೀಲರು ಆರೋಪಿಸಿದ್ದಾರೆ.
ಅವರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೊಲಬಾವಾಲಾ ಅವರು, ”ಬಿಡುಗಡೆಯ ವಿಳಂಬವು ಬಿಜೆಪಿಗೆ ಮತ ಹಾಕುವ ಜನರ ಮತದಾನದ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆಯೇ? ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಯಾರಾದರೂ ತಮ್ಮ ಸ್ವಂತ ಸದಸ್ಯರೇ ನಿರ್ಮಿಸಿದ ಚಲನಚಿತ್ರವನ್ನು ಏಕೆ ತಡೆಯಲು ಬಯಸುತ್ತಾರೆ? ರಾಜ್ಯವನ್ನು ವಿರೋಧ ಪಕ್ಷದವರು ಆಳುತ್ತಿದ್ದರೆ, ನಾವು ಅದನ್ನು ಪರಿಗಣಿಸಬಹುದಿತ್ತು” ಎಂದಿದ್ದಾರೆ
ಬಿಜೆಪಿ ವಿರುದ್ಧ ಮತ್ತಷ್ಟು ಆರೋಪ ಮಾಡಿದ ವಕೀಲರು, “ಕೇಂದ್ರದ ಆಡಳಿತ ಪಕ್ಷದ (ಬಿಜೆಪಿ) ಇಚ್ಛೆಯ ಮೇರೆಗೆ ಇದೆಲ್ಲ ನಡೆಯುತ್ತಿದೆ. ಅವರು (ಬಿಜೆಪಿ) ತಮ್ಮ ಒಟ್ಟಾರೆ ಹಿತಾಸಕ್ತಿಗಳನ್ನು ನೋಡುತ್ತಿದ್ದಾರೆ. ಹೀಗಾಗಿ, ಈ ಚಿತ್ರವನ್ನು ಬಿಡುಗಡೆ ಮಾಡಲು ಅವರಿಗೆ ಇಷ್ಟವಿಲ್ಲ” ಎಂದು ಹೇಳಿದರು.
ಕಂಗನಾ ರಣಾವತ್ ಅವರೇ ಚಿತ್ರಕಥೆ ಬರೆದು, ನಿರ್ದೇಶಿಸಿ, ಸಹ-ನಿರ್ಮಾಣ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನವನ್ನು ಆಧರಿಸಿದೆ. ಸಿನಿಮಾದಲ್ಲಿ ಕಂಗನಾ ಅವರೇ ಇಂದಿರಾ ಗಾಂಧಿಯಾಗಿ ನಟಿಸಿದ್ದಾರೆ.
ಆರಂಭದಲ್ಲಿ ಸೆಪ್ಟೆಂಬರ್ 6 ರಂದು ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಸಿನಿಮಾದಲ್ಲಿ ಸಿಖ್ಖರ ಬಗ್ಗೆ ನಾನಾ ರೀತಿಯಲ್ಲಿ ಚಿತ್ರಿಸಲಾಗಿದ್ದು, ಅದು ವಿವಾದಕ್ಕೆ ಸಿಲುಕಿದೆ. ಸಿನಿಮಾ ವಿರುದ್ಧ ಸಿಖ್ ಸಮುದಾಯದ ಎರಡು ಸಂಘಟನೆಗಳು – ಜಬಲ್ಪುರ್ ಸಿಖ್ ಸಂಗತ್ ಮತ್ತು ಗುರು ಸಿಂಗ್ ಸಭಾ – ಆಕ್ಷೇಪ ವ್ಯಕ್ತಪಡಿಸಿವೆ. ಸಿನಿಮಾ ವಿರುದ್ಧ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿಯನ್ನೂ ಸಲ್ಲಿಸಿವೆ.
ಸಂಘಟನೆಗಳು ವಾದಿಸುವಂತೆ, ಚಿತ್ರದಲ್ಲಿನ ಕೆಲವು ದೃಶ್ಯಗಳು ಸಿಖ್ ಸಮುದಾಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿವೆ. ಅದಕ್ಕಾಗಿ ಕಂಗನಾ ರಣಾವತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿವೆ.
ಈ ಹಿಂದೆ, ಸೆಪ್ಟೆಂಬರ್ 4ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸಿನಿಮಾವನ್ನು ಬಿಡುಗಡೆ ಮಾಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ಸೆಪ್ಟೆಂಬರ್ 18ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸಿಬಿಎಫ್ಸಿಗೆ ನಿರ್ದೇಶನ ನೀಡಿತ್ತು.
ಆದರೆ, ಸಿನಿಮಾ ಬಿಡುಗಡೆ ವಿಚಾರವನ್ನು ಸಿಬಿಎಫ್ಸಿಯ ಪರಿಷ್ಕರಣಾ ಸಮಿತಿಗೆ ಉಲ್ಲೇಖಿಸಲಾಗಿದೆ. ಹೀಗಾಗಿ, ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ನ್ಯಾಯಾಲಯಕ್ಕೆ ಸಿಬಿಎಫ್ಸಿ ತಿಳಿಸಿದೆ. ಆದ್ದರಿಂದ, ಮತ್ತೊಂದು ಸೂಚನೆ ನೀಡಿರುವ ನ್ಯಾಯಾಲಯ, ಸೆಪ್ಟೆಂಬರ್ 25ರೊಳಗೆ ತನ್ನ ನಿರ್ಧಾರವನ್ನು ತಿಳಿಸುವಂತೆ ಸಿಬಿಎಫ್ಸಿಗೆ ನಿರ್ದೇಶಿಸಿದೆ.




