ಮುಂಬೈನಲ್ಲಿ ಶನಿವಾರ ನಡೆದ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಬಾಲಿವುಟ್ ನಟ ಸಲ್ಮಾನ್ ಖಾನ್ ಭಾಗಿಯಾಗಿದ್ದನ್ನು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ‘ಸಲ್ಮಾನ್ ಖಾನ್ ಅವರನ್ನು ಬಲವಂತದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮಾಡಲಾಗಿದೆಯೇ, ಇದು ಸಲ್ಮಾನ್ಗೆ ಶಿಕ್ಷೆಯೇ’ ಎಂದು ಪ್ರಶ್ನಿಸಿದ್ದಾರೆ.
ಸಂಘದ ಕಾರ್ಯಕ್ರಮದಲ್ಲಿ ಸಲ್ಮಾನ್ ಭಾಗಿಯಾಗಿರುವುದು ಬದಲಾವಣೆಯ ರಾಜಕೀಯ ಗಾಳಿ ಬೀರುತ್ತಿರುವಾಗ ಆರ್ಎಸ್ಎಸ್ ಪ್ರಸ್ತುತದಲ್ಲಿರಲು ನಡೆಸುತ್ತಿರುವ ಹತಾಶ ಪ್ರಯತ್ನವೇ? ಜನಸಮೂಹವನ್ನು ಸೆಳೆಯಲು ಅಥವಾ ಮುಸ್ಲಿಮರು ಈಗ ಸಂಘದಲ್ಲಿ ಸ್ವಾಗತಾರ್ಹರು ಎಂದು ಬಿಂಬಿಸಲು ಸಲ್ಮಾನ್ ಅವರನ್ನು ಕಾರ್ಯಕ್ರಮದಲ್ಲಿ ಕರೆತರಲಾಗಿತ್ತೇ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟನೆ ನೀಡಬೇಕೆಂದು ಕೇಳಿದ್ದಾರೆ.
ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಆಂತರಿಕ ವಿಚಾರಗಳ ಬಗ್ಗೆ ಮಾತನಾಡಿದ ರಾವತ್, “ಮುಂಬರುವ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಿಗೆ ಮೈತ್ರಿಕೂಟವು ಮತ್ತಷ್ಟು ಭದ್ರವಾಗಿ ಹೋಗಲಿದೆ. ನಾವು ಉದ್ಧವ್ ಠಾಕ್ರೆ ಅವರನ್ನು ವಿಧಾನ ಪರಿಷತ್ತಿಗೆ ಮರಳುವಂತೆ ವಿನಂತಿಸಿದ್ದೇವೆ. ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಂತರ, ಶಾಸಕಾಂಗದಲ್ಲಿ ಅವರ ಉಪಸ್ಥಿತಿಯು ರಾಜ್ಯ ಮತ್ತು ಜನರಿಗೆ ಅತ್ಯಗತ್ಯ. ಅವರು ಎಂವಿಎಯನ್ನು ಮುಂಭಾಗದಿಂದ ಮುನ್ನಡೆಸುವುದು ಸಾಮೂಹಿಕ ಆಶಯವಾಗಿದೆ” ಎಂದು ಹೇಳಿದ್ದಾರೆ.





