ಇತ್ತೀಚೆಗೆ ಹರಿಯಾಣದಲ್ಲಿ ನಡೆದ ದಲಿತ ಐಪಿಎಸ್ ಅಧಿಕಾರಿಯ ಆತ್ಮಹತ್ಯೆಯು ಆಡಳಿತಾರೂಢ ಬಿಜೆಪಿಯ ‘ಮನುವಾದಿ’ ವ್ಯವಸ್ಥೆಯಡಿಯಲ್ಲಿ ನಡೆಯುತ್ತಿರುವ ಸಾಮಾಜಿಕ ಅನ್ಯಾಯ, ಅಮಾನವೀಯತೆ ಮತ್ತು ಸೂಕ್ಷ್ಮತೆಯ ಕೊರತೆಗೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದ್ದಾರೆ.
ಆಡಳಿತದಲ್ಲಿರುವ ಜಾತಿ ತಾರತಮ್ಯ, ಪರಿಶಿಷ್ಟ ಜಾತಿ(ಎಸ್ಸಿ) ಪ್ರಾತಿನಿಧ್ಯ, ದೌರ್ಜನ್ಯ ಮತ್ತು ನಿಂದನೆಯ ವಿರುದ್ಧವಾಗಿ ಧ್ವನಿ ಎತ್ತಿದ್ದ, ಈ ಸಂಬಂಧ ದೂರು ದಾಖಲಿಸಿದ್ದ ಹರಿಯಾಣದ ಐಪಿಸ್ ಅಧಿಕಾರಿ ಪೂರಣ್ ಕುಮಾರ್ ಅವರು ಇತ್ತೀಚೆಗೆ ಶವವಾಗಿ ಪತ್ತೆಯಾಗಿದ್ದಾರೆ. ಅಧಿಕಾರಿಯು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗೆಯೇ ಡೆತ್ ನೋಟ್ ಕೂಡಾ ಬರೆದಿಟ್ಟಿದ್ದಾರೆ. ಹಿರಿಯ ಅಧಿಕಾರಿಗಳಿಂದ ಕಿರುಕುಳದ ಆರೋಪ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದ ಹರಿಯಾಣ ದಲಿತ ಐಪಿಎಸ್ ಅಧಿಕಾರಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ
ಈ ಪ್ರಕರಣದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, “ಬಿಜೆಪಿಯ ಮನುವಾದಿ ತಂತ್ರವು ದೇಶದ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಹಿಂದುಳಿದ ವರ್ಗದ ಜನರಿಗೆ ಶಾಪವಾಗಿದೆ. ಹರಿಯಾಣದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಅವರ ಬಲವಂತದ ಆತ್ಮಹತ್ಯೆಯು ನಮ್ಮನ್ನು ಕೇವಲ ಸ್ತಬ್ಧರನ್ನಾಗಿಸುವ ಪ್ರಕರಣವಲ್ಲ. ಬದಲಾಗಿ ಸಾಮಾಜಿಕ ಅನ್ಯಾಯ, ಅಮಾನವೀಯತೆ ಮತ್ತು ಸೂಕ್ಷ್ಮತೆಯ ಕೊರತೆಗೆ ಸಾಕ್ಷಿಯಾಗಿದೆ. ಅಧಿಕಾರಿಯ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ತಿಳಿಸಿದ್ದಾರೆ.
“ಕಳೆದ 11 ವರ್ಷದ ಅವಧಿಯಲ್ಲಿ ದೇಶದಲ್ಲಿ ಬಿಜೆಪಿಯು ಮನುವಾದಿ ಮನಸ್ಥಿತಿಯನ್ನು ಜನರಲ್ಲಿ ಎಷ್ಟು ಗಾಢವಾಗಿ ಬೇರೂರುವಂತೆ ಮಾಡಿದೆ ಎಂದರೆ ಎಡಿಜಿಪಿ ರ್ಯಾಂಕ್ನ ದಲಿತ ಅಧಿಕಾರಿಗಳಿಗೂ ನ್ಯಾಯ ಸಿಗದಂತಹ ಸ್ಥಿತಿಯಿದೆ” ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
भाजपा का मनुवादी तंत्र इस देश के SC, ST, OBC और कमज़ोर वर्गों के लिए एक अभिशाप बन चुका है।
— Mallikarjun Kharge (@kharge) October 9, 2025
हरियाणा के वरिष्ठ दलित IPS अधिकारी, ADGP, श्री वाई. पूरन कुमार की मजबूरन आत्महत्या की खबर न केवल स्तब्ध करने वाली है, बल्कि सामाजिक अन्याय, अमानवीयता और संवेदनहीनता का भयावह प्रमाण है।… pic.twitter.com/toz01agFre
“ದೇಶದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಮೆಲೆ ಹಲ್ಲೆ ನಡೆದಿದೆ. ಅದನ್ನು ಬಿಜೆಪಿಯು ಜಾತಿವಾದ ಮತ್ತು ಧರ್ಮದ ಆಧಾರದಲ್ಲಿ ಸರ್ಮಥಿಸಿಕೊಳ್ಳುತ್ತಿದೆ. ಹಾಗಿರುವಾಗ ಸಬ್ಕಾ ಸಾಥ್(ಎಲ್ಲರೊಂದಿಗೆ) ಎಂಬ ಬಿಜೆಪಿಯ ಘೋಷಣೆ ಬರೀ ಬಾಯಿ ಮಾತಿಗೆ ಸೀಮಿತ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು” ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.
“ಸಾವಿರಾರು ವರ್ಷಗಳಿಂದ ಶೋಷಣೆ ಮಾಡುವ ಅಭ್ಯಾಸ ಹೊಂದಿರುವ ಮನುವಾದಿಗಳ ಮಾನಸಿಕತೆಯನ್ನು ಅಷ್ಟು ಶೀಘ್ರದಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದಾಗಿ ಹರಿಓಂ ವಾಲ್ಮೀಕಿಯಂತಹ ದಲಿತ ವ್ಯಕ್ತಿಯ ಹತ್ಯೆ ಮಾಡಲಾಗುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಒಂದು ಮಾತೂ ಆಡಲ್ಲ” ಎಂದು ಖರ್ಗೆ ಟೀಕಿಸಿದ್ದಾರೆ.
“ಇದು ಬರೀ ಕೆಲವು ಜನರ ದುರಂತದ ಸ್ಥಿತಿಯಲ್ಲ. ಇದು ಬಿಜೆಪಿ ಮತ್ತು ಸಂಘಪರಿವಾರದಿಂದ ಪೋಷಿಸಲ್ಪಟ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ದಲಿತ, ಆದಿವಾಸಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಗೌರವಕ್ಕೆ ಪದೇ ಪದೇ ಧಕ್ಕೆ ತರಲಾಗುತ್ತಿದೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಒಡ್ಡಿರುವ ಅಪಾಯ” ಎಂದೂ ಹೇಳಿದ್ದಾರೆ.





