- ಎಲ್ಲದಕ್ಕೂ ಸರ್ಕಾರವನ್ನು ಟೀಕಿಸಲ್ಲ ಎಂದ ಜೆಡಿಎಸ್ ರಾಜ್ಯಾಧ್ಯಕ್ಷ
- ನಮ್ಮ ಶಕ್ತಿ ಕಡಿಮೆ ಇರುವುದರಿಂದ ಕೊಡಗಿನಲ್ಲಿ ಕಾಂಗ್ರೆಸ್ ಗೆದ್ದಿದೆ
ನಿನ್ನೆ ಸಿಎಂ ಸಿದ್ದರಾಮಯ್ಯನವರು ನಡೆಸಿದ ರಾಜ್ಯಮಟ್ಟದ ಜನತಾ ಸ್ಪಂದನ ಕಾರ್ಯಕ್ರಮದ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಜನತಾ ದರ್ಶನದ ಮೂಲಕ ರಾಜ್ಯದ ‘ಆಡಳಿತ’ ಹೇಗೆ ನಡೆಯುತ್ತಿದೆ ಎಂಬುವುದರ ವಾಸ್ತವ ಚಿತ್ರಣ ಸಿಎಂ ಅವರಿಗೆ ಈಗ ಮನವರಿಕೆಯಾಗಿರಬಹುದು ಎಂದು ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಿಎಂ ಸಿದ್ದರಾಮಯ್ಯನವರು ನಿನ್ನೆ ನಡೆಸಿದ ಕಾರ್ಯಕ್ರಮವನ್ನು ಜನತಾ ದರ್ಶನವಲ್ಲ, ಜನತಾ ಸ್ಪಂದನಾ ಎಂದು ತಿಳಿಸಿದ್ದಾರೆ. ಅದಕ್ಕೆ ನನ್ನ ತಕರಾರಿಲ್ಲ. ಈ ಕಾರ್ಯಕ್ರಮ ನಡೆಸಿದ್ದಕ್ಕೆ ಸಿಎಂ ಅವರನ್ನು ಅಭಿನಂದಿಸುತ್ತೇನೆ. ಎಲ್ಲದಕ್ಕೂ ಸರ್ಕಾರವನ್ನು ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ ಎಂದು ತಿಳಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳ ಬಳಿಕ ಪ್ರಥಮ ಬಾರಿಗೆ ಸರ್ಕಾರದ ಅಧಿಕಾರಿಗಳು, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರನ್ನು ಜನತಾ ಸ್ಪಂದನಾ ನಡೆಸುವಲ್ಲಿಗೆ ಬರಲು ಹೇಳಿ, ನಾಡಿನ ಜನತೆ ಎದುರಿಸುತ್ತಿರುವ ಸಮಸ್ಯೆಯನ್ನು ಆಲಿಸಿದ್ದಾರೆ. ಬಹುಷಃ ನಿನ್ನೆ ಜನರ ಸಮಸ್ಯೆಗಳನ್ನು ಆಲಿಸಿದ ಬಳಿಕ ರಾಜ್ಯದ ಆಡಳಿತ ವ್ಯವಸ್ಥೆ ಹೇಗೆ ನಡೆಯುತ್ತಿದೆ, ಲೋಪದೋಷಗಳು ಏನೇನು ಎಂಬುದರ ವಾಸ್ತವ ಚಿತ್ರಣ ಈಗ ಸಿಎಂ ಅವರಿಗೆ ಅರ್ಥವಾಗಿರಬಹುದು ಎಂಬುದು ನನ್ನ ಅಭಿಪ್ರಾಯ’ ಎಂದು ಕುಮಾರಸ್ವಾಮಿ ತಿಳಿಸಿದರು.
‘ಒಬ್ಬ ಮುಖ್ಯಮಂತ್ರಿ ಜನತಾ ಸ್ಪಂದನ ನಡೆಸಿದ್ದನ್ನು ನಾನು ಮೆಚ್ಚುತ್ತೇನೆ, ಜೊತೆಗೆ ಅಭಿನಂದನೆಯೂ ಸಲ್ಲಿಸುತ್ತೇನೆ. ಎಲ್ಲವನ್ನೂ ಟೀಕೆ ಮಾಡಲು ಹೋಗಲ್ಲ. ಮುಂದಿನ ಮೂರು ತಿಂಗಳಲ್ಲಿ ಮತ್ತೊಮ್ಮೆ ಜನತಾ ದರ್ಶನ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ, ಅಧಿಕಾರಿಗಳು ಕೂಡ ಸರಿಯಾಗಿ ಕೆಲಸ ಮಾಡುವಂತೆಯೂ ಗಡುವು ನೀಡಿದ್ದಾರೆ. 2006ರಲ್ಲಿ ನಾನೂ ಕೂಡ ರಾತ್ರಿ ಒಂದುಗಂಟೆಯವರೆಗೆ ಜನತಾ ದರ್ಶನ ಮಾಡಿದ್ದೇನೆ. ಆಗಲೂ ಇದ್ದಂತಹ ಸಮಸ್ಯೆ ಈಗಲೂ ಮುಂದುವರಿದಿದೆ’ ಎಂದು ತಿಳಿಸಿದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಂದಾಯ ಸಚಿವರಾಗಿದ್ದ ಅಶೋಕ್ ಅವರು ಕೂಡ ಜಿಲ್ಲಾಧಿಕಾರಿ ನಡೆ, ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. ಆದರೂ ಕೂಡ ಜನರ ಕಷ್ಟಗಳು ಇನ್ನೂ ಹಾಗೆಯೇ ಇವೆ. ಹಾಗಾಗಿ, ನಿನ್ನೆಯ ಜನತಾ ದರ್ಶನದಲ್ಲಿ ಜನರ ಕಷ್ಟಗಳ ಬಗ್ಗೆ ಸಿಎಂ ಸಿದ್ದರಾಮಯ್ಯನವರಿಗೂ ಮನವರಿಕೆ ಆಗಿರಬಹುದು. ಈ ಹಿನ್ನೆಲೆಯಲ್ಲಿ ಜನರ ಕಷ್ಟಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸಿದರೆ, ಅರ್ಥಪೂರ್ಣವಾದ ಕಾರ್ಯಕ್ರಮ ಆಗುತ್ತದೆ. ನೋಡೋಣ, ಮುಂದೆ ಏನೇನು ಮಾಡುತ್ತಾರೆ’ ಎಂದು ಕುಮಾರಸ್ವಾಮಿ ತಿಳಿಸಿದರು.
ಕೊಡಗು ಜಿಲ್ಲಾ ಪ್ರವಾಸದ ಬಗ್ಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ, “ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಮಡಿಕೇರಿಗೆ ಬಂದಿದ್ದೇನೆ. ನಮ್ಮ ಶಕ್ತಿ ಕಡಿಮೆ ಇರುವುದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ಪಕ್ಷ ಸಂಘಟನೆ ಆಗಬೇಕಿದೆ. ರಾಜ್ಯದಲ್ಲಿ ಮತ್ತೆ ಮೈತ್ರಿ ಸರ್ಕಾರ ಬರಬೇಕೆಂದು ಜನರ ನಿರೀಕ್ಷೆ ಇದೆ. ಈಗಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಿಗೆ ಅಸಮಾಧಾನವಿದೆ” ಎಂದು ತಿಳಿಸಿದರು.





