ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನಡೆಸುತ್ತಿರುವ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕ್ರೀಡೋತ್ಸವದಲ್ಲಿ ಅತಿಥಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಲ್ಲಡ್ಕ ಪ್ರಭಾಕರ್ ಭಟ್ ಅನ್ನು ಹೊಗಳಿದ್ದಲ್ಲದೇ ‘ಜೈ ಶ್ರೀರಾಮ್’ ಘೋಷಣೆಯೊಂದಿಗೆ ಮಾತು ಮುಗಿಸಿದ ಪ್ರಸಂಗ ನಡೆದಿದೆ.
“ಹಿಂದೆ ಟೀಕೆ ಮಾಡಿದ್ದೆ, ಈಗ ಮನಸ್ಸು ಪರಿವರ್ತನೆ ಮಾಡಿದ್ದೇನೆ. ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಕೆಲವರು ದಾರಿ ತಪ್ಪಿಸುವ ಮಾಹಿತಿ ನೀಡಿದ್ದರು. ಇಂದು ನನ್ನ ಕಣ್ಣು ತೆರೆದಿದೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
“ಹಿಂದೆ ಒಂದು ರೀತಿಯಾಗಿ ಮಾತನಾಡುತ್ತಿದ್ದ ಕುಮಾರಸ್ವಾಮಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹೇಗೆ ಎಂದು ಕೆಲವರು ಯೋಚಿಸಬಹುದು. ಅಂದು ನನ್ನನ್ನು ಕೆಲವರು ದಾರಿ ತಪ್ಪಿಸಿದ್ದರು. ನಾನು ತಪ್ಪು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದರು.
“ಈ ಕಾರ್ಯಕ್ರಮ ಜೀವನದ ಅವಿಸ್ಮರಣೀಯ ಕ್ಷಣ. ಇಲ್ಲಿ ಅತ್ಯುತ್ತಮ ಶಿಕ್ಷಣ ಕೊಡಲಾಗುತ್ತಿದೆ. ದೇಶದ ಕೀರ್ತಿ ಎತ್ತಿ ಹಿಡಿದ ವಿಜ್ಞಾನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಗುರುಕುಲ ಪರಂಪರೆಯನ್ನು ಸಂಸ್ಕೃತಿಗಳನ್ನು ನೀಡಲಾಗುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಉತ್ತಮ ಶಿಸ್ತಿನ ಬದುಕನ್ನು ಇಲ್ಲಿ ಕಲಿಸಿ ಕೊಡಲಾಗುತ್ತದೆ. ಮಾನವೀಯತೆ ವಿಕಸನವನ್ನು ಇಲ್ಲಿ ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಬಾರದೇ ಇದ್ದರೆ ಜೀವನದಲ್ಲಿ ದೊಡ್ಡ ನಷ್ಟ ಉಂಟಾಗುತ್ತಿತ್ತು. ಗ್ರಾಮೀಣ ಪ್ರದೇಶದ ಕಲೆಗಳನ್ನು ಮಕ್ಕಳಲ್ಲಿ ಮಾಡಿಸಿದ್ದಾರೆ” ಎಂದರು.
“ಚಂದ್ರಯಾನ ಉಡಾವಣೆಯನ್ನು ಕಣ್ಣಿಗೆ ಕಟ್ಟುವ ಹಾಗೆ ತೋರಿಸಿದ್ದೀರಿ. ಮಕ್ಕಳಿದ್ದಾಗ ರಾಮನ ಭಜನೆ ಮಾಡಿದನ್ನು ಇವತ್ತು ಮತ್ತೆ ನೆನಪಿಸಿದ್ದೀರಿ. ಪ್ರಭಾಕರ ಭಟ್ ಬದುಕಿನ ಒಳ್ಳೆಯ ನಡವಳಿಕೆ ಕಲಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕಣ್ಣು ತೆರೆಸುತ್ತೀದ್ದೀರಿ” ಎಂದು ಹೇಳಿದರು.
ಭಾ.ಜ.ಪ ಮುಖಂಡರು, ಶಾಸಕರಾದ ಸನ್ಮಾನ್ಯ ಶ್ರೀ ಬಸವನಗೌಡ ಪಾಟೀಲ ಯತ್ನಾಳರವರು ಶ್ರೀರಾಮ ವಿದ್ಯಾಕೇಂದ್ರ ಕಲ್ಲ್ಕಡ ಕ್ರೀಡೋತ್ಸವ 2023 ಮುಖ್ಯ ಅತಿಥಿಗಳಾಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಇದೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿಯವರು ಉಪಸ್ಥಿತರಿದ್ದರು pic.twitter.com/wOUo0zc1tt
— Basanagouda R Patil (Yatnal) (@BasanagoudaBJP) December 10, 2023
ತನ್ನ ಮಾತಿನ ಕೊನೆಯಲ್ಲಿ ಕುಮಾರಸ್ವಾಮಿ ಅವರು “ಜೈ ಶ್ರೀರಾಮ್” ಎಂದು ಘೋಷಣೆ ಕೂಗುವ ಎಲ್ಲರ ಹುಬ್ಬೇರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಭಾಗವಹಿಸಿದ್ದರು.
ಕುಮಾರಸ್ವಾಮಿ ಕಾಲೆಳೆದ ನೆಟ್ಟಿಗರು
ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಹೊಗಳಿ ಅಟ್ಟಕ್ಕೇರಿಸಿರುವ ಕುಮಾರಸ್ವಾಮಿ ಅವರು, ಈಗ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲರ್ಗಳಿಗೆ ಆಹಾರವಾಗಿದ್ದಾರೆ.
“ಇದೆಲ್ಲವೂ ಜೆಡಿಎಸ್ ಪಕ್ಷವು ಲೋಕಸಭಾ ಚುನಾವಣೆಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಪರಿಣಾಮವಷ್ಟೇ. ಕುಮಾರಸ್ವಾಮಿ ಬಿಜೆಪಿಯಂತೆ ಹಿಂದುತ್ವದ ಜಪ ಮಾಡ್ತಿದ್ದಾರೆ. ಇವೆಲ್ಲದರ ವ್ಯಾಲಿಡಿಟಿ ಲೋಕಸಭಾ ಚುನಾವಣೆಯ ಫಲಿತಾಂಶ ಬೀಳುವವರೆಗೆ ಮಾತ್ರ. ದಯವಿಟ್ಟು ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಹೆಸರನ್ನು ಜೆಡಿಕೆ ಮಾಡಿ. ಜೆಡಿಎಸ್ ಅಂದರೆ ಜಾತ್ಯಾತೀತ ಜನತಾದಳ, ಜೆಡಿಕೆ ಅಂದರೆ ಜನತಾದಳ ಕೋಮುವಾದ. ಹಾಗಾಗಿ, ಶೀಘ್ರವೇ ಬದಲಾಯಿಸಿ” ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಕುಮಾರಸ್ವಾಮಿ ಫೋಟೋ ಹಂಚಿಕೊಂಡಿರುವ ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದರಾಜ್, “ಅಧಿಕೃತವಾಗಿ ಕುಮಾರಸ್ವಾಮಿ ಅವರನ್ನು ಸಂಘಿಗಳು ಮನೆ ತುಂಬಿಸಿಕೊಂಡಿದ್ದಾರೆ” ಎಂದು ಕಾಲೆಳೆದಿದ್ದಾರೆ.





