ಲೋಕಸಭಾ ಚುನಾವಣೆ ಸಮಯದಲ್ಲಿ ಪ್ರತಿಪಕ್ಷಗಳನ್ನು ಕಟ್ಟಿಹಾಕಲು ಆಡಳಿತಾರೂಢ ಬಿಜೆಪಿ ನಾನಾ ರೀತಿಯ ತಂತ್ರ-ಕುತಂತ್ರಗಳನ್ನು ಎಣೆಯುತ್ತಿದೆ. ಆದರೆ, ಇದೇ ಸಮಯದಲ್ಲೇ, ಕರ್ನಾಟಕದಲ್ಲಿ ಬಿಜೆಪಿಗೆ ಆಘಾತಗಳ ಮೇಲೆ ಆಘಾತಗಳು ಎದುರಾಗುತ್ತಿವೆ. ಹಲವಾರು ಪ್ರಮುಖ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಇದೀಗ, ಬಿಜೆಪಿ ರಾಜ್ಯ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಡಾ. ಸಂದೀಪ್ ಕೂಡ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.
ಸಂದೀಪ್ ಅವರು ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಅವರು ಕಾಂಗ್ರೆಸ್ಗೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ಪರಿಶಿಷ್ಟ ಜಾತಿ ಹಿನ್ನೆಲೆಯ ಸಂದೀಪ್ ಅವರು ಬಿಜೆಪಿಯಲ್ಲಿ ತಳಹಂತದಿಂದಲೂ ಕೆಲಸ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಸಕಲೇಶಪುರ ಅಥವಾ ಆನೇಕಲ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡುವುದಾಗಿ ಹೇಳಿತ್ತು. ಆದರೆ, ಕೊಸ ಕ್ಷಣದಲ್ಲಿ ಟಿಕೆಟ್ ಕೊಟ್ಟಿರಲಿಲ್ಲ.
ಆಗ, ಲೋಕಸಭಾ ಚುನಾವಣೆಗೆ ಚಿತ್ರದುರ್ಗದಲ್ಲಿ ಟಿಕೆಟ್ ನೀಡುವುದಾಗಿಯೂ ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಆ ಟಿಕೆಟ್ ಕೂಡ ದೊರೆತಿಲ್ಲ. ಹೀಗಾಗಿ, ಸಂದೀಪ್ ಅವರು ನಿರಂತರವಾಗಿ ಟಿಕೆಟ್ ವಂಚಿತರಾಗಿದ್ದಾರೆ. ಅವರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.




