- ಕಾರು ಇಟ್ಟುಕೊಂಡಿದ್ದ ಮುಧೋಳದ ಸಂಘ ಪರಿವಾರದ ಕಾರ್ಯಕರ್ತನನ್ನು ವಿಚಾರಣೆ ನಡೆಸಿದ ಸಿಸಿಬಿ
- ‘ಡ್ರೈವಿಂಗ್ ಸ್ಕೂಲ್’ ನಡೆಸುತ್ತಿದ್ದ ಸಂಘಪರಿವಾರದ ಕಾರ್ಯಕರ್ತ ಕಿರಣ್ ಗಣಪ್ಪಗೋಳ
ಉದ್ಯಮಿ ಗೋವಿಂದ ಪೂಜಾರಿಯವರಿಗೆ ಬಿಜೆಪಿ ಎಂಎಲ್ಎ ಟಿಕೆಟ್ ನೀಡಿಸುವುದಾಗಿ ನಂಬಿಸಿ 5 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿ ಚೈತ್ರಾ ಕುಂದಾಪುರ ಕಾರನ್ನು ಬಾಗಲಕೋಟೆಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬಾಗಲಕೋಟೆಯ ಮುಧೋಳದ ಸಂಘ ಪರಿವಾರದ ಕಾರ್ಯಕರ್ತನೋರ್ವನ ಮನೆ ಬಳಿ ಕಾರು ಪತ್ತೆಯಾಗಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
32 ವರ್ಷದ ಸಂಘ ಪರಿವಾರದ ಕಾರ್ಯಕರ್ತ ಕಿರಣ್ ಗಣಪ್ಪಗೋಳ ಎಂಬುವವನ ಮನೆಯಲ್ಲಿದ್ದ KA 20 ME 7253 ನೋಂದಣಿ ಸಂಖ್ಯೆ ಹೊಂದಿರುವ ಚೈತ್ರಾಳ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಮುಧೋಳ ನಗರದಲ್ಲಿ ಬಲಪಂಥೀಯ ಸಂಘಟನೆಗಳಿಂದ ಆಯೋಜಿಸಲಾಗಿದ್ದ ಕೆಲವು ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಿದ್ದ ವೇಳೆ ಚೈತ್ರಾ ಕುಂದಾಪುರಗೆ ಕಿರಣ್ ಪರಿಚಯವಾಗಿತ್ತು. ಕಿರಣ್ ಮುಧೋಳ ನಗರದಲ್ಲಿ ‘ಡ್ರೈವಿಂಗ್ ಸ್ಕೂಲ್’ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಕಿರಣ್, ಮೂರು ಬಾರಿ ನಗರಕ್ಕೆ ಚೈತ್ರಾ ಕುಂದಾಪುರಳನ್ನು ಅತಿಥಿಯಾಗಿ ಭಾಷಣಕ್ಕೆಂದು ಕರೆಸಿದ್ದನು.
ಚೈತ್ರಾಳ ವಿರುದ್ಧ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಸೆ. 9ರಂದು ಕಿರಣ್ಗೆ ಕರೆ ಮಾಡಿದ್ದ ಚೈತ್ರಾ ಆಪ್ತ, ಪ್ರಕರಣದ ಏಳನೇ ಆರೋಪಿ ಶ್ರೀಕಾಂತ್, “ಸೊಲ್ಲಾಪುರದ ಒಂದು ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂದೆ ಚೈತ್ರಾ ಕಾರನ್ನು ನಿಲ್ಲಿಸಿದ್ದೇವೆ. ಅದನ್ನು ತಂದು ನಿಮ್ಮ ಬಳಿ ಇಟ್ಟುಕೊಳ್ಳಿ” ಎಂದು ತಿಳಿಸಿದ್ದಾಗಿ ವರದಿಯಾಗಿದೆ.
ಶ್ರೀಕಾಂತ್ ನೀಡಿದ್ದ ಸೂಚನೆಯಂತೆ ಸೆ. 9ರಂದು ಸೊಲ್ಲಾಪುರಕ್ಕೆ ತೆರಳಿ, ಕಾರಿನ ಕೀ ಪಡೆದುಕೊಂಡು ತನ್ನ ಮನೆಯ ಆವರಣದಲ್ಲಿ ಇರಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಕಾರಿನ ಬಗ್ಗೆ ಮಾಹಿತಿ ಪಡೆದುಕೊಂಡು ಭಾನುವಾರ ಮುಧೋಳದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಚೈತ್ರಾಳ ಹೆಸರಿನಲ್ಲಿಯೇ ಇರುವ ಕಾರು
ಶ್ರೀಕಾಂತ್ ಮತ್ತು ಕಿರಣ್ ಕರೆ ಆಧಾರದ ಮೇಲೆ ಸಿಸಿಬಿ ಪೊಲೀಸರು, ಚೈತ್ರಾಳ ಹೆಸರಿನಲ್ಲಿಯೇ ಇರುವ ಕಾರನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ, ಸೊಲ್ಲಾಪುರದಿಂದ ಕಾರು ತಂದಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಕಿರಣ್ನನ್ನು ಕೂಡ ವಿಚಾರಣೆ ನಡೆಸಿದ್ದು, ತನಿಖೆಯ ವಿಚಾರವಾಗಿ ಕರೆದಾಗ ಬರುವಂತೆ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ. KA-20 ME 7253 ಸಂಖ್ಯೆ ಕಾರ್ 2023ರಲ್ಲಿ ಚೈತ್ರಾ ಕುಂದಾಪುರ ಹೆಸರಿನಲ್ಲಿಯೇ ಖರೀದಿಯಾಗಿದೆ.
ಸಿಸಿಬಿ ಪೊಲೀಸರ ತನಿಖೆ ವೇಳೆ ಚೈತ್ರಾ ಸ್ಥಿರಾಸ್ತಿ, ಚರಾಸ್ತಿ ಪತ್ತೆಯಾಗಿದ್ದು, ಒಟ್ಟು ₹1.08ಕೋಟಿ ಆಸ್ತಿ-ಪಾಸ್ತಿ ದಾಖಲೆಗಳು ಪತ್ತೆಯಾಗಿವೆ. ಅದರಲ್ಲಿ ₹65 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಅಲ್ಲದೇ, ಚೈತ್ರಾ ಉಡುಪಿಯ ಉಪ್ಪೂರಿನಲ್ಲಿರುವ ಸಹಕಾರಿ ಬ್ಯಾಂಕ್ನಲ್ಲಿ ₹40 ಲಕ್ಷ ಠೇವಣಿ ಇಟ್ಟಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.





