ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ನಡೆಸಲಾದ ‘ಆಟ’ ಇನ್ನು ಮುಂದೆ ಇತರ ರಾಜ್ಯಗಳಲ್ಲಿ ಆಡಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರ ಆರೋಪಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎ ಬಿಹಾರದಲ್ಲಿ ಮುನ್ನಡೆ ಸಾಧಿಸುತ್ತಿರುವ ನಡುವೆ ಯಾದವ್ ಈ ಹೇಳಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಬಿಹಾರದಲ್ಲಿ ಎಸ್ಐಆರ್ ಮೂಲಕ ನಡೆಸಲಾದ ಆಟ ಈಗ ಬಹಿರಂಗಗೊಂಡಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ ಅಥವಾ ಬೇರೆಲ್ಲಿಯೂ ಅಂತಹ ‘ಚುನಾವಣಾ ಪಿತೂರಿಗಳು’ ಸಾಧ್ಯವಿಲ್ಲ. ನಾವು ಇನ್ನು ಮುಂದೆ ಅವರಿಗೆ ಈ ರೀತಿ ಆಟವಾಡಲು ಬಿಡಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ ಚುನಾವಣೆ | ಬಿಜೆಪಿ 9, ಜೆಡಿಯು 6, ಆರ್ಜೆಡಿ 3 ಕ್ಷೇತ್ರಗಳಲ್ಲಿ ಗೆಲುವು
“ಸಿಸಿಟಿವಿಯಂತೆ, ನಮ್ಮ ‘ಪಿಪಿಟಿವಿ’ ಅಥವಾ ‘ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಪ್ರಹರಿ (ಕಾವಲುಗಾರ)’ ಜಾಗರೂಕರಾಗಿ ಬಿಜೆಪಿಯ ಯೋಜನೆಗಳನ್ನು ವಿಫಲಗೊಳಿಸುತ್ತದೆ” ಎಂದೂ ತಿಳಿಸಿದ್ದಾರೆ.
ಬಿಹಾರದಲ್ಲಿ ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಎಸ್ಐಆರ್ ಪ್ರಕ್ರಿಯೆ ನಡೆಸಲಾಗಿದ್ದು, ಚುನಾವಣಾ ಆಯೋಗವು ಸೆಪ್ಟೆಂಬರ್ 30ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಪರಿಷ್ಕರಣೆ ಬಳಿಕ ಸುಮಾರು 47 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಇದರಲ್ಲಿ ಬಹುತೇಕರು ಬಡ, ಮಧ್ಯಮ ವರ್ಗದವರು. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತರಾತುರಿಯಲ್ಲಿ ನಡೆಸಲಾಗುವ ಈ ಎಸ್ಐಆರ್ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸಾಮಾನ್ಯವಾಗಿ ಆಧಾರ್, ರೇಷನ್ ಕಾರ್ಡ್ ಅಥವಾ ಸಾಮಾನ್ಯ ವೋಟರ್ ಐಡಿಗಳನ್ನು (EPIC) ನಮ್ಮ ಗುರುತಿನ ಪುರಾವೆಯಾಗಿ ಬಳಸಲಾಗುತ್ತದೆ. ಆದರೆ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಈ ಮೂರು ದಾಖಲೆಗಳನ್ನು ಪುರಾವೆಯಾಗಿ ಬಳಸಲು ಅವಕಾಶ ನೀಡದೆ ಇರುವುದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಆದರೆ ಈ ಮೂರು ದಾಖಲೆಗಳನ್ನು ಪುರಾವೆಯಾಗಿ ಬಳಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.





