ಪಶ್ಚಿಮ ಬರ್ಧಮಾನ್ ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. “ಹುಡುಗಿಯರು ರಾತ್ರಿಯಲ್ಲಿ (ಕಾಲೇಜಿನ) ಹೊರಗೆ ಹೋಗಲು ಬಿಡಬಾರದು. ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜವಾಬ್ದಾರಿಯೂ ಹುಡುಗಿಯರು ಹೊಂದಿದ್ದಾರೆ” ಎಂದು ಹೇಳಿದ್ದಾರೆ.
ಸಾಮೂಹಿಕ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳ ಬಂಧನದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, “ಸಂತ್ರಸ್ತ ಮಹಿಳೆ ಮಧ್ಯರಾತ್ರಿ 12.30ಕ್ಕೆ ಕಾಲೇಜಿನಿಂದ ಹೇಗೆ ಹೊರಬಂದಳು” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಇಂಡಿಯಾ’ ಒಕ್ಕೂಟಕ್ಕೆ 315 ಸೀಟು, ಬಿಜೆಪಿ 200 ದಾಟದು: ಮಮತಾ ಬ್ಯಾನರ್ಜಿ
“ಹುಡುಗಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಳು. ಮಧ್ಯರಾತ್ರಿ 12.30ಕ್ಕೆ ಅವಳು ಹೇಗೆ ಹೊರಬಂದಳು? ನನಗೆ ತಿಳಿದಿರುವಂತೆ, ಘಟನೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಏನಾಯಿತು ಎಂದು ನನಗೆ ತಿಳಿದಿಲ್ಲ. ತನಿಖೆ ನಡೆಯುತ್ತಿದೆ. ಘಟನೆಯನ್ನು ನೋಡಿ ನನಗೆ ಆಘಾತವಾಗಿದೆ. ಆದರೆ ಖಾಸಗಿ ವೈದ್ಯಕೀಯ ಕಾಲೇಜುಗಳು ಸಹ ತಮ್ಮ ವಿದ್ಯಾರ್ಥಿಗಳನ್ನು, ವಿಶೇಷವಾಗಿ ಹುಡುಗಿಯರನ್ನು ನೋಡಿಕೊಳ್ಳಬೇಕು” ಎಂದು ಹೇಳಿದ್ದಾರೆ. “ಹುಡುಗಿಯರನ್ನು ರಾತ್ರಿಯಲ್ಲಿ ಹೊರಗೆ (ಕಾಲೇಜಿನ) ಹೋಗಲು ಬಿಡಬಾರದು. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಅರಣ್ಯ ಪ್ರದೇಶವೂ ಇದೆ” ಎಂದಿದ್ದಾರೆ.
ಇನ್ನು ಇಂತಹ ಘಟನೆಗಳು ನಡೆದಾಗ ಪಶ್ಚಿಮ ಬಂಗಾಳವನ್ನು ಪ್ರತ್ಯೇಕವಾಗಿ ಕಾಣಲಾಗುತ್ತದೆ. ಮೂರು ವಾರಗಳ ಹಿಂದೆ, ಒಡಿಶಾದ ಬೀಚ್ನಲ್ಲಿ ಮೂವರು ಹುಡುಗಿಯರ ಮೇಲೆ ಅತ್ಯಾಚಾರ ನಡೆಸಲಾಗಿದೆ. ಒಡಿಶಾ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತಿದೆ ಎಂದೂ ಪಶ್ಚಿಮ ಬಂಗಾಳ ಸರ್ಕಾರ ಪ್ರಶ್ನಿಸಿದೆ.
“ಮಣಿಪುರ, ಯುಪಿ, ಬಿಹಾರ, ಒಡಿಶಾದಲ್ಲಿ ಇಂತಹ ಘಟನೆಗಳು ನಡೆದಿವೆ. ಸರ್ಕಾರ ಅಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾವು ಭಾವಿಸುತ್ತೇವೆ. ನಮ್ಮ ರಾಜ್ಯದಲ್ಲಿ, ನಾವು 1-2 ತಿಂಗಳೊಳಗೆ ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದೇವೆ. ಕೆಳ ನ್ಯಾಯಾಲಯವು ಆರೋಪಿಗಳನ್ನು ಗಲ್ಲಿಗೇರಿಸಲು ಆದೇಶ ನೀಡಿದೆ” ಎಂದು ಹೇಳಿದರು.





