ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ. ಕಾಂಗ್ರೆಸ್ ಸರ್ಕಾರವು ಪ್ರತೀಕಾರ ತೀರಿಸಿಕೊಳ್ಳಲು ಸಂತ್ರಸ್ತೆಯನ್ನು ಬಳಸಿಕೊಂಡಿದೆ ಎಂದು ಪ್ರಜ್ವಲ್ ಪರ ವಾದಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಹೇಳಿಕೊಂಡಿದ್ದಾರೆ.
ಮನೆಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಆಗಸ್ಟ್ 2ರಂದು ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್ಗೆ ಜೀವಿತಾವಧಿಯ ಸೆರೆವಾಸ ವಿಧಿಸಿದೆ. ಜತೆಗೆ 11.60 ಲಕ್ಷ ರೂ. ದಂಡ ವಿಧಿಸಿದೆ. ಇದರಲ್ಲಿ 11.25 ಲಕ್ಷ ರೂ. ಹಣವನ್ನು ಪರಿಹಾರ ರೂಪದಲ್ಲಿ ಸಂತ್ರಸ್ತೆಗೆ ನೀಡುವಂತೆ ತಿಳಿಸಿದೆ.
ಇದನ್ನು ಓದಿದ್ದೀರಾ? ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಸರ್ಕಾರಕ್ಕೆ ನೋಟಿಸ್
ಈ ತೀರ್ಪನ್ನು ಬದಿಗೆ ಸರಿಸಿ ಜಾಮೀನು ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಇಂದು ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಟಿ ವೆಂಕಟೇಶ್ ನಾಯಕ್ ಅವರ ವಿಭಾಗೀಯ ಪೀಠ ನಡೆಸಿದೆ.
ವಿಚಾರಣೆ ವೇಳೆ ವಾದಿಸಿದ ಪ್ರಜ್ವಲ್ ರೇವಣ್ಣ ಪರ ವಕೀಲ ಸಿದ್ಧಾರ್ಥ್ ಲೂಥ್ರಾ, “ಸರ್ಕಾರ ಸಂತ್ರಸ್ತೆಯನ್ನು ಬಳಸಿ ಪ್ರತೀಕಾರ ತೀರಿಸಿದೆ. ಎಲ್ಲಾ ರೀತಿಯ ತನಿಖೆಗೂ ಪ್ರಜ್ವಲ್ ಸಹಕರಿಸಿದ್ದಾರೆ. ಸಂತ್ರಸ್ತೆ ಮೂರು ವರ್ಷ ಮೌನವಾಗಿದ್ದು, ನಾಲ್ಕನೆ ವರ್ಷ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಅತ್ಯಾಚಾರ ನಡೆದ ನಂತರವೂ ಸಂತ್ರಸ್ತೆ ಹಾಸನದ ಗನ್ನಿಗಢ ತೋಟದ ಮನೆಗೆ ಹೋಗಿದ್ದರು” ಎಂದಿದ್ದಾರೆ.
“ಪ್ರಜ್ವಲ್ ತನ್ನ ಮಾಜಿ ಕಾರು ಚಾಲಕ ಕಾರ್ತಿಕ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಮಾತ್ರ ಸರ್ಕಾರ ನಡೆಸಿಲ್ಲವೇಕೆ” ಎಂದೂ ಪ್ರಶ್ನಿಸಿದ್ದಾರೆ.
ಈ ವಾದವನ್ನು ತಿರಸ್ಕರಿಸಿದ ವಿಶೇಷ ತನಿಖಾ ದಳ ಪ್ರತಿನಿಧಿಸಿರುವ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿ, “ವ್ಯಾಪಕವಾಗಿ ಹರಿದಾಡಿದ ಅಶ್ಲೀಲ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಅಂಗಾಂಗ, ಬಟ್ಟೆ ಹೊಂದಿಕೆಯಾಗಿದೆ. ಸಂತ್ರಸ್ತೆ ಮತ್ತು ಪ್ರಜ್ವಲ್ ಬಟ್ಟೆಯಲ್ಲಿನ ವಂಶವಾಹಿ ಒಂದೇ ಆಗಿದೆ. ಇದು ಯಾವುದನ್ನೂ ಪ್ರಜ್ವಲ್ ಪರ ವಕೀಲರು ಅಲ್ಲಗಳೆದಿಲ್ಲ” ಎಂದು ಹೇಳಿದೆ.
ಉಭಯ ಪಕ್ಷಕಾರರ ವಾದ ಆಲಿಸಿದ ನ್ಯಾಯಾಲಯವು ಲಿಖಿತ ವಾದಾಂಶ ಸಲ್ಲಿಸುವಂತೆ ಸೂಚಿಸಿದೆ, ಹಾಗೆಯೇ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.





