ಗುರುವಾರ (ಜ.೫), ಪಶ್ಚಿಮ ಬಂಗಾಳ ಬಜೆಟ್ ಅಧಿವೇಶನದಲ್ಲಿ ಸದನವನ್ನು ಉದ್ದೇಶಿಸಿ ಸುಮಾರು ನಾಲ್ಕೂವರೆ ನಿಮಿಷಗಳ ಕಾಲ ಲಿಖಿತ ಭಾಷಣವನ್ನು ಓದಿದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಭಾಷಣವನ್ನು ಹಠಾತ್ತನೆ ನಿಲ್ಲಿಸಿ, ಸದನದಿಂದ ಹೊರನಡೆದರು. ತಮಿಳುನಾಡು, ಕೇರಳ ಮತ್ತು ಕರ್ನಾಟಕದ ರಾಜ್ಯಪಾಲರು ತೋರಿದ ಪ್ರವೃತ್ತಿಯನ್ನೇ ಬಂಗಾಳದ ರಾಜ್ಯಪಾಲರು ಕೂಡ ಮೆರೆದಿದ್ದಾರೆ. ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಧೋರಣೆಗಳು ಹೊಸ ಚಹರೆಯನ್ನು ಹುಟ್ಟುಹಾಕಿವೆ. ಸದನದಲ್ಲಿ ಸರ್ಕಾರವು ಕೊಟ್ಟ ಭಾಷಣವನ್ನು ಓದಲು ತಿರಸ್ಕರಿಸುವುದು, ಸರ್ಕಾರಗಳ ನೀತಿ-ನಿರೂಪಣೆಯ ಅಧಿಕಾರವನ್ನು ನಿರ್ಬಂಧಿಸುವ ಪ್ರವೃತ್ತಿ ಹೆಚ್ಚಾಗಿದೆ.
ಸಂವಿಧಾನದ 176ನೇ ವಿಧಿಯು ಶಾಸಕಾಂಗ ಸಭೆಗೆ ನಡೆವ ಸಾರ್ವತ್ರಿಕ ಚುನಾವಣೆಯ ನಂತರದ ಮೊದಲ ಅಧಿವೇಶನ ಮತ್ತು ಪ್ರತಿ ವರ್ಷದ ಮೊದಲ ಅಧಿವೇಶನದ ಆರಂಭದಲ್ಲಿ, ರಾಜ್ಯಪಾಲರು ವಿಧಾನಸಭೆಯನ್ನು, ವಿಧಾನ ಪರಿಷತ್ ಅನ್ನು ಹೊಂದಿದ್ದರೆ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಬೇಕು ಎಂದು ಹೇಳುತ್ತದೆ.
ಆದರೆ, ಕೇರಳ ರಾಜ್ಯಪಾಲರು ಭಾಷಣ ಮಾಡುವುದಕ್ಕೇ ನಿರಾಕರಿಸಿದರು, ತಮಿಳುನಾಡು ಮತ್ತು ಕರ್ನಾಟಕದ ರಾಜ್ಯಪಾಲರು ತಮ್ಮಿಷ್ಟದ ಎರಡು ಸಾಲು ಭಾಷಣ ಮಾಡಿ ಹೊರನಡೆದರು. ಈಗ, ಬಂಗಾಳದ ರಾಜ್ಯಪಾಲರೂ ನಾಲ್ಕು ನಿಮಿಷ ಭಾಷಣ ಮಾಡಿ, ಹಠಾತ್ತನೆ ಭಾಷಣ ನಿಲ್ಲಿಸಿದರು. ಆದರೆ, ಏಕಾಏಕಿ ಹೊರನಡೆಯುವ ಬದಲಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕುರ್ಚಿಯ ಬಳಿಗೆ ತೆರಳಿ, ಅವರ ಕೈ ಹಿಡಿದು ಮಾತನಾಡಿದರು. ಸದನದಲ್ಲಿ ಆಡಳಿತ ಪಕ್ಷದೊಂದಿಗಿನ ಸಂಭವನೀಯ ಘರ್ಷಣೆಯನ್ನು ತಪ್ಪಿಸಿದರು.
ಆದಾಗ್ಯೂ, ರಾಜ್ಯಪಾಲರ ನಡೆಗೆ ಬಹುಪರಾಕ್ ಹಾಕಿದ ವಿಪಕ್ಷ ಬಿಜೆಪಿಗರು “ರಾಜಪಾಲರ ಕ್ರಮವು ಮಮತಾ ಬ್ಯಾನರ್ಜಿ ಸರ್ಕಾರ ರಚಿಸಿದ ಭಾಷಣವನ್ನು ಸಾಂಕೇತಿಕವಾಗಿ ತಿರಸ್ಕರಿಸಿದಂತಿದೆ” ಎಂದು ಬಣ್ಣಿಸಿದ್ದಾರೆ. ಸದ್ಯ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವಿನ ಸಂಭಾಷಣೆಯಲ್ಲಿ ಏನಿತ್ತು ಎಂಬುದು ಗುಟ್ಟಾಗಿ ಉಳಿದಿದೆ.
ಅದೇನೆ ಇರಲಿ, ರಾಜ್ಯಪಾಲ ಬೋಸ್ ಅವರು ಕೇಂದ್ರ ಸರ್ಕಾರವನ್ನು ಟೀಕಿಸುವ ಸಾಲುಗಳನ್ನು ತಪ್ಪಿಸುವುದಕ್ಕಾಗಿಯೇ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ ಎಂಬುದು ಸ್ಪಷ್ಟ. ಅದನ್ನು, ಟಿಎಂಸಿಯ ಶಾಸಕರೂ ಹೇಳುತ್ತಾರೆ. ಅಂತೆಯೇ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಪಾಲರೂ ಕೂಡ ಮನರೇಗಾ. ಹಿಂದಿ ಹೇರಿಕೆ ಸೇರಿದಂತೆ ಕೆಲ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುವುದರಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಸದನದಲ್ಲಿ ಭಾಷಣ ಮಾಡಲು ಹಿಂದೇಟು ಹಾಕಿದ್ದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಕ್ರಮಗಳು ‘ಸಂವಿಧಾನದ ಉಲ್ಲಂಘನೆ’ ಎಂದು ಕರೆದರು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ. ಅವರು ಓದಿದ ಭಾಷಣವನ್ನು ದೆಹಲಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿದರು.
ಈ ಬೆಳವಣಿಗೆಳು ಬಿಜೆಪಿಯೇತರ ಸರ್ಕಾರಗಳ ವಿರುದ್ಧ ರಾಜ್ಯಪಾಲರನ್ನು ಅಸ್ತ್ರವಾಗಿ ಮೋದಿ ಸರ್ಕಾರ ಬಳಸುತ್ತಿದೆ. ಗೌರವಾನ್ವಿತ ಪ್ರಮುಖ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಚರ್ಚೆಯನ್ನು ಮತ್ತೊಮ್ಮೆ ಹುಟ್ಟುಹಾಕಿವೆ. ಪರಿಣಾಮವಾಗಿ, ಹಲವರು ರಾಜ್ಯಪಾಲ ಎಂಬ ಹುದ್ದೆಯನ್ನೇ ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನೂ ಕೆಲವರು, ರಾಜ್ಯಗಳ ಶಾಸಕಾಂಗವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಬೇಕು ಎಂಬ ನಿಯಮವನ್ನೇ ರದ್ದುಗೊಳಿಸಬೇಕು ಎಂದು ವಾದಿಸುತ್ತಿದ್ದಾರೆ. ರಾಜ್ಯಪಾಲ ಎಂಬ ಹುದ್ದೆ ಅನಗತ್ಯವೆಂದು ಹೇಳುತ್ತಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೂಡ, ಸದನದಲ್ಲಿ ರಾಜಪಾಲರ ಭಾಷಣವನ್ನು ರದ್ದುಗೊಳಿಸಲು ಅಗತ್ಯ ಸಾಂವಿಧಾನಿಕ ತಿದ್ದುಪಡಿಗಳಿಗೆ ಒತ್ತಾಯಿಸುತ್ತೇವೆ. ಡಿಎಂಕೆ ಮೈತ್ರಿಕೂಟವು ಬಿಜೆಪಿ ಸರ್ಕಾರದ ಆದೇಶಗಳಿಗೆ ಎಂದಿಗೂ ತಲೆಬಾಗುವುದಿಲ್ಲ” ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ನಾಯಕ ವೈಕೊ ಅವರು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಅಂತೆಯೇ, ಕರ್ನಾಟಕದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೂಡ ರಾಜ್ಯಪಾಲರು ಶಾಸಕಾಂಗಗಳನ್ನು ಉದ್ದೇಶಿಸಿ ಮಾತನಾಡುವ ಪದ್ಧತಿಯನ್ನು ಪುನರ್ವಿಮರ್ಶೆ ಮಾಡಬೇಕು. ಇದರ ಮಹತ್ವ, ಉದ್ದೇಶ ಮತ್ತು ಪಾವಿತ್ರ್ಯ ಕಣ್ಮರೆಯಾಗಿದೆ ಎಂದು ಹೇಳಿದ್ದಾರೆ.
ಗಮನಾರ್ಹವಾಗಿ, ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ರಾಜಪಾಲರ ಭಾಷಣವನ್ನು ಅರ್ಥಹೀನ ಔಪಚಾರಿಕತೆ ಎಂದು ಬಣ್ಣಿಸಿದ್ದು, ಭಾಷಣದಲ್ಲಿ ‘ನನ್ನ ಸರ್ಕಾರ’ ಎಂಬ ಪದವನ್ನು ‘ಸರ್ಕಾರ’ ಎಂದು ಬದಲಾಯಿಸಬೇಕೆಂದು ಸೂಚಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2016ರಲ್ಲಿಯೇ ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸುವಂತೆ ಕರೆ ನೀಡಿದ್ದರು. ರಾಜ್ಯಪಾಲ ಹುದ್ದೆಯು ಫೆಡರಲ್ ಪ್ರಜಾಪ್ರಭುತ್ವ ರಚನೆಗೆ ಹೊಂದಿಕೆಯಾಗುವುದಿಲ್ಲ ಎಂದು ವಾದಿಸಿದ್ದರು. ಭಾರತೀಯ ಕಮ್ಯುನಿಸ್ಟ್ ಪಕ್ಷವೂ ಕೂಡ ರಾಜ್ಯಪಾಲ ಹುದ್ದೆಯ ರದ್ದತಿಯನ್ನು ಪ್ರತಿಪಾದಿಸಿದೆ. ಈಗ, ಇದೇ ಪ್ರತಿಪಾದನೆಗೆ ಕಾಂಗ್ರೆಸ್, ಟಿಎಂಸಿಗಳೂ ಸೇರಿಕೊಂಡಿವೆ.
ಈ ಲೇಖನ ಓದಿದ್ದೀರಾ?: ಟ್ರಂಪ್–ಮೋದಿ ಒಪ್ಪಂದ | ಇದು ಪರಸ್ಪರ ಸಹಕಾರವೋ ಅಥವಾ ಅಮೆರಿಕದ ಒತ್ತಡದ ಹೇರಿಕೆಯೋ?
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ರಾಜಪಾಲ ಎಂಬ ಹುದ್ದೆಯೇ ಬೇಕು-ಬೇಡಗಳ ಚರ್ಚೆಯಲ್ಲಿ ಸಿಲುಕಿದೆ. ಸ್ವತಂತ್ರ್ಯ ಸಂದರ್ಭದ ಸಂವಿಧಾನ ಸಭೆಯ ಚರ್ಚೆಗಳು ರಾಜ್ಯಪಾಲರು ಕನಿಷ್ಠ ವಿವೇಚನೆಯನ್ನು ಚಲಾಯಿಸಬೇಕೆಂದು ಸೂಚಿಸುತ್ತವೆ. ಸಂವಿಧಾನ ಕರ್ತೃ, ಮೊದಲ ಕಾನೂನು ಸಚಿವ ಡಾ. ಬಿ.ಆರ್. ಅಂಬೇಡ್ಕರ್ ಅವರು “ರಾಜ್ಯಪಾಲರು ಒಕ್ಕೂಟದ ಏಜೆಂಟರಾಗಿ ಕಾರ್ಯ ನಿರ್ವಹಿಸಬಾರದು ಅಥವಾ ಚುನಾಯಿತ ಸರ್ಕಾರಗಳ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಬಾರದು” ಎಂದು ಒತ್ತಿ ಹೇಳಿದ್ದರು.
ಸುಪ್ರೀಂ ಕೋರ್ಟ್ ರಾಜಪಾಲರನ್ನು ತತ್ವಜ್ಞಾನಿಗಳು, ಸ್ನೇಹಿತರು ಹಾಗೂ ಮಾರ್ಗದರ್ಶಕರು ಎಂದು ಬಣ್ಣಿಸಿದೆ. ಇದೇ ರೀತಿಯ ಅಭಿಪ್ರಾಯವನ್ನು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕೂಡ ವ್ಯಕ್ತಪಡಿಸಿದ್ದಾರೆ.
ಆದರೆ, ಇಂದು ರಾಜ್ಯಪಾಲರು ಬ್ರಿಟಿಷ್ ಗವರ್ನರ್-ಜನರಲ್ಗಳಿಗಿಂತ ಹೆಚ್ಚಿನ ಅಧಿಕಾರವನ್ನು ಹೊಂದಿದ್ದಾರೆ ಎಂದು ವಿಮರ್ಶಕರು ವಾದಿಸುತ್ತಾರೆ. ಸರ್ಕಾರದ ಸರ್ಕಾರದ ನಿಲುವು-ಧೋರಣೆಗಳನ್ನು ರಾಜ್ಯಗಳ ಮೇಲೆ ಹೇರುತ್ತಿದ್ದಾರೆ. ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡದೆ, ಅವುಗಳನ್ನು ದೀರ್ಘಕಾಲದವರೆಗೆ ತಡೆಹಿಡಿಯುವ ಛಾಳಿಯನ್ನೂ ರಾಜ್ಯಪಾಲರುಗಳು ಮೈಗೂಡಿಸಿಕೊಂಡಿದ್ದಾರೆ. ಅವರ ಈ ಧೋರಣೆಯನ್ನು ವಿಪಕ್ಷಗಳು ‘ಪಾಕೆಟ್ ವೀಟೋ’ ಎಂದು ಕರೆದಿವೆ. ಆದಾಗ್ಯೂ, ಮಸೂದೆಗಳನ್ನು ಅನಿರ್ದಿಷ್ಟವಾಗಿ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಇನ್ನು, ರಾಜ್ಯಪಾಲರುಗಳು ರಾಷ್ಟ್ರಪತಿಗಳಂತೆಯೇ ಆರೋಪ ಮತ್ತು ಕಾನೂನು ಕ್ರಮಗಳಿಂದ ವಿನಾಯಿತಿ ಪಡೆದಿದ್ದಾರೆ. ಆದ್ದರಿಂದಲೇ, 1988ರಲ್ಲಿ ಸರ್ಕಾರಿಯಾ ಆಯೋಗವು ರಾಜ್ಯಪಾಲರ ವಿರುದ್ಧ ಗಂಭೀರ ಆರೋಪಗಳು ಬಂದರೆ, ಅವರ ವಿರುದ್ಧ ದೋಷಾರೋಪಣೆ ರೂಪಿಸಲು ಕಾರ್ಯವಿಧಾನವನ್ನು ಶಿಫಾರಸು ಮಾಡಿತು. ಆದರೆ, ಈ ಪ್ರಸ್ತಾವನೆಯನ್ನು ಸತತ ಕೇಂದ್ರ ಸರ್ಕಾರಗಳು ನಿರ್ಲಕ್ಷಿಸಿವೆ. ಈಗ, ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರ ಸಂಸ್ಥೆಗಳ ಕೆಲಸವನ್ನು ಸಂಘಟಿಸುವುದು ಸೇರಿದಂತೆ ರಾಜ್ಯಪಾಲರಿಗೆ ಹೆಚ್ಚಿನ ಕಾರ್ಯನಿರ್ವಾಹಕ ಅಧಿಕಾರಗಳನ್ನು ನೀಡಲು ಎದುರು ನೋಡುತ್ತಿದೆ.
ರಾಜ್ಯಪಾಲರು ಬಿಜೆಪಿಯ ರಾಜಕೀಯ ಉದ್ದೇಶಗಳನ್ನು ಸಾಧಿಸುವ ಸಾಧನಗಳಾಗಿ ಮಾರ್ಪಟ್ಟಿದ್ದಾರೆ. ಇದು ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆಯಾಗಿದ್ದು, ಪ್ರಜಾಪ್ರಭುತ್ವದ ಮೇಲೆ ಕಾರ್ಮೋಡ ಕವಿಯುಂತೆ ಮಾಡಿದೆ.





