ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆಗೆ ಜು. 27ರಂದು ಕಡೆ ದಿನವಾಗಿ ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಗೃಹಜ್ಯೋತಿಗೆ ಜುಲೈ 27ರಂದು ಅರ್ಜಿ ಸಲ್ಲಿಕೆಗೆ ಕಡೆ ದಿನವಾಗಿ ನಿಗದಿಪಡಿಸಲು ತೀರ್ಮಾನಿಸಲಾಗಿದ್ದು, ಮುಂದಿನ ಎರಡು ತಿಂಗಳು ವಿದ್ಯುತ್ ಅದಾಲತ್ ಮಾಡಲಾಗುತ್ತದೆ. ಗೃಹಜ್ಯೋತಿ ಸೌಲಭ್ಯ ಪಡೆಯಲು ಅಡ್ಡಿಯಾಗಿರುವ ಕೆಲವಾರು ವ್ಯಾಜ್ಯಗಳನ್ನು, ಕುಂದುಕೊರತೆಗಳನ್ನು ನಿವಾರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ರಾಜ್ಯದಾದ್ಯಂತ ಒಂದು ಕೋಟಿಗೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ವಿದ್ಯುತ್ ಬಾಕಿ ಇರುವವರಿಗೂ ಈ ಯೋಜನೆಯ ಲಾಭ ಪಡೆಯಲು ಅನುವು ಮಾಡಿಕೊಟ್ಟು, ಬಾಕಿ ಬಿಲ್ ಪಾವತಿಗೆ ಸೆಪ್ಟೆಂಬರ್ ವರೆಗೂ ಗಡುವು ನೀಡಲಾಗಿತ್ತು.
ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ನಿಗದಿ ಮಾಡಿಲ್ಲ ಎಂದು ಹೇಳಲಾಗಿತ್ತು. ಪ್ರತಿ ತಿಂಗಳ 25ರ ಒಳಗೆ ಅರ್ಜಿ ಸಲ್ಲಿಸಿದರೆ, ಮುಂದಿನ ತಿಂಗಳ ಬಿಲ್ ಉಚಿತ ಎಂದು ಹೇಳಲಾಗಿತ್ತು. ಆದರೆ, ಈಗ ಇದ್ದಕ್ಕಿದ್ದಂತೆ ಇಂಧನ ಇಲಾಖೆ ಸಚಿವರು ತಮ್ಮ ನಿರ್ಧಾರ ಬದಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಭಾಧ್ಯಕ್ಷ ಸ್ಥಾನಕ್ಕೇರಲು ಟ್ರೋಲರ್ ಕಾರಣ, ಧೈರ್ಯದಿಂದ ಮಾತನಾಡಿ: ನೂತನ ಶಾಸಕರಿಗೆ ಖಾದರ್ ಕಿವಿಮಾತು




