ಎಎಪಿ ಶಾಸಕರೊಬ್ಬರ ಮೇಲೆ ಕಿಡಿಗೇಡಿಯೊಬ್ಬ ಬೂಟು ಎಸೆದಿರುವ ಘಟನೆ ಗುಜರಾತ್ನ ಜಾಮ್ನಗರದಲ್ಲಿ ನಡೆದಿದೆ. ನಗರದ ಟೌನ್ಹಾಲ್ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆರೋಪಿ ಕೃತ್ಯ ಎಸಗಿದ್ದು, ಆತನನ್ನು ಸ್ಥಳದಲ್ಲಿದ್ದವರು ಥಳಿಸಿದ್ದಾರೆ.
ಗುಜರಾತ್ನ ವಿಶ್ವದರ್ ವಿಧಾನಸಭಾ ಕ್ಷೇತ್ರ ಎಎಪಿ ಶಾಸಕ ಗೋಪಾಲ್ ಇಟಾಲಿಯಾ ಅವರ ಮೇಲೆ ಆರೋಪಿ ಬೂಟು ಎಸೆದಿದ್ದಾನೆ. ಆತನನ್ನು ಕಾಂಗ್ರೆಸ್ ಕಾರ್ಯಕರ್ತ ಛತ್ರಪಾಲ್ ಸಿನ್ಹ ಎಂದು ಗುರುತಿಸಲಾಗಿದೆ.
ಜಾಮ್ನಗರ ನಗರ ಪಾಲಿಕೆಯ ಕಾಂಗ್ರೆಸ್ ಕೌನ್ಸಿಲರ್ ಫೆಮಿದಾಬೆನ್ ಜುನೇಜಾ, ಅಸ್ಲಾಂ ಖಿಲ್ಜಿ ಹಾಗೂ ವಕೀಲ ಜನಾಬೆನ್ ಖಾಫಿ ಅವರು ಎಎಪಿ ಶಾಸಕ ಗೋಪಾಲ್ ಸಮ್ಮುಖದಲ್ಲಿ ಎಎಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ, ಕುಪಿತಗೊಂಡ ಆರೋಪಿ, ಶಾಸಕರ ಮೇಲೆ ಬೂಟು ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಲೇಖನ ಓದಿದ್ದೀರಾ?: ದ್ವೇಷ ಭಾಷಣ ನಿಷೇಧ ವಿಧೇಯಕ | ಕರ್ನಾಟಕದ ಸೌಹಾರ್ದ ಪರಂಪರೆಗೆ ರಕ್ಷಾ ಕವಚವಾಗಬಲ್ಲದೇ?
ಶಾಸಕ ಗೋಪಾಲ್ ಇಟಾಲಿಯಾ ಅವರು ಸಭೆಯಲ್ಲಿ ಮಾತನಾಡುವಾಗ, ಆರೋಪಿ ಛತ್ರಪಾಲ್ ಸಿನ್ಹ್ ವೇದಿಕೆಯ ಬಳಿ ನೆಲದಲ್ಲಿ ಕುಳಿತಿದ್ದರು. ಏಕಾಏಕಿ ಗೋಪಾಲ್ ಅವರ ಎಡೆಗೆ ಬೂಟು ಎಸೆದಿದ್ದಾರೆ. ಕ್ಷಣಾರ್ಧದಲ್ಲಿ ಗೋಪಾಲ್ ಅವರು ಪೆಟ್ಟು ಬೀಳುವುದರಿಂದ ತಪ್ಪಿಸಿಕೊಂಡಿದ್ದಾರೆ. ತಕ್ಷಣವೇ ವೇದಿಕೆಯ ಮೇಲಿದ್ದವರು ಆತನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರಿಗೆ ಒಪ್ಪಿಸಿದ್ದಾರೆ.
A man threw a shoe at AAP MLA Gopal Italia during a meeting in Jamnagar, Gujarat, briefly causing chaos. Police quickly restrained him, restored order, and some chairs were damaged in the commotion. pic.twitter.com/ZYf5O48E9B
— The Siasat Daily (@TheSiasatDaily) December 6, 2025
ಘಟನೆಯ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿಯ ಕೈವಾಡವಿದೆ ಎಂದು ಎಎಪಿ ಆರೋಪಿಸಿದೆ. ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮಿತ್ ಚಾವ್ಡಾ, ‘ಘಟನೆಯಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಪಾತ್ರವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.




