ಲೋಕಸಭಾ ಚುನಾವಣೆ ಎದುರಾಗಿರುವ ಸಮಯದಲ್ಲೇ ಚುನಾವಣಾ ಬಾಂಡ್ಗಳ ವಿಚಾರ ಭಾರೀ ಸದ್ದು ಮಾಡುತ್ತಿದೆ. ಆದರೆ, ಎಲ್ಲ ರಾಜಕೀಯ ಪಕ್ಷಗಳು ಸೀಟು ಹಂಚಿಕೆಯ ಹಿಂದೆ ಬಿದ್ದಿದ್ದು, ಮುಖ್ಯ ವಿಚಾರವನ್ನೇ ಕಡೆಗಣಿಸಿವೆ. ಮೋದಿ ಪ್ರಣೀತ ಮಾಧ್ಯಮಗಳೂ ಚುನಾವಣಾ ಬಾಂಡ್ ವಿಚಾರವನ್ನೇ ಮರೆತಿವೆ. ಇಂತಹ ಸಮಯದಲ್ಲಿ, ಅದೇ ಸೀಟು ಹಂಚಿಕೆ ಬಿಕ್ಕಟ್ಟಿನಿಂದಾಗಿ, ಹರಿಯಾಣ ಸರ್ಕಾರದಲ್ಲಿ ಒಡಕು ಮೂಡುತ್ತಿದೆ. ಬಹುಶಃ ಅಲ್ಲಿನ ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರ ಉರುಳುವ ಸಾಧ್ಯತೆಗಳೂ ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.
2019ರ ಅಕ್ಟೋಬರ್ನಲ್ಲಿ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವು ಬಹುಮತ ಗಳಿಸಿರಲಿಲ್ಲ. ಪರಿಣಾಮ, ಬಿಜೆಪಿ-ಜೆಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. ಈ ವರ್ಷದ ಅಂತ್ಯದಲ್ಲಿ ಸರ್ಕಾರದ ಆಡಳಿತವಾಧಿ ಮುಗಿಯಲಿದೆ. ಅದಕ್ಕೂ ಮುನ್ನವೇ, ಜೆಜೆಪಿ ಜೊತೆ ಮೈತ್ರಿ ತೊರೆಯಲು ಬಿಜೆಪಿ ಮುಂದಾಗಿದೆ. ರಾಜ್ಯ ವಿಧಾನಸಭೆಯಲ್ಲಿರುವ ಸ್ವತಂತ್ರರ ಬೆಂಬಲ ಪಡೆಯಲು ಯೋಜಿಸುತ್ತಿದೆ.
ಸದ್ಯ, ಈಗ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ 10 ಕ್ಷೇತ್ರಗಳ ಪೈಕಿ, 2 ಕ್ಷೇತ್ರಗಳಿಗೆ ಜೆಜೆಪಿ ಬೇಡಿಕೆ ಇಟ್ಟಿದೆ. ಆದರೆ, ಹತ್ತೂ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಮುಂದಾಗಿದೆ. ಹೀಗಾಗಿ, ಬಿಜೆಪಿ-ಜೆಜೆಪಿ ನಡುವೆ ಅಸಮಧಾನ ಕಾಣಿಸಿಕೊಂಡಿದೆ.
ಬಿಜೆಪಿಯ ಮುಖಂಡರೊಬ್ಬರು, “ಹರಿಹಾಣ ಸಚಿವ ಸಂಪುಟ ಪೂರ್ಣ ಪ್ರಮಾಣದಲ್ಲಿ ಪುನರ್ರಚನೆ ಆಗಲಿದೆ. ಹೊಸ ಸಂಪುಟದಲ್ಲಿ ಯಾವುಏ ಜೆಜೆಪಿ ಪ್ರತಿನಿಧಿ ಇರುವುದಿಲ್ಲ. ಬಿಜೆಪಿಯು ಸ್ವತಂತ್ರ ಶಾಸಕರ ಬೆಂಬಲ ಪಡೆಯಲಿದೆ” ಎಂದು ಹೇಳಿರುವುದಾಗಿ ‘ಟಿಐಇ’ ವರದಿ ಮಾಡಿದೆ. ಪ್ರಸ್ತುತ, ಹರಿಯಾಣ ಸರ್ಕಾರದಲ್ಲಿ – ಉಪಮುಖ್ಯಮಂತ್ರಿ ದುಶ್ಯಂತ್ ಚೌತಾಲ, ಅನೂಪ್ ಧನಕ್ ಮತ್ತು ದೇವೆಂದರ್ ಸಿಂಗ್ ಬಬ್ಲಿ – ಮೂವರು ಜೆಜೆಪಿ ಸಚಿವರಿದ್ದಾರೆ.
ಜೆಜೆಪಿ ನಾಯಕ ದುಶ್ಯಂತ್ ಚೌತಾಲ ಅವರು ಸೋಮವಾರ ನವದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲಿ, ಜೆಜೆಪಿ ಜೊತೆ ಬಿಜೆಪಿ ಯಾವುದೇ ಕ್ಷೇತ್ರ ಹಂಚಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಇನ್ನು, ಮಂಗಳವಾರ ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದುಶ್ಯಂತ್ ಅವರ ನಿಗದಿತ ಸಭೆ ನಡೆದಿಲ್ಲ.
ಹೀಗಾಗಿ, ಬಿಜೆಪಿ ಮತ್ತು ಜೆಜೆಪಿ ನಾಯಕರು ತಮ್ಮ ಪಕ್ಷಗಳ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ನಿವಾಸದಲ್ಲಿ ಬಿಜೆಪಿ ಶಾಸಕರು ಮತ್ತು ಸಚಿವರ ಸಭೆ ನಡೆಸಿದ್ದಾರೆ. ಅಂತೆಯೇ, ಜೆಜೆಪಿ ಶಾಸಕರು ದೆಹಲಿಯಲ್ಲಿ ಸಭೆ ನಡೆಸಲಿದ್ದು, ಪಕ್ಷದ ಭವಿಷ್ಯದ ಬಗ್ಗೆ ಚರ್ಚಿಸಲಿದ್ದಾರೆ.
ಜೆಜೆಪಿ ಹಿಸಾರ್ ಮತ್ತು ಭಿವಾನಿ-ಮಹೇಂದ್ರಗಢ ಲೋಕಸಭಾ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಆದರೆ, ಬಿಜೆಪಿ ರಾಜ್ಯ ಘಟಕವು ಎಲ್ಲ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದೆ ಮತ್ತು ಅದನ್ನು ಹೈಕಮಾಂಡ್ಗೆ ತಿಳಿಸಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ಧಪಡಿಸಿದೆ. ಈ ನಡುವೆ, ಜೆಜೆಪಿ ಮಾರ್ಚ್ 13ರಂದು ಹಿಸಾರ್ನಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದು, ಇದು ಶಕ್ತಿ ಪ್ರದರ್ಶನ ಎಂದು ಬಿಂಬಿಸುತ್ತಿದೆ.
ಈ ಸುದ್ದಿ ಓದಿದ್ದೀರಾ?: ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೋಯಲ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ?
ಈ ಬೆಳವಣಿಗೆಗಳು ಮತ್ತು ಹೊಸ ಕ್ಯಾಬಿನೆಟ್ ರಚನೆಯು, ಬಿಜೆಪಿ ಮತ್ತು ಜೆಜೆಪಿ ತಮ್ಮ ಪ್ರತ್ಯೇಕ ಹಾದಿಯಲ್ಲಿ ನಡೆಯುತ್ತವೆ ಎಂಬುದು ಸ್ಪಷ್ಟವಾಗಿ ಸೂಚಿಸುತ್ತಿದೆ. ಅಲ್ಲದೆ, ಪೃಥ್ಲಾದ ಸ್ವತಂತ್ರ ಶಾಸಕ ನಯನ್ ಪಾಲ್ ರಾವತ್ ಅವರು ತಾವು ಬಿಜೆಪಿ ಜೊತೆ ಇರುವುದಾಗಿ ಹೇಳಿದ್ದಾರೆ.
ಇದೆಲ್ಲದ ನಡುವೆ, ರೈತ ಹೋರಾಟದ ಬಿಸಿಯ ಬಗ್ಗೆಯೂ ಜೆಜೆಪಿ ಚಿಂತಿಸುತ್ತಿದೆ. ಪ್ರತಿಭಟನಾನಿರತ ರೈತರೊಂದಿಗೆ ಹರಿಯಾಣ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಜೆಜೆಪಿಯನ್ನು ಕಳವಳಕ್ಕೆ ದೂಡಿದೆ ಎನ್ನಲಾಗಿದೆ.
ಪ್ರಸ್ತುತ, 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 41 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 30, ಜೆಜೆಪಿ 10 ಮತ್ತು 7 ಸ್ವತಂತ್ರರು ಇದ್ದಾರೆ. ಅಲ್ಲದೆ, ಐಎನ್ಎಲ್ಡಿ ಮತ್ತು ಹರಿಯಾಣ ಲೋಕಿತ್ ಪಕ್ಷಗಳು ತಲಾ ಒಬ್ಬ ಶಾಸಕನ್ನು ಹೊಂದಿವೆ.




