ಎಂಎಸ್ಪಿ, ರೈತರ ಸಾಲ ಮನ್ನಾಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಹರಿಯಾಣ ಪೊಲೀಸರು ‘ರಾಷ್ಟ್ರೀಯ ಭದ್ರತಾ ಕಾಯ್ದೆ’ ಜಾರಿಗೊಳಿಸಿದ್ದಾರೆ. ಅಲ್ಲದೆ, ಪ್ರತಿಭಟನೆಯ ಸಮಯದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ತಿಗೆ ಯಾವುದೇ ಹಾನಿಯಾದಲ್ಲಿ, ಅದರ ನಷ್ಟವನ್ನು ತುಂಬಲು ಪ್ರತಿಭಟನಾಕಾರರ ಆಸ್ತಿ ಜಪ್ತಿ ಮಾಡುವುದು ಮತ್ತು ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅಂಬಾಲಾ ಪೊಲೀಸರು, “2024ರ ಫೆಬ್ರವರಿ 13ರಿಂದ ದೆಹಲಿ ಚಲೋ ಆರಂಭಿಸಿದ ರೈತರು ಶಂಭು ಗಡಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ಒಡೆಯಲು ನಿರಂತರವಾಗಿ ಯತ್ನಿಸುತ್ತಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಾಟ ಮತ್ತು ಗದ್ದಲು ಸೃಷ್ಠಿಸುವ ಮೂಲಕ ಕಾನೂನು-ಸುವ್ಯವಸ್ಥೆ ಹಾಳುಮಾಡಲು ಪ್ರಯತ್ನಸಿಉತ್ತಿದ್ದಾರೆ. ಈ ಅವಧಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ತಿಗೆ ಸಾಕಷ್ಟು ಹಾನಿಯಾಗಿದೆ” ಎಂದು ಹೇಳಿದ್ದಾರೆ.
“ಪ್ರತಿಭಟನಾಕಾರರಿಂದ ಸರ್ಕಾರಿ ಮತ್ತು ಖಾಸಗಿ ಆಸ್ತಿಗೆ ಉಂಟಾದ ಹಾನಿಯ ಮೌಲ್ಯವನ್ನು ಅಳೆಯಲಾಗುತ್ತಿದೆ. ಪ್ರತಿಭಟನಾನಿರತರಿಂದ ಯಾವುದೇ ಹಾನಿಯಾದರೂ, ಅದರ ನಷ್ಟವನ್ನು ಅವರ ಆಸ್ತಿಯನ್ನು ವಶಪಡಿಸಿಕೊಂಡು ಸರಿದೂಗಿಸಲಾಗುತ್ತದೆ” ಎಂದು ಆಡಳಿತವು ಹೇಳಿದೆ.
“ಚಳವಳಿಯ ಸಂದರ್ಭದಲ್ಲಿ ಪ್ರತಿಭಟನಾಕಾರರಿಂದ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದ್ದರೆ, ಸುಪ್ರೀಂ ಕೋರ್ಟ್ನ ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ-1984 (ಪಿಡಿಪಿಪಿ ಕಾಯ್ದೆ) ಅಡಿ ಪ್ರತಿಭಟನೆಗೆ ಕರೆಕೊಟ್ಟವರು ಜವಾಬ್ದಾರರಾಗಿರುತ್ತಾರೆ” ಎಂದು ಹೇಳಿದೆ.
“ಹರಿಯಾಣದ ಸಾರ್ವಜನಿಕ ಆಡಳಿತದ ಆಸ್ತಿ ವಸೂಲಾತಿ ಕಾಯಿದೆ 2021ರ ಪ್ರಕಾರ, ಸರ್ಕಾರಿ ಆಸ್ತಿಗೆ ಹಾನಿಯಾದಲ್ಲಿ, ಹಾನಿ ಮಾಡಿದವರ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಸಾರ್ವಜನಿಕ ಆಸ್ತಿಯ ನಷ್ಟವನ್ನು ಸರಿದೂಗಿಸಲು ಅವಕಾಶವಿದೆ” ಎಂದು ಜಿಲ್ಲಾ ಪೊಲೀಸರು ಹೇಳಿದ್ದಾರೆ.
“ರೈತ ಚಳವಳಿಯಲ್ಲಿ ಯಾವುದೇ ಸಮುದಾಯದ ಆಸ್ತಿಗೆ ಹಾನಿಯಾಗಿದ್ದರೆ, ಹಾನಿಯ ವಿವರವನ್ನು ಆಡಳಿತಕ್ಕೆ ನೀಡಬಹುದು. ಸರ್ಕಾರಿ ಆಸ್ತಿ ನಷ್ಟದ ಪರಿಹಾರಕ್ಕಾಗಿ ಪ್ರತಿಭಟನಾನಿರತ ರೈತರ ಆಸ್ತಿ ಜಪ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಲಾಗಿದೆ,” ಎಂದು ಜಿಲ್ಲಾ ಪೊಲೀಸ್ ಇಲಾಖೆ ಹೇಳಿದೆ.
ಅಲ್ಲದೆ, ಪೊಲೀಸರು ರೈತ ಮುಖಂಡರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (ಎನ್ಎಸ್ಎ) ಜಾರಿಗೊಳಿಸಿದ್ದಾರೆ.
“ರೈತ ಸಂಘಟನೆಗಳ ಮುಖಂಡರು ಮತ್ತು ಚಳವಳಿಗಾರರ ವಿರುದ್ಧ ಎನ್ಎಸ್ಎ-1980 ಅಡಿಯಲ್ಲಿ ವಿಚಾರಣೆ ಪ್ರಾರಂಭಿಸಲಾಗಿದೆ” ಎಂದು ಅಂಬಾಲಾ ಪೊಲೀಸರು ಎಕ್ಸ್ನಲ್ಲಿ ತಿಳಿಸಿದ್ದಾರೆ.
ಅಂದಹಾಗೆ, ಕೇಂದ್ರ ಸರ್ಕಾರ ಲಿಖಿತವಾಗಿ ಭರವಸೆ ನೀಡಿದ್ದ ಎಂಎಸ್ಪಿ, ರೈತ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ‘ದೆಹಲಿ ಚಲೋ’ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್ನಿಂದ ದೆಹಲಿಗೆ ಬರುತ್ತಿದ್ದ ರೈತರನ್ನು ಹರಿಯಾಣ ಗಡಿಯಲ್ಲಿ ತಡೆಯಾಗಿದೆ. ರೈತರ ಹಾದಿಗೆ ಬ್ಯಾರಿಕೇಡ್ಗಳು, ಸಿಮೆಂಟ್ ಬ್ಲಾಕ್ಗಳು, ಮುಳ್ಳಿನ ತಂತಿಗಳು, ಕಬ್ಬಿಣದ ಮೊಳೆಗಳನ್ನು ಹಾಕಲಾಗಿದೆ. ಅದನ್ನೂ ಮೀರಿ ದೆಹಲಿಯತ್ತ ಹೊರಟಿದ್ದ ರೈತರ ಮೇಲೆ ಖನೌರಿ ಗಡಿಯಲ್ಲಿ ಪೊಲೀಸರು ಟಿಯರ್ ಗ್ಯಾಸ್, ರಬ್ಬರ್ ಗುಂಡಿನ ದಾಳಿ ಮಾಡಿದ್ದಾರೆ. ಬುಧವಾರ ನಡೆದ ರಬ್ಬರ್ ಗುಂಡಿನ ದಾಳಿಯಲ್ಲಿ ರೈತರೊಬ್ಬರು ಸಾವನ್ನಪ್ಪಿದ್ದಾರೆ.
ಹರಿಯಾಣ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ನೇತೃತ್ವದಲ್ಲಿ ಪ್ರತಿಭಟನಾನಿರತ ರೈತರು ಶುಕ್ರವಾರದಂದು ‘ಕಪ್ಪು ಶುಕ್ರವಾರ’ ಆಚರಿಸುತ್ತಿದ್ದಾರೆ. ‘ಕಪ್ಪು ಶುಕ್ರವಾರ’ ಪ್ರತಿಭಟನೆಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದ್ದು, ಪ್ರತಿಭಟನೆಗಳು ನಡೆಯುತ್ತಿವೆ.




