ಸೆಪ್ಟೆಂಬರ್ 2020ರ ಹಾಥ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಂಡ ಮೂವರು ಸಲ್ಲಿಸಿದ ಮಾನನಷ್ಟ ಮೊಕದ್ದಮೆಯ ಕುರಿತು ಪ್ರತಿಕ್ರಿಯಿಸುವಂತೆ ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿಳಿಸಿದೆ.
ಅತ್ಯಾಚಾರ ಆರೋಪದಲ್ಲಿ ಖುಲಾಸೆಗೊಂಡಿದ್ದರೂ, 2024ರ ಡಿಸೆಂಬರ್ 12ರಂದು ರವಿ, ರಾಮ್ ಕುಮಾರ್ ಅಲಿಯಾಸ್ ರಾಮು ಮತ್ತು ಲವ್ಕುಶ್ ವಿರುದ್ದ ರಾಹುಲ್ ಗಾಂಧಿ ಮಾನನಷ್ಟ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಹಾಥ್ರಸ್ ಅತ್ಯಾಚಾರ | ರಾತ್ರೋರಾತ್ರಿ ದಲಿತ ಯುವತಿಯ ಶವ ಸುಟ್ಟಿದ್ದ ಪೊಲೀಸರು; ನ್ಯಾಯ ಇಂದಿಗೂ ಮರೀಚಿಕೆ!
2020ರ ಸೆಪ್ಟೆಂಬರ್ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಆಕೆಯ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಪೊಲೀಸರು ರಾತ್ರೋರಾತ್ರಿ ಅಂತ್ಯಕ್ರಿಯೆಯನ್ನು ನಡೆಸಿದ್ದರು. ಈ ಪ್ರಕರಣದಲ್ಲಿ ಖುಲಾಸೆಗೊಂಡ ಮೂವರು ಇದೀಗ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ದೀಪಕ್ ನಾಥ್ ಸರಸ್ವತಿ ಅವರಿಗೆ ಅರ್ಜಿದಾರರ ಪರ ವಕೀಲ ಮುನ್ನಾ ಸಿಂಗ್ ಪುಂಡಿರ್ ವರದಿ ಸಲ್ಲಿಸಿದ್ದು, ವರದಿಯ ಆಧಾರದ ಮೇಲೆ ನ್ಯಾಯಾಲಯವು ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆ 2026ರ ಫೆಬ್ರವರಿ 7ರಂದು ನಡೆಯಲಿದೆ.
2024ರ ಡಿಸೆಂಬರ್ 12ರಂದು ಬೂಲ್ಗಢಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬವು ಮನೆಯಲ್ಲಿಯೇ ಸೆರೆವಾಸದಲ್ಲಿರುವಾಗ ಆರೋಪಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.





