ಮಾಜಿ ಮುಖ್ಯಮಂತ್ರಿ, ಎಎಪಿ ನಾಯಕ ಕೇಜ್ರಿವಾಲ್ ಅವರಿಗೆ ಸರ್ಕಾರಿ ಬಂಗಲೆ ನೀಡದ ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಹೈಕೋರ್ಟ್ ಛಾಟಿಗೆ ಮಣಿದ ಕೇಂದ್ರ ಸರ್ಕಾರವು ಇದೀಗ, ಕೇಜ್ರಿವಾಲ್ ಅವರಿಗೆ ಸರ್ಕಾರಿ ಬಂಗಲೆಯನ್ನು ಮಂಜೂರು ಮಾಡಿದೆ.
ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸರ್ಕಾರಿ ಬಂಗಲೆಯನ್ನು ತೊರೆದು ಒಂದು ವರ್ಷಕ್ಕಿಂತ ಹೆಚ್ಚು ಕಾಲವಾಗಿದೆ. ರಾಷ್ಟ್ರೀಯ ಪಕ್ಷದ ಸಂಚಾಲಕರಾಗಿರುವ ತಮಗೆ ಸರ್ಕಾರಿ ಬಂಗಲೆ ಒದಗಿಸಿಲ್ಲವೆಂದು ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಎಸ್ಟೇಟ್ ನಿರ್ದೇಶನಾಲಯದ ವಿರುದ್ಧ ಕೇಜ್ರಿವಾಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ‘ಎಸ್ಟೇಟ್ ನಿರ್ದೇಶನಾಲಯದ 2014ರ ನೀತಿಯ ಪ್ರಕಾರ, ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು ಅಥವಾ ಸಂಚಾಲಕರು ಸರ್ಕಾರಿ ವಸತಿ ಸೌಕರ್ಯಕ್ಕೆ ಅರ್ಹರಾಗಿರುತ್ತಾರೆ’ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಅವರ ಅರ್ಜಿಯ ವಿಚಾರಣೆ ಆಲಿಸಿರುವ ಹೈಕೋರ್ಟ್, ದೆಹಲಿಯಲ್ಲಿ ಸರ್ಕಾರಿ ವಸತಿಗೆ ಯಾರು ಅರ್ಹರು ಎಂಬುದನ್ನು ಕೇಂದ್ರವು ಆಯ್ದು ನಿರ್ಧರಿಸಲು ಸಾಧ್ಯವಿಲ್ಲ. ರಾಷ್ಟ್ರೀಯ ಪಕ್ಷದ ಸಂಚಾಲಕರಾಗಿ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಸರ್ಕಾರಿ ಬಂಗಲೆಯಲ್ಲಿ ವಾಸ ಮಾಡಲು ಅರ್ಹರಾಗಿದ್ದಾರೆ. ಅವರಿಗೆ ಸರ್ಕಾರಿ ಬಂಗಲೆ ಒದಗಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತ್ತು.
ಅದರಂತೆ, ಕೇಜ್ರಿವಾಲ್ ಅವರಿಗೆ ದೆಹಲಿಯ ಲೋಧಿ ಎಸ್ಟೇಟ್ನಲ್ಲಿ ಟೈಪ್-7 ಬಂಗಲೆಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ ಎಂದು Indian Express ವರದಿ ಮಾಡಿದೆ.
2014ರಲ್ಲಿ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವೇ, ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರಿಗೆ ದೆಹಲಿಯಲ್ಲಿ ಸರ್ಕಾರಿ ನಿವಾಸ ಒದಗಿಸುವ ನೀತಿಯನ್ನು ರೂಪಿಸಿತ್ತು. 2014ರ ಜುಲೈ 31ರಂದು ಎಸ್ಟೇಟ್ ನಿರ್ದೇಶನಾಲಯವು (Directorate of Estates – DoE) ಆಫೀಸ್ ಮೆಮೊರಂಡಮ್ (OM)ಅನ್ನು ಜಾರಿಗೊಳಿಸಿತ್ತು. ಅದರಲ್ಲಿ, ಚುನಾವಣಾ ಆಯೋಗದಿಂದ ಗುರುತಿಸಲ್ಪಟ್ಟ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಅಥವಾ ಸಂಚಾಲಕರಿಗೆ ದೆಹಲಿಯಲ್ಲಿ ಸರ್ಕಾರಿ ನಿವಾಸವನ್ನು ನೀಡಬಹುದು ಎಂದು ನಿಯಮ ರೂಪಿಸಿತ್ತು.
2014ರಲ್ಲಿ ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರು ಆಗ, ಕೇಂದ್ರ ಸರ್ಕಾರದ ಯಾವುದೇ ಹುದ್ದೆ (ಸಚಿವ) ಹೊಂದಿರಲಿಲ್ಲ. ಹೀಗಾಗಿ, ಅವರಿಗೆ ದೆಹಲಿಯಲ್ಲಿ ಸರ್ಕಾರಿ ನಿವಾಸ ಒದಗಿಸುವ ಉದ್ದೇಶದಿಂದಲೂ ಈ ನಿಯಮವನ್ನು ಜಾರಿಗೆ ತರಲಾಗಿತ್ತು ಎಂಬ ಆರೋಪಗಳೂ ಇವೆ.




