ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ರೈಲ್ವೆ ಕಚೇರಿಯ ಪ್ರವೇಶದ್ವಾರವನ್ನು ‘ಕರ್ತವ್ಯ ದ್ವಾರ’ ಎಂದು ಹೆಸರಿಸಿದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಕೇಂದ್ರದಿಂದ ಹಿಂದಿ ಹೇರಿಕೆಯು ಎಲ್ಲಾ ಮಿತಿಗಳನ್ನು ಮೀರಿದೆ” ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ಕೇಂದ್ರ ಸರ್ಕಾರವು ಒಂದು ಭಾಷೆ, ಮೂರು ಲಿಪಿಗಳು ಎಂಬ ಸೋಗಿನಲ್ಲಿ ಹಿಂದಿಯ ಪ್ರಚಾರ ಮಾಡುತ್ತಿದೆ. ವಿಶಾಲ ಕಾರ್ಯಸೂಚಿಯ ಭಾಗವಾಗಿ ತಮಿಳು ಮತ್ತು ಇಂಗ್ಲಿಷ್ ಲಿಪಿಗಳಲ್ಲಿಯೂ ಹಿಂದಿ ಹೆಸರುಗಳನ್ನು ಬರೆಯಲಾಗುತ್ತಿದೆ” ಎಂದು ದೂರಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಶಾಲೆಗಳಲ್ಲಿ ಹಿಂದಿ ಹೇರಿಕೆಗೆ ವಿರೋಧ: ಮತ್ತೆ ಒಂದಾದ ರಾಜ್, ಉದ್ಧವ್ ಠಾಕ್ರೆ
ತಿರುಚಿರಾಪಳ್ಳಿ ರೈಲ್ವೆ ವಿಭಾಗದ ಕಚೇರಿಯ ಪ್ರವೇಶದ್ವಾರವು ‘ಕರ್ತವ್ಯ ದ್ವಾರ’ ಎಂಬ ಹಿಂದಿ ಹೆಸರನ್ನು ಹೊಂದಿದೆ. ಹಾಗೆಯೇ ನೌಕರರ ಭವಿಷ್ಯ ನಿಧಿ ಸಂಸ್ಥೆ ಕಚೇರಿಗೆ ‘ಭವಿಷ್ಯ ನಿಧಿ ಭವನ’ ಎಂದು ಹೆಸರಿಡಲಾಗಿದೆ.
ಇನ್ನು ಕೇಂದ್ರ ಜಲಸಂಪನ್ಮೂಲ ಸಚಿವಾಲಯವನ್ನು ಜಲಶಕ್ತಿ ಸಚಿವಾಲಯ ಎಂದು ಮರುನಾಮಕರಣ ಮಾಡುವುದನ್ನು ಮತ್ತು ಇಂಗ್ಲಿಷ್ ಲಿಪಿಯಲ್ಲಿ ಹೊಸ ಕ್ರಿಮಿನಲ್ ಕಾನೂನುಗಳಿಗೆ ಸಂಸ್ಕೃತ ಶೀರ್ಷಿಕೆಗಳನ್ನು ಬಳಸುವುದನ್ನೂ ಸ್ಟ್ಯಾಲಿನ್ ಆಕ್ಷೇಪಿಸಿದ್ದಾರೆ.
100 ದಿನಗಳ ಉದ್ಯೋಗ ಯೋಜನೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಮರುನಾಮಕರಣ ಮಾಡುವಲ್ಲಿಯೂ ಇದೇ ರೀತಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕ್ರಮವನ್ನು ತಮಿಳು ಗುರುತು ಮತ್ತು ಸ್ವಾಭಿಮಾನದ ಮೇಲಿನ ದಾಳಿ ಎಂದು ಕರೆದ ಸ್ಟ್ಯಾಲಿನ್, ರಾಜ್ಯದ ಕೇಂದ್ರ ಸರ್ಕಾರಿ ಕಚೇರಿಗಳಿಂದ ಹಿಂದಿ ಹೆಸರುಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಇಲ್ಲವಾದರೆ ತೀವ್ರ ವ್ಯಕ್ತವಾಗಲಿದೆ ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಉಡುಪಿ | ಕೇಂದ್ರ ಸರಕಾರದ ಒತ್ತಾಯ ಪೂರ್ವಕ ಹಿಂದಿ ಹೇರಿಕೆ : ಕರವೇ ಪ್ರತಿಭಟನೆ
ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಹಲವು ದಕ್ಷಿಣ ಕನ್ನಡದ ರಾಜ್ಯಗಳು ಆರೋಪಿಸಿವೆ. ಮಹಾರಾಷ್ಟ್ರದಲ್ಲಿಯೂ ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಕೊನೆಗೆ ಮಹಾರಾಷ್ಟ್ರ ಸರ್ಕಾರ 1ರಿಂದ 5 ನೇ ತರಗತಿಯವರೆಗೆ ಹಿಂದಿಯನ್ನು ಕಡ್ಡಾಯಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯಿತು.
ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದು, 2025ರ ಸೆಪ್ಟೆಂಬರ್ನಲ್ಲಿ ‘ಹಿಂದಿ ರಾಜಭಾಷಾ’ ದಿನದಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದ್ದು, ಅನೇಕ ಕನ್ನಡಪರ ಕಾರ್ಯಕರ್ತರು ಬಂಧನಕ್ಕೊಳಗಾಗಿದ್ದರು. #StopHindiImposition ಎಂಬ ಹ್ಯಾಷ್ಟ್ಯಾಗ್ ಅನ್ನು ಎಕ್ಸ್ ಪೋಸ್ಟ್ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಭಾರತವು ವಿವಿಧ ಭಾಷೆಗಳ ಒಕ್ಕೂಟವಾಗಿದ್ದು, ಒಂದು ಭಾಷೆಯನ್ನು ಮಾತ್ರ ಮೇಲರಿಮೆಯಾಗಿ ನೋಡುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಎಂಬ ವಾದ ನಿರಂತರವಾಗಿ ಕೇಳಿಬರುತ್ತಿದೆ.





