ದೇಶದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಉತ್ತರ ಭಾರತದಲ್ಲಿ, ಕಾಶ್ಮೀರಿ ಶಾಲು ಮಾರಾಟಗಾರರ ಮೇಲೆ ದಾಳಿಗಳು ಹೆಚ್ಚಾಗುತ್ತಿದ್ದು ಸದ್ಯ ಹಿಮಾಚಲ ಪ್ರದೇಶದಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೋಮುವಾದಿಗಳ ಗುಂಪೊಂದು ಕಾಶ್ಮೀರಿ ಶಾಲು ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ್ದು ‘ಜೈ ಶ್ರೀರಾಮ್’ ಹೇಳುವಂತೆ ಒತ್ತಾಯಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಕಾಶ್ಮೀರದ ಮಾರಾಟಗಾರರು ಹಿಮಾಚಲ ಪ್ರದೇಶವನ್ನು ತೊರೆಯದಿದ್ದರೆ ಹಲ್ಲೆ ಮುಂದುವರೆಯುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದಾರೆ.
ಕಾಶಿಪುರದಲ್ಲಿ ಬಿಲಾಲ್ ಅಹ್ಮದ್ ಗನಿ ಎಂಬ ವ್ಯಾಪಾರಿಯ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದು ವ್ಯಾಪಾರಿಯನ್ನು ಬಲವಂತವಾಗಿ ‘ಭಾರತ್ ಮಾತಾ ಕಿ ಜೈ’, ‘ಜೈ ಶ್ರೀ ರಾಮ್’ ಮತ್ತು ಇತರ ಘೋಷಣೆಗಳನ್ನು ಕೂಗುವಂತೆ ಪೀಡಿಸಲಾಗಿದೆ. ಈ ಸಂಬಂಧ ಬಜರಂಗದಳದ ಮುಖಂಡ ಅಂಕುರ್ ಸಿಂಗ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದೇಶ ಕಾಶ್ಮೀರಿಗಳದೂ ಹೌದು…ಆ ಅಮಾಯಕರ ಬೇಟೆ ಅನ್ಯಾಯ
ಈ ಸಂಬಂಧ ವಿಡಿಯೋ ಹೇಳಿಕೆಯನ್ನು ಕಾಶ್ಮೀರಿ ವ್ಯಾಪಾರಿಗಳು ನೀಡಿದ್ದಾರೆ. ಹಾಗೆಯೇ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘವು ಹೇಳಿಕೆಯೊಂದರಲ್ಲಿ, 25-30 ವರ್ಷಗಳಿಗೂ ಹೆಚ್ಚು ಕಾಲ ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಅನೇಕ ಕಾಶ್ಮೀರಿ ಶಾಲು ಮಾರಾಟಗಾರರ ಮೇಲೆ ಬಿಲಾಸ್ಪುರ ಜಿಲ್ಲೆಯ ಘುಮಾರ್ವಿನ್ ಪ್ರದೇಶದಲ್ಲಿ ಬಲಪಂಥೀಯರು ಹಲ್ಲೆ ನಡೆಸಿದ್ದಾರೆ. ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
“ವ್ಯಾಪಾರಿಗಳನ್ನು ಬೆದರಿಸಲಾಗಿದೆ ಮತ್ತು ರಾಜ್ಯವನ್ನು ತೊರೆಯುವಂತೆ ಹೇಳಲಾಗಿದೆ. ಶಾಲುಗಳನ್ನು ಮಾರಾಟ ಮಾಡಲು ಅವಕಾಶ ನೀಡಿಲ್ಲ. ಅವರ ಬಳಿಯಿದ್ದ ವಸ್ತುಗಳನ್ನು ನಾಶಪಡಿಸಲಾಗಿದೆ. ಈ ಘಟನೆಗಳನ್ನು ರೆಕಾರ್ಡ್ ಮಾಡಲು ಪ್ರಯತ್ನಿಸಿದಾಗ ಮೊಬೈಲ್ ಫೋನ್ಗಳನ್ನು ಸಹ ಒಡೆದುಹಾಕಲಾಗಿದೆ” ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘ ಹೇಳಿಕೆಯಲ್ಲಿ ತಿಳಿಸಿದೆ.
ಮಾನ್ಯ ದಾಖಲೆಗಳನ್ನು ಹೊಂದಿದ್ದರೂ, ಮಾರಾಟಗಾರರು ತಮ್ಮ ವ್ಯವಹಾರವನ್ನು ನಡೆಸದಂತೆ ತಡೆಯಲಾಗುತ್ತಿದೆ. ಕಾಶ್ಮೀರಿ ಮಾರಾಟಗಾರರನ್ನು ಹೊರಹಾಕುವಂತೆ ಮನೆ ಮಾಲೀಕರಿಗೂ ಒತ್ತಡ ಹೇರಲಾಗುತ್ತಿದೆ. ಸ್ಥಳೀಯ ಆರ್ಥಿಕತೆಗೆ ಅಪಾರ ಕೊಡುಗೆ ನೀಡಿದ ಶಾಲು ಮಾರಾಟಗಾರರು ದಶಕಗಳಿಂದ ಸಾಮಾಜಿಕ ರಚನೆಯ ಅವಿಭಾಜ್ಯ ಅಂಗವಾಗಿದ್ದಾರೆ. ಆದರೂ ಇಂದು ಅಭದ್ರತೆ ಮತ್ತು ಭಯವನ್ನು ಎದುರಿಸುತ್ತಿದ್ದಾರೆ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
“ಇದು ಕಾಶ್ಮೀರಿ ವ್ಯಾಪಾರಿಗಳನ್ನು ಗುರಿಯಾಗಿಸುವ ಅಪಾಯಕಾರಿ ಮತ್ತು ಗೊಂದಲದ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಕಾಶ್ಮೀರಿಗಳ ಮೇಲಿನ ಕಿರುಕುಳ ಮತ್ತು ಹಿಂಸಾಚಾರ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ” ಎಂದಿದ್ದಾರೆ.
ಇನ್ನು ಮಾರಾಟಗಾರರೊಬ್ಬರು, “ಇಬ್ಬರು ಮೂವರು ಬಂದು ಇಲ್ಲಿಗೆ ಬರಬೇಡಿ ಎಂದು ಹೇಳಿ ಇಲ್ಲಿಂದ ಹೋಗುವಂತೆ ಹೇಳಿದರು. ನಾನು 17-18 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ನನಗೆ ಈ ರೀತಿಯ ಘಟನೆ ನಡೆಯುತ್ತಿರುವುದು ಇದೇ ಮೊದಲು. ನಮ್ಮಲ್ಲಿ ದಾಖಲೆಗಳಿವೆ. ಆದರೂ ಅವರು ನಮಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಚಿಕ್ಕಪ್ಪನನ್ನು ಥಳಿಸಿದರು ಮತ್ತು ಅವರ ಬಳಿಯಿದ್ದ 20,000 ರೂ. ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ಹಲ್ಲೆಗೊಳಗಾದ ವ್ಯಕ್ತಿ ಬಿಲಾಲ್, “ಮುಖಕ್ಕೆ ಮುಸುಕು ಹಾಕಿಕೊಂಡಿದ್ದ ಗುಂಪು ನನ್ನಲ್ಲಿದ್ದ ವಸ್ತುಗಳನ್ನು ಕೆಳಗೆ ಇಡಲು ಹೇಳಿದರು. ನಂತರ ನನಗೆ ಥಳಿಸಿದರು. ಹಾಗಾಗಿ, ನಾನು ಅಲ್ಲಿಂದ ಓಡಿಹೋದೆ. ನನ್ನ ಎಲ್ಲಾ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ನಾನು ಓಡಿಹೋಗುವಾಗ ವಸ್ತುಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ನನಗೆ ತುಂಬಾ ನಷ್ಟವಾಗಿದೆ” ಎಂದು ಹೇಳಿದರು.
ಈ ಎಲ್ಲಾ ವಿಚಾರದಲ್ಲಿ ವಿದ್ಯಾರ್ಥಿ ಸಂಘವು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ವಿನಂತಿಸಿದ್ದಾರೆ.
ದೇಶದಲ್ಲಿ ಕಾಶ್ಮೀರಿ ವ್ಯಾಪಾರಿಗಳ ಮೇಲೆ ಹೆಚ್ಚುತ್ತಿರುವ ಹಲ್ಲೆ
ಇದೇ ತಿಂಗಳು ಕಾಂಗ್ರಾ ಜಿಲ್ಲೆಯ ದೆಹ್ರಾ ಪ್ರದೇಶದಲ್ಲಿ ಜಹಾಂಗೀರ್ ಅಹ್ಮದ್ ಎಂಬ ವ್ಯಾಪಾರಿಯ ಮೇಲೆಯೂ ಹಲ್ಲೆ ನಡೆದಿದೆ. ಹಿಮಾಚಲ ಪ್ರದೇಶದಲ್ಲಿ ಈ ವರ್ಷ ವರದಿಯಾದ ಇಂತಹ 17ನೇ ಘಟನೆ ಇದಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘ ತಿಳಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಲಕ್ನೋ ಮತ್ತು ಹಿಮಾಚಲ ಪ್ರದೇಶದಂತಹ ವಿವಿಧ ಭಾಗಗಳಲ್ಲಿ ಕಾಶ್ಮೀರಿ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಹೀಗೆ ದಾಳಿಗಳು ನಡೆದಿವೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಕಾಶ್ಮೀರಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ, ಅವರನ್ನು ಬಲವಂತವಾಗಿ ಜೈ ಶ್ರೀ ರಾಮ್ ಎಂದು ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಲಾಗಿತ್ತು. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿದ್ದರು.
ಇನ್ನು ಇಂದು(ಡಿಸೆಂಬರ್ 29) ಹಿಮಾಚಲದ ಸೋಲನ್ ಜಿಲ್ಲೆಯ ಕಸೌಲಿ ಎಂಬಲ್ಲಿ ಕಾಶ್ಮೀರಿ ವ್ಯಾಪಾರಿಗಳಿಗೆ ಬೆದರಿಕೆ ಹಾಕಿ, ಕೂಡಲೇ ರಾಜ್ಯ ಬಿಟ್ಟು ಹೋಗುವಂತೆ ಅಥವಾ ‘ಪಾಕಿಸ್ತಾನಕ್ಕೆ ಹೋಗುವಂತೆ’ ಹೇಳಿರುವ ಮತ್ತೊಂದು ಘಟನೆ ವರದಿಯಾಗಿದೆ. ಮುಖ್ಯವಾಗಿ ಕಾಶ್ಮೀರಿ ಮುಸ್ಲಿಮರನ್ನೇ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ.





