‘ಗ್ಯಾರಂಟಿ’ಗಳು ರಾಜ್ಯ ಸರ್ಕಾರಕ್ಕೆ ಸಂಕಟ ತಂದಿವೆ ಎಂಬ ವಾದವೇ ಒಪ್ಪತಕ್ಕದ್ದಲ್ಲ. ಏಕೆಂದರೆ, ಮೂರೂವರೆ ಲಕ್ಷ ಕೋಟಿ ವಾರ್ಷಿಕ ಬಜೆಟ್ ಗಾತ್ರ ಹೊಂದಿರುವ ರಾಜ್ಯಕ್ಕೆ 60,000 ಕೋಟಿ ರೂ.ಗಳ ಗ್ಯಾರಂಟಿ ಹೊರೆ ಹೊರಲಾಗುವುದಿಲ್ಲ ಎಂಬುದು ವಿಚಿತ್ರವಾಗಿ ಕಾಣಿಸುತ್ತಿದೆ.
ಗ್ಯಾರಂಟಿ ‘ಸಂಕಷ್ಟ’ ನಿವಾರಣೆಗೆ ರಾಜ್ಯ ಸರ್ಕಾರವು ಸರ್ಕಾರದ 25,000 ಎಕರೆ ಭೂಮಿಯನ್ನು ಪರಭಾರೆ ಮಾಡಿ ‘ನಗದೀಕರಿಸು’ವ ಕೆಲಸ ಮಾಡಬೇಕೆಂಬ ಮನೆಹಾಳು ಐಡಿಯಾವನ್ನು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಎಂಬ ‘ಪರಿಣತ’ ತಂಡ ನೀಡಿರುವುದನ್ನು ಪತ್ರಿಕೆಗಳಲ್ಲಿ ಗಮನಿಸಿದೆ.
ಈ ರೀತಿಯ ಕನ್ಸಲ್ಟಿಂಗ್ ಕಂಪನಿಗಳೆಲ್ಲ, ಕೋವಿಡ್ ಕಾಲದಿಂದಲೂ ಭಾರತ ಸರ್ಕಾರಕ್ಕೆ ಹಲವು ಮನೆಹಾಳು ಐಡಿಯಾಗಳನ್ನು ಕೊಟ್ಟದ್ದನ್ನು ಗಮನಿಸಿದ್ದೇನೆ. ರಾಜ್ಯ ಸರ್ಕಾರಕ್ಕೂ ಐಡಿಯಾ ಕೊಡಲು ಇಂತಹ ಕಂಪನಿಗಳು ನಿಯುಕ್ತವಾಗಿರುವುದು ಈಗಷ್ಟೇ ಬೆಳಕಿಗೆ ಬಂದಂತಿದೆ.
ಮೊದಲನೆಯದಾಗಿ, ‘ಗ್ಯಾರಂಟಿ’ಗಳು ರಾಜ್ಯ ಸರ್ಕಾರಕ್ಕೆ ಸಂಕಟ ತಂದಿವೆ ಎಂಬ ವಾದವೇ ಒಪ್ಪತಕ್ಕದ್ದಲ್ಲ. ಏಕೆಂದರೆ, ಮೂರೂವರೆ ಲಕ್ಷ ಕೋಟಿ ವಾರ್ಷಿಕ ಬಜೆಟ್ ಗಾತ್ರ ಹೊಂದಿರುವ ರಾಜ್ಯಕ್ಕೆ 60,000 ಕೋಟಿ ರೂ.ಗಳ ಗ್ಯಾರಂಟಿ ಹೊರೆ ಹೊರಲಾಗುವುದಿಲ್ಲ ಎಂಬುದು ವಿಚಿತ್ರವಾಗಿ ಕಾಣಿಸುತ್ತಿದೆ. ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹೊರತುಪಡಿಸಿದರೆ, ಬೇರೆಲ್ಲ ಗ್ಯಾರಂಟಿಗಳಲ್ಲೂ ಈಗಾಗಲೇ ಇರುವ ಕೇಂದ್ರ-ರಾಜ್ಯ ಸಬ್ಸಿಡಿಗಳ ಪಾಲು ಇದೆ. ಹಾಗಾಗಿ ಹೆಚ್ಚುವರಿ ಹೊರೆ ಊಹಿಸಿದಷ್ಟು ದೊಡ್ಡದಾಗಿರುವ ಸಾಧ್ಯತೆಗಳು ಕಡಿಮೆ.
ಒಂದು ವೇಳೆ ಹೊರೆ ‘ಭಾರ ಇದೆ’ ಎಂದಾದರೆ, ಕರ್ನಾಟಕ ಸರ್ಕಾರ ಒಂದು ಶ್ವೇತಪತ್ರ ಹೊರಡಿಸಿ, ತನ್ನ ಹೊರೆಯ ಸ್ವರೂಪವನ್ನು ಸ್ಪಷ್ಟಪಡಿಸಬೇಕು. ಇವು ಬಡಜನರ ಪರವಾದ ಯೋಜನೆಗಳಾಗಿರುವುದರಿಂದ ಸರ್ಕಾರಕ್ಕೆ ಇದನ್ನು ತೆರೆದ ಪುಸ್ತಕವಾಗಿಟ್ಟುಕೊಳ್ಳುವಲ್ಲಿ ‘ಇಗೋ ಸಮಸ್ಯೆ ಬರಬಾರದು. ಸರ್ಕಾರ ತನ್ನ ಅನಗತ್ಯ ಖರ್ಚುಗಳ ಮೇಲೆ, ಭ್ರಷ್ಟಾಚಾರ-ಪರ್ಸಂಟೇಜ್ ವ್ಯವಹಾರಗಳ ಮೇಲೆ, ಕಳಪೆ ಕಾಮಗಾರಿಗಳ ಮೇಲೆ ಬಿಗಿತನ ತೋರಿಸಿದರೆ, ಖಂಡಿತಕ್ಕೂ ಈ ಗ್ಯಾರಂಟಿಗಳು ಹೊರೆ ಅಲ್ಲ; ಹೊರೆ ಹೌದು ಎಂದಾದರೂ ಅದಕ್ಕೆ ಸರ್ಕಾರಿ ಆಸ್ತಿಗಳನ್ನು ಮಾನೆಟೈಸ್ ಮಾಡುವ ಕೇಂದ್ರ ಸರ್ಕಾರದ ಮಾದರಿಯನ್ನು ಅನುಸರಿಸುವುದು ಸರಿಯಾದ ಹಾದಿ ಅಲ್ಲ.
ಇದನ್ನು ಓದಿದ್ದೀರಾ?: ರಾಜ್ಯದ ಪಾಲಿನ ಹಣ ಕೇಂದ್ರ ಕೊಟ್ಟಿದ್ದರೆ ನಾವು ಇಂಧನ ತೆರಿಗೆ ಹೆಚ್ವಿಸುತ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ
ಕುತೂಹಲಕರ ಸಂಗತಿ ಎಂದರೆ, ರಾಜ್ಯದ ಹಣಕಾಸು ಇಲಾಖೆ ತನ್ನ ವೆಬ್ಸೈಟಿನಲ್ಲಿ ಪ್ರತೀ ತ್ರೈಮಾಸಿಕಕ್ಕೊಮ್ಮೆ ತನ್ನ ಜಮೆ-ವೆಚ್ಚಗಳ ತಖ್ತೆಯನ್ನು ಪ್ರಕಟಿಸುತ್ತಿತ್ತು. ಅದು ಪಾರದರ್ಶಕವಾಗಿ ಸರ್ಕಾರದ ಕಾರ್ಯವೈಖರಿಯನ್ನು ತೋರಿಸುತ್ತಿತ್ತು. ಆದರೆ, ಈಗ ಈ ಲೆಕ್ಕಾಚಾರ ಸಾರ್ವಜನಿಕವಾಗಿ ಲಭ್ಯವಿಲ್ಲ. ಅದನ್ನು ಮರೆಮಾಚಲಾಗಿದೆ. ಇದಕ್ಕೆ ಕಾರಣವೇನೆಂಬುದು ಗೊತ್ತಾಗಿಲ್ಲ.
ಹಾಲೀ ರಾಜ್ಯ ಸರ್ಕಾರಕ್ಕೆ ಈ ಬಾರಿ ಸಾರ್ವತ್ರಿಕ ಚುನಾವಣೆಗಳಲ್ಲಿ ಸಾಕಷ್ಟು ಮತಗಳನ್ನೂ ತಂದುಕೊಟ್ಟ ಸ್ತ್ರೀಶಕ್ತಿ ಯೋಜನೆ ನಿಜಕ್ಕೂ ಸಾಸಿವೆ ಡಬ್ಬಿಗೆ ಕಾಸು ಮರುಪೂರಣ ಮಾಡಿದಂತಹ ಮಹತ್ವದ ಯೋಜನೆ. ಅದಕ್ಕೆ ಮಾಡಿದ ವಿನಿಯೋಗದ ಕಾರಣಕ್ಕೆ, ಸರ್ಕಾರಕ್ಕೆ ಯಾವುದೇ ಹಿಂಜರಿಕೆ ಇರಬಾರದು.
ಅದಲ್ಲದೇ, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಳೆಯ ಕಾಮಗಾರಿಗಳಿಗೆ ಹಣ ಒದಗಿಸುವಂತಹ ಬೇರೆ ‘ಹಿಡನ್ ವೆಚ್ಚ’ಗಳಿದ್ದರೆ, ರಾಜಕೀಯ ಒತ್ತಡಗಳಿದ್ದರೆ, ಅದಕ್ಕೆ ಶ್ವೇತಪತ್ರವೊಂದು ಮಂಡಿತವಾಗಲಿ. ರಾಜ್ಯದ ಜನಪ್ರತಿನಿಧಿಗಳಿಗೆ ಅವರ ಕ್ಷೇತ್ರಗಳಲ್ಲಿ ಕೆಲಸಕ್ಕೆ ಹಣ ಒದಗಿಸಲಾಗುತ್ತಿಲ್ಲ ಎಂಬಂತಹ ಅಸಮಾಧಾನಗಳು ಮತ್ತು ಪ್ರತಿಪಕ್ಷ-ಮಾಧ್ಯಮಗಳಿಗೆ ಇರುವ ಗ್ಯಾರಂಟಿ ‘ಸಂಕಟ’ಗಳಿಗೆ ಸರ್ಕಾರ ಸಕಾಲದಲ್ಲಿ ಉತ್ತರಿಸಿಕೊಳ್ಳದಿದ್ದರೆ, ಈ ‘ಗ್ಯಾರಂಟಿ’ ಮಾತುಗಳೇ ಈ ಸರ್ಕಾರಕ್ಕೆ ಉರುಳಾಗಿ ಬಿಗಿದುಕೊಳ್ಳಲಿವೆ ಎಂಬುದಕ್ಕೆ ಸಂಶಯ ಬೇಡ. ಅದು ಸಹಜ ಸಾವಾಗುವುದಿಲ್ಲ, ಆತ್ಮಹತ್ಯಾಕಾರಿ ಅನ್ನಿಸಲಿದೆ!

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).




