ಮಹಾರಾಷ್ಟ್ರ ಸಚಿವರು ಕರೆದಿದ್ದ ಪ್ರಮುಖ ಸಭೆಗಳಿಗೆ ಹಾಜರಾಗದ ಕಾರಣ ಐಎಎಸ್ ಅಧಿಕಾರಿಗಳಾದ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಎಂಪಿಸಿಬಿ) ಜಂಟಿ ನಿರ್ದೇಶಕರು ಮತ್ತು ಸದಸ್ಯ ನಿರ್ದೇಶಕರನ್ನು ಅಮಾನತು ಮಾಡಲಾಗಿದೆ.
ರಾಜ್ಯದ ಸಚಿವರಿಗೆ ನಿರ್ಣಾಯಕ ವಿಷಯಗಳ ಕುರಿತು ಮಾಹಿತಿ ಪಡೆಯಲು ರಾಜ್ಯ ಪರಿಸರ ಸಚಿವೆ ಪಂಕಜಾ ಮುಂಡೆ ಅವರು ಫೆಬ್ರವರಿ 26ರಂದು ಸಭೆ ಕರೆದಿದ್ದರು. ಚಂದ್ರಾಪುರ ಜಿಲ್ಲೆಯಲ್ಲಿ ಮಾಲಿನ್ಯದ ಕುರಿತು ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಆ ಸಭೆಗೆ ಎಂಪಿಸಿಬಿ ಸದಸ್ಯ ಕಾರ್ಯದರ್ಶಿ ಎಂ. ದೇವೇಂದರ್ ಸಿಂಗ್ ಮತ್ತು ಎಂಪಿಸಿಬಿ ಜಂಟಿ ನಿರ್ದೇಶಕ ಸತೀಶ್ ಪಡ್ವಾಲ್ ಹಾಜರಾಗಿರಲಿಲ್ಲ. ಪರಿಣಾಮ, ಸಚಿವರು ಮಾಹಿತಿ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ.
ಸಭೆಗೆ ಹಾಜರಾಗದ ಅಧಿಕಾರಿಗಳು, ತಾವು ಸಭೆಗೆ ಹಾಜರಾಗದ ಕಾರಣ ವಿವರವಾದ ಬ್ರೀಫಿಂಗ್ ನೀಡಲು ಸಾಧ್ಯವಾಗುವುದಿಲ್ಲವೆಂದು ಸಂದೇಶ ಕಳಿಸಿದ್ದರು ಎಂದು ಸಚಿವೆ ಪಂಕಜಾ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಧಿಕಾರಿಗಳ ಈ ಅವಿಧೇಯತೆಯು ಸಾರ್ವಜನಿಕರಿಗೆ ಉತ್ತರಿಸುವ ಸಚಿವರ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ ಎಂದು ಅವರು ಸದನದಲ್ಲಿ ಹೇಳಿದ್ದಾರೆ.
ಸಚಿವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಹಂಗಾಮಿ ಸ್ಪೀಕರ್ ದಿಲೀಪ್ ಲಾಂಡೆ, ಅಧಿಕಾರಿಯ ಗೈರುಹಾಜರಿಯನ್ನು ‘ತೀವ್ರ ನಿರ್ಲಕ್ಷ್ಯ’ ಮತ್ತು ‘ಶಾಸಕಾಂಗಕ್ಕೆ ಮಾಡಿದ ಅವಮಾನ’ ಎಂದು ಬಣ್ಣಿಸಿದ್ದಾರೆ. ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಅವರ ನಿರ್ದೇಶನ ಬಂದ 24 ಗಂಟೆಗಳ ಒಳಗೆ, ರಾಜ್ಯ ಸರ್ಕಾರವು 1969ರ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ಅಡಿಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಅಮಾನತು ಮಾಡಿ, ಆದೇಶ ಹೊರಡಿಸಿದೆ. ಈ ವಿಷಯವು ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಲೇಖನ ಓದಿದ್ದೀರಾ?: ಎಪ್ಸ್ಟೀನ್ ಪ್ರಕರಣ: ಟ್ರಂಪ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕಡತಗಳೇ ನಾಪತ್ತೆ
ಬಿಜೆಪಿ ನಾಯಕ ಸುಧೀರ್ ಮುಂಗಂಟಿವಾರ್ ಅವರು, ಅಧಿಕಾರಿಗಳ ನಡವಳಿಕೆಯನ್ನು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಮತ್ತು ‘ಸಂವಿಧಾನಕ್ಕೆ ಮಾಡಿದ ಅವಮಾನ’ ಎಂದು ಟೀಕಿಸಿದ್ದಾರೆ. ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳಿಗೆ ತಾವು ಜವಾಬ್ದಾರರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
MPCB ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಯನ್ನು ಪ್ರಾರಂಭಿಸಲಾಗುವುದು. ಈ ಅವಧಿಯಲ್ಲಿ, ಅವರ ಪ್ರಧಾನ ಕಚೇರಿ ಮುಂಬೈನಲ್ಲಿಯೇ ಇರುತ್ತದೆ ಮತ್ತು ಅವರು ಅನುಮತಿಯಿಲ್ಲದೆ ನಗರವನ್ನು ಬಿಡಲು ಅಥವಾ ಬೇರೆ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ.




