ಪಂಜಾಬ್ನಲ್ಲಿ ಕಾಂಗ್ರೆಸ್ ನವಜೋತ್ ಸಿಂಗ್ ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಅವರು ಸಕ್ರಿಯ ರಾಜಕೀಯಕ್ಕೆ ಮರಳುತ್ತಾರೆ. ಅದಕ್ಕಾಗಿ ನೀಡಲು 500 ಕೋಟಿ ರೂಪಾಯಿ ನಮ್ಮಲಿಲ್ಲ ಎಂದು ಸಿಧು ಪತ್ನಿ ಮತ್ತು ಕಾಂಗ್ರೆಸ್ ನಾಯಕಿ ನವಜೋತ್ ಕೌರ್ ಸಿಧು ಹೇಳಿದ್ದಾರೆ.
ಶನಿವಾರ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾವು ಯಾವಾಗಲೂ ಪಂಜಾಬ್ ಮತ್ತು ಪಂಜಾಬಿಗಳ ಪರವಾಗಿ ಮಾತನಾಡುತ್ತೇವೆ. ಆದರೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ನಾವು ನೀಡಬೇಕಾದ 500 ಕೋಟಿ ರೂ. ನಮ್ಮ ಬಳಿ ಇಲ್ಲ. ಆದರೆ ನಾವು ಪಂಜಾಬ್ ಅನ್ನು ‘ಸುವರ್ಣ ರಾಜ್ಯ’ವನ್ನಾಗಿ ಪರಿವರ್ತಿಸಬಹುದು” ಎಂದರು.
ಇದನ್ನು ಓದಿದ್ದೀರಾ? ‘ರಾಹುಲ್ ಗಾಂಧಿ’ ಸರ್ವಾಧಿಕಾರ ವಿರುದ್ಧದ ಒಂದು ಕ್ರಾಂತಿ: ನವಜೋತ್ ಸಿಂಗ್ ಸಿಧು
ಇನ್ನು ಯಾರಾದರೂ ಅವರ ಬಳಿ ಹಣ ಕೇಳಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರತಿಕ್ರಿಯಿಸಿದ ಕೌರ್, “500 ಕೋಟಿ ರೂ. ಸೂಟ್ಕೇಸ್ ನೀಡುವವನು ಮುಖ್ಯಮಂತ್ರಿಯಾಗುತ್ತಾನೆ. ಯಾವುದೇ ಪಕ್ಷ ಸಿಧು ಅವರಿಗೆ ಈ ಅವಕಾಶ ನೀಡಿದರೆ ನಾವು ಪಂಜಾಬ್ ಅನ್ನು ಸುಧಾರಿಸಬಹುದು. ಯಾವುದೇ ಪಕ್ಷಕ್ಕೆ ನೀಡಲು ನಮ್ಮಲ್ಲಿ ಹಣವಿಲ್ಲ. ಆದರೆ ನಾವು ಉತ್ತಮ ಕೆಲಸ ಮಾಡುತ್ತೇವೆ. ಪಂಜಾಬ್ ಅನ್ನು ಸುವರ್ಣ ರಾಜ್ಯವನ್ನಾಗಿ ಮಾಡುತ್ತೇವೆ” ಎಂದು ಭರವಸೆ ನೀಡಿದರು.
ಸಿಧು ಸಿಎಂ ಆಗುವ ಅವಕಾಶವನ್ನು ಬಿಜೆಪಿ ನೀಡಬಹುದೇ? ನೀಡಿದರೆ ಸಿಧು ಬಿಜೆಪಿಗೆ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕೌರ್, “ನಾನು ಸಿಧು ಅವರ ಪರವಾಗಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಪಂಜಾಬ್ ಕಾಂಗ್ರೆಸ್ ಘಟಕದೊಳಗಿನ ಒಳಜಗಳದ ಬಗ್ಗೆಯೂ ಈ ವೇಳೆ ಪ್ರಸ್ತಾಪಿಸಿದರು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಐವರು ಆಕಾಂಕ್ಷಿಗಳಾಗಿದ್ದು, ಅವರೆಲ್ಲರೂ ಸಿಧು ಮುಂದೆ ಬರಲು ಬಿಡುವುದಿಲ್ಲ ಎಂದು ದೂರಿದರು. ಇನ್ನು ಪ್ರಶ್ನೆಯೊಂದಿಗೆ ಪ್ರತಿಕ್ರಿಯಿಸುತ್ತಾ ತಮ್ಮ ಪತಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದೂ ಹೇಳಿದರು.
ಇದನ್ನು ಓದಿದ್ದೀರಾ? ಗೌತಮ್ ಗಂಭೀರ್: ಖ್ಯಾತಿಗಿಂತ ಹೆಚ್ಚು ವಿವಾದಗಳನ್ನೇ ಉಸಿರಾಡಿದ ಕ್ರಿಕೆಟಿಗನಿಗೆ ಹೊಣೆಗಾರಿಕೆಯ ಹುದ್ದೆ
ಪಂಜಾಬ್ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ಸಿಧು ಕಳೆದ ಹಲವು ತಿಂಗಳುಗಳಿಂದ ಕಾಂಗ್ರೆಸ್ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲೂ ಅವರು ಪ್ರಚಾರ ಮಾಡಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಸೀಸನ್ನಲ್ಲಿ ಸಿಧು ಮತ್ತೆ ಕ್ರಿಕೆಟ್ ಕಾಮೆಂಟರಿಯಾಗಿದ್ದರು.
ಹಾಗೆಯೇ ಏಪ್ರಿಲ್ನಲ್ಲಿ, ಸಿಧು ತಮ್ಮ ಜೀವನ ಅನುಭವಗಳನ್ನು ಹಂಚಿಕೊಳ್ಳಲು, ಕ್ರಿಕೆಟ್, ಜೀವನಶೈಲಿಯ ಬಗ್ಗೆ ಮಾತನಾಡಲು ತಮ್ಮ ಹೊಸ ಯೂಟ್ಯೂಬ್ ಚಾನೆಲ್ ‘ನವಜೋತ್ ಸಿಧು ಅಧಿಕೃತ’ವನ್ನು ಪ್ರಾರಂಭಿಸಿದ್ದರು. ಆ ಸಮಯದಲ್ಲಿ, ಸಿಧು ಅವರನ್ನು ಸಕ್ರಿಯ ರಾಜಕೀಯಕ್ಕೆ ಮರಳುವ ಬಗ್ಗೆ ಕೇಳಿದಾಗ, ಜನರ ಕಲ್ಯಾಣಕ್ಕಾಗಿ ರಾಜಕೀಯ ಮಾಡಿದ್ದು ಅದು ಎಂದಿಗೂ ವ್ಯವಹಾರವಲ್ಲ ಎಂದಿದ್ದರು. ಇನ್ನು 2027ರಲ್ಲಿ ಪಂಜಾಬ್ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.





