ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಧರ್ಮಾಧಾರಿತ ಮೀಸಲಾತಿಯನ್ನು ಜಾರಿಗೆ ತರಲಿದೆ. ಕ್ರೀಡೆಯಲ್ಲೂ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲು ಯೋಜಿಸುತ್ತಿದೆ. ಕಾಂಗ್ರೆಸ್ ಗೆದ್ದರೆ, ಭಾರತೀಯ ಕ್ರಿಕೆಟ್ ತಂಡದಲ್ಲಿ ಮುಸ್ಲಿಮರೇ ತುಂಬಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ತಮ್ಮ ದ್ವೇಷ ಭಾಷಣವನ್ನು ಮುಂದುವರೆಸಿದ್ದಾರೆ.
ಈ ಹಿಂದೆ, ಕಾಂಗ್ರೆಸ್ ಹಿಂದು ಮಹಿಳೆಯರ ಮಾಂಗಲ್ಯ ಕಿತ್ತುಕೊಂಡು ಮುಸ್ಲಿಮರಿಗೆ ಕೊಡುತ್ತದೆ. ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ನೀಡುತ್ತದೆ. ದೇಶದ ಸಂಪತ್ತನ್ನು ನುಸುಳುಕೋರರಿಗೆ ಹಂಚುತ್ತದೆ ಎಂದು ದ್ವೇಷ ಪೂರಿತ ಸುಳ್ಳುಗಳನ್ನು ಮೋದಿ ಹೇಳಿದ್ದಾರೆ.
ಇದೀಗ, ತಮ್ಮ ದ್ವೇಷ ತುಂಬಿದ ಸುಳ್ಳುಗಳನ್ನು ಮುಂದುವರೆಸಿರುವ ಮೋದಿ, ಮಧ್ಯಪ್ರದೇಶದ ಧಾರ್ನಲ್ಲಿ ಮಾತನಾಡಿದ್ದು, “ಅಲ್ಪಸಂಖ್ಯಾತರಿಗೆ ಕ್ರೀಡೆಯಲ್ಲಿಯೂ ಮೀಸಲಾತಿ ನೀಡುವುದು ಕಾಂಗ್ರೆಸ್ನ ಉದ್ದೇಶವಾಗಿದೆ. ಇದರರ್ಥ ಧರ್ಮದ ಆಧಾರದ ಮೇಲೆ ಯಾರು ಕ್ರಿಕೆಟ್ ತಂಡದಲ್ಲಿ ಇರಬೇಕು ಮತ್ತು ಹೊರಗೆ ಇರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ” ಎಂದು ಹೇಳಿದ್ದಾರೆ.
“ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಇರುವ ಮೀಸಲಾತಿಗಳನ್ನು ‘ಕಿತ್ತುಕೊಳ್ಳಲು’ ಕಾಂಗ್ರೆಸ್ ಮತ್ತು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಯೋಜಿಸುತ್ತಿವೆ” ಎಂದು ಮೋದಿ ತಮ್ಮ ಸುಳ್ಳನ್ನು ಪುನರುಚ್ಛರಿಸಿದ್ದಾರೆ.
“ರಾಮಮಂದಿರಕ್ಕೆ ಬಾಬ್ರಿ ಬೀಗ ಹಾಕಿ ಬಿಡುತ್ತಾರೆ” ಎಂದು ಹೇಳುವ ಮೂಲಕ ರಾಮಮಂದಿರದ ಹೆಸರಿನಲ್ಲಿಯೂ ಮುಸ್ಲಿಂ ದ್ವೇಷವನ್ನು ಪ್ರಚೋದಿಸಿ ಮತ ಕೇಳಲು ಮೋದಿ ಯತ್ನಿಸಿದ್ದಾರೆ.
“ಪ್ರತಿಪಕ್ಷಗಳು ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ನೀಡಲು ಯೋಜಿಸುತ್ತಿವೆ” ಎಂದು ಪದೇ-ಪದೇ ಮೋದಿ ಆರೋಪಿಸುತ್ತಲೇ ಇದ್ದಾರೆ. ಆದರೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಧರ್ಮ ಆಧಾರಿತ ಮೀಸಲಾತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿರುವ ವಿಚಾರ. ಅದರೂ, ಜವಬ್ದಾರಿ ಸ್ಥಾನದಲ್ಲಿರುವ ಮೋದಿ, ಪ್ರತಿಪಕ್ಷಗಳ ವಿರುದ್ಧ ಆಧಾರರಹಿತ ಆರೋಪಿಗಳನ್ನು ಮಾಡುತ್ತಲೇ ಇದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಹೇಳುವುದೇನು?; “ಅಲ್ಪಸಂಖ್ಯಾತರು ಶಿಕ್ಷಣ, ಆರೋಗ್ಯ, ಸಾರ್ವಜನಿಕ ಉದ್ಯೋಗ, ಕೌಶಲ್ಯ ಅಭಿವೃದ್ಧಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಾರತಮ್ಯವಿಲ್ಲದೆ ಅವರಿಗೆ ನ್ಯಾಯಯುವ ಪಾಲನ್ನು ನೀಡಬೇಕು. ಅದನ್ನು ಕಾಂಗ್ರೆಸ್ ಖಚಿತಪಡಿಸುತ್ತದೆ” ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಆದರೆ, ಕಾಂಗ್ರೆಸ್ ಹೇಳುತ್ತಿರುವ ಉದ್ದೇಶವನ್ನು ತಿರುಚುತ್ತಿರುವ ಮೋದಿ ಮತ್ತು ಬಿಜೆಪಿ ಸುಳ್ಳು ಹೇಳಿಕೆಯೊಂದಿಗೆ ವಿಪಕ್ಷಗಳ ವಿರುದ್ಧ ಜನರಲ್ಲಿ ದ್ವೇಷ ಬಿತ್ತುತ್ತಿದ್ದಾರೆ.




