ದಿನದಿಂದ ದಿನಕ್ಕೆ ಚುನಾವಣೆ ಬಿಸಿ ಏರಿಕೆಯಾಗುತ್ತಿದೆ. ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಎರಡು ಪಕ್ಷಗಳು ತೀವ್ರ ಸೆಣಸಾಟ ನಡೆಸಿವೆ. ಅಬ್ಬರದ ಪ್ರಚಾರ ನಡೆಸಿವೆ. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ನಾರಿಶಕ್ತಿ ಮಹಿಳಾ ಸಮಾವೇಶದಲ್ಲಿ ಭಾಷಣ ಮಾಡಿದ ಬಿಜೆಪಿ ನಾಯಕಿ ಮಾಳವಿಕ ಅವಿನಾಶ, “ಇಲ್ಲಿಯ ಜನರ ರಕ್ತದ ಬಣ್ಣ ಕೆಂಪು ಅಲ್ಲ, ಕುಯ್ದರೇ ಕೇಸರಿ ರಕ್ತ ಬರುತ್ತೆ. ಇದು ನಮಗೆಲ್ಲ ಗೊತ್ತಿದೆ” ಎಂದು ಹೇಳಿದ್ದಾರೆ.
“ನಾನು ಇಲ್ಲಿ ಬಿಜೆಪಿ ಬಗ್ಗೆ, ಹಿಂದುತ್ವದ ಪಾಠ ಹೇಳಲು ಬಂದಿಲ್ಲ. ಆದರೆ, ಎಪ್ರಿಲ್ 26ರಂದು ಮದುವೆ ಇದೆ. ಮೋದಿ ಗೆಲ್ಲುತ್ತಾರೆ ಎಂದು ನಿರ್ಲಕ್ಷ್ಯ ಮಾಡಬೇಡಿ. ಮೋದಿಯವರು ಈ ದೇಶದ ಮಹಿಳೆಯರಿಗೆ ಶಕ್ತಿ ಕೊಟ್ಟಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಎಷ್ಟೆಲ್ಲ ಯೋಜನೆ ಮಾಡಿದ್ದಾರೆ. ಅದಕ್ಕಾಗಿ ನಾವು ಹಿಂತಿರುಗಿ ಕೊಡೋದು, ಒಂದು ಮತವಷ್ಟೇ. ಅದನ್ನು ತಪ್ಪದೆ ಮಾಡಬೇಕು” ಎಂದು ತಿಳಿಸಿದ್ದಾರೆ.
“ಮೋದಿಜಿ ಮತ್ತೊಮ್ಮೆ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ. ಇನ್ನು ಬ್ರಿಜೇಶ್ ಚೌಟ ಅಭ್ಯರ್ಥಿ ಅಲ್ಲ, ನನ್ನ ಲೆಕ್ಕದಲ್ಲಿ ಅವರು ಲೋಕಸಭಾ ಸದಸ್ಯ. ಅವರನ್ನ ಎಷ್ಟು ಅಂತರದಲ್ಲಿ ಗೆಲ್ಲಿಸುತ್ತೇವೆ ಎಂಬ ಸವಾಲು ನಮ್ಮ ಮುಂದಿದೆ” ಎಂದಿದ್ದಾರೆ.
“ಗರೀಬಿ ಹಠಾವೋ ಎಂದು ನಾವು ಹುಟ್ಟುವ ಮೊದಲೇ ಇಂದಿರಾ ಗಾಂಧಿ ಹೇಳಿದ್ದರು. ಆದರೆ, ಗರೀಬಿ ಹಠಾವೋ ಆಗಿಲ್ಲ. ಅದನ್ನು ಮಾಡಲು ಮೋದಿಯೇ ಬರಬೇಕಾಯಿತು. ಈಗ ಕಾಂಗ್ರೆಸ್ ಹಠಾವೋ ಮಾಡಲು ಶುರು ಮಾಡಿದ್ದಾರೆ. ಆ ಮೂಲಕ ಕಾಂಗ್ರೆಸಿಗರ ಭ್ರಷ್ಟಾಚಾರವನ್ನೂ ತೊಲಗಿಸುವ ಸಂಕಲ್ಪ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ದ್ವಿತೀಯ ಪಿಯುಸಿ | ಪರೀಕ್ಷೆಯಲ್ಲಿ ಶೇ. 78 ರಷ್ಟು ಫಲಿತಾಂಶ ಗಳಿಸಿದ ಬಿಬಿಎಂಪಿ ಕಾಲೇಜುಗಳು
“ಮೋದಿ ಈ ದೇಶಕ್ಕೆ ಕೊಟ್ಟಿದ್ದೇನು ಅನ್ನೋದು ನಮ್ಮೆಲ್ಲರ ಮನಸ್ಸಿನಲ್ಲಿರಬೇಕು. ದಿನಪೂರ್ತಿ ಎಚ್ಚರದಲ್ಲಿದ್ದು, ಈ ದೇಶದ ಒಳಿತಿಗಾಗಿ ದುಡಿಯುತ್ತಿದ್ದಾರೆ. ದೇಶದ ಅಭ್ಯುದಯವೇ ಅವರ ಗುರಿ. ಇಡೀ ದೇಶದ ಜನರು, ಪ್ರತಿ ಗ್ರಾಮವೂ ಅಭಿವೃದ್ಧಿಯಲ್ಲಿ ಜೋಡಣೆಯಾಗಬೇಕು ಅನ್ನುವ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದಿದ್ದಾರೆ.




