- ಲೇಖಕರ ಬರವಣಿಗೆಗಳು ಸಮಾಜಮುಖಿಯಾಗಿರಬೇಕು
- ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ
ನಮ್ಮ ಸರ್ಕಾರದಲ್ಲಿ ಸಾಹಿತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆತಂಕ ಪಡಬೇಕಾಗಿಲ್ಲ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಯಾರೂ ಹೆದರಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಬರಹಗಾರರು ಹಾಗೂ ಪ್ರಕಾಶಕರ ಸಂಘದ 20ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂದು ಭಾಗವಹಿಸಿ ಮಾತನಾಡಿದ ಅವರು ನಮ್ಮ ಅವಧಿಯಲ್ಲಿಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತತೆ ಇದೆ ಎಂದರು.
ಸಾಹಿತಿಗಳೆಂದರೆ ಸಮಾಜವನ್ನು ತಿದ್ದುವಂತಹವರು, ಅವರ ವಿಚಾರದಲ್ಲಿ ನನಗೆ ಅಪಾರ ಗೌರವ ಇದೆ ಎಂದ ಸಿಎಂ, ಲೇಖಕರ ಬರವಣಿಗೆಗಳು ಸಮಾಜಮುಖಿಯಾಗಿರಬೇಕು. ಸಮಾಜ ನನಗೇನು ನೀಡಿದೆ ಎಂದು ಪ್ರಶ್ನಿಸುವ ಬದಲು ಸಮಾಜಕ್ಕೆ ನನ್ನ ಕೊಡುಗೆಯೇನು ಎಂದು ಪ್ರಶ್ನಿಸಿಕೊಂಡು, ಅದಕ್ಕೆ ಉತ್ತರ ಕಂಡುಕೊಳ್ಳುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದರು.
ಅಸಮಾನತೆ ಹೋಗಲಾಡಿಸಿದರೆ ಸಮಾಜ ಅಭಿವೃದ್ಧಿ
ಸಮಾಜದಲ್ಲಿ ಬದಲಾವಣೆಗಳಾಗಬೇಕು. ಜಾತಿ ಪದ್ಧತಿಯ ಕಾರಣ, ಬಹಳ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಇದರಿಂದ ಆರ್ಥಿಕ, ಸಾಮಾಜಿಕ ಅಸಮಾನತೆ ಉಂಟಾಗುತ್ತದೆ. ಈ ಅಸಮಾನತೆಯನ್ನು ಹೋಗಲಾಡಿಸಿದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುತ್ತದೆ. ಇದಾದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ನಮ್ಮ ಸಂವಿಧಾನದ ಉದ್ದೇಶವೂ ಇದೆ ಆಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? : ರಾಜ್ಯಕ್ಕೆ ತೆಲಂಗಾಣದಿಂದ ಭತ್ತ, ಛತ್ತೀಸಗಢದಿಂದ ಅಕ್ಕಿ : ಸಿಎಂ ಸಿದ್ದರಾಮಯ್ಯ
ಜ್ಞಾನ ವೃದ್ಧಿಗಾಗಿ ಪುಸ್ತಕ ಓದಬೇಕು
ಜ್ಞಾನ ವೃದ್ಧಿಗಾಗಿ ಪುಸ್ತಕವನ್ನು ಓದಲೇಬೇಕು. ಕಲಿತಷ್ಟು ಜ್ಞಾನ ವಿಕಾಸಗೊಳ್ಳುತ್ತದೆ ಎಂದು ಸಿಎಂ ಹೇಳಿದರು. ಭಾರತದಲ್ಲಿ ಒಂದು ವ್ಯಕ್ತಿ, ಒಂದು ಮತ, ಒಂದು ಮೌಲ್ಯವೆಂದು ಗುರುತಿಸುವಂತೆ ನಮ್ಮ ಸಂವಿಧಾನ ತಿಳಿಸಿದ್ದರೂ, ಸಾಮಾಜಿಕವಾಗಿ ಆರ್ಥಿಕವಾಗಿ ವೈರುಧ್ಯಗಳು ನಮ್ಮ ಸಮಾಜದಲ್ಲಿದೆ.
ಅಸಮಾನತೆಗೆ ಒಳಗಾಗುವ ಜನರೇ ಭಾರತದ ಸ್ವಾತಂತ್ರ್ಯದ ಹಾಗೂ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸಗೊಳಿಸುವ ಸಾಧ್ಯತೆಯಿದೆ ಎಂದು ಡಾ. ಅಂಬೇಡ್ಕರ್ ಸಂವಿಧಾನ ಅಂಗೀಕೃತವಾದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದ್ದರು. ಇದಕ್ಕಾಗಿ ನಾವು ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.




