ಕೆನಡಾದ ಭದ್ರತಾ ಗುಪ್ತಚರ ಸೇವೆ (ಸಿಎಸ್ಐಎಸ್) ಸಿದ್ಧಪಡಿಸಿದ ವರದಿಯಲ್ಲಿ ಚೀನಾ ಅತಿದೊಡ್ಡ ಕಳವಳವಾಗಿದ್ದರೂ, ಫೆಡರಲ್ ಚುನಾವಣೆಗಳಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.
ಒಂದು ಕಾಲದಲ್ಲಿ ಸ್ನೇಹಪರ ದೇಶವೆಂದೇ ಪರಿಗಣಿಸಲಾಗಿದ್ದ ಕೆನಡಾ ಇದೀಗ ನಿಧಾನವಾಗಿ ಭಾರತದ ಆಪ್ತವಲಯದಿಂದ ಹೊರಹೋಗುತ್ತಿದೆ. ಕೆನಡಾದ ಭದ್ರತಾ ಗುಪ್ತಚರ ಸೇವೆ (ಸಿಎಸ್ಐಎಸ್) ಸಿದ್ಧಪಡಿಸಿದ ವರದಿಯಲ್ಲಿ ಚೀನಾ ತಮ್ಮ ದೇಶದ ಅತಿದೊಡ್ಡ ಕಳವಳವಾಗಿರುವುದು ನಿಜವಾಗಿದ್ದರೂ, ಫೆಡರಲ್ ಚುನಾವಣೆಗಳಲ್ಲಿ ಭಾರತ ಹಸ್ತಕ್ಷೇಪ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟಿದೆ.
ಕೆನಡಾ ಮತ್ತು ಭಾರತದ ನಡುವೆ ಖಾಲಿಸ್ತಾನಿ ಉಗ್ರರಿಗೆ ಸಂಬಂಧಿಸಿದ ಘರ್ಷಣೆಯ ನಂತರ ಮಾತುಕತೆಯ ನಡುವೆ ಸಮಸ್ಯೆ ಪರಿಹಾರದ ಪ್ರಯತ್ನವಾಗುತ್ತಿದ್ದರೂ ಬಿಗುವಿನ ವಾತಾವರಣವಿದೆ. ಅದರ ನಡುವೆಯೇ ಇತ್ತೀಚೆಗೆ ಬಹಿರಂಗವಾಗಿರುವ ದಾಖಲೆಯೊಂದರಲ್ಲಿ ಸಿಎಸ್ಐಎಸ್ ವಿದೇಶಿ ಹಸ್ತಕ್ಷೇಪದ ಬಗ್ಗೆ ಡೆಮಾಕ್ರೆಟಿಕ್ ಇನ್ಸ್ಟಿಟ್ಯೂಷನ್ಸ್ ಸಚಿವರಿಗೆ ನೀಡಿದ ವರದಿಯಲ್ಲಿ ಭಾರತದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. “ಭಾರತ ವಿದೇಶಿ ಹಸ್ತಕ್ಷೇಪದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ” ಎಂದು ತಿಳಿಸಿದೆ. ಈ ವಾಕ್ಯದ ವಿವರಣೆಯಲ್ಲಿ ಭಾರತದ ಹಸ್ತಕ್ಷೇಪದ ಮಾಹಿತಿಯನ್ನು ಹೇಗೆ ನೀಡಲಾಗಿದೆ ಎಂಬ ಬಗ್ಗೆ ಬಹಿರಂಗವಾಗಿಲ್ಲ.
ಭಾರತೀಯ ರಾಜತಾಂತ್ರಿಕರು ಇತ್ತೀಚೆಗೆ ನೀಡಿದ ಮಾಧ್ಯಮ ಹೇಳಿಕೆಗಳಲ್ಲಿ ಕೆನಡಾದ ಸಾವ್ರತ್ರಿಕ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವ ಆರೋಪವನ್ನು ನಿರಾಕರಿಸಿದ್ದಾರೆ. “ಪ್ರಜಾಸತ್ತತ್ಮಕ ರಾಷ್ಟ್ರವಾಗಿ ನಾವು ಇತರ ಪ್ರಜಾಪ್ರಭುತ್ವಗಳ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ” ಎಂದು ವಿದೇಶಾಂಗ ವ್ಯಹಾರಗಳ ಅಧಿಕಾರಿ ಹೇಳಿದ್ದಾರೆ.
ಭಾರತದ ಬಗ್ಗೆ ಕೆನಡಾ ಕಳವಳ ವ್ಯಕ್ತಪಡಿಸಿದ್ದರೂ, ಮುಖ್ಯವಾಗಿ 2019 ಮತ್ತು 2021ರ ಸಾರ್ವತ್ರಿಕ ಚುನಾವಣೆಗಳಲ್ಲಿ ಚೀನಾ ಹಸ್ತಕ್ಷೇಪ ಮಾಡಿರುವುದು ಕೆನಡಾದಲ್ಲಿ ನ್ಯಾಯಾಂಗ ವಿಚಾರಣೆ ಎದುರಿಸಿದೆ. ನ್ಯಾಯಮೂರ್ತಿ ಮೇರಿ ಜೋಸ್ ಹೋಗ್ ನೇತೃತ್ವದಲ್ಲಿ ಫೆಡರಲ್ ಚುನಾವಣೆ ಪ್ರಕ್ರಿಯೆಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಸಾರ್ವಜನಿಕ ತನಿಖೆಗೆ ಆದೇಶಿಸಲಾಗಿತ್ತು. ಈ ವಾರ ನ್ಯಾಯಪೀಠ ವಿಚಾರಣೆ ಆರಂಭಿಸಿದ್ದು, 2024 ಮೇನಲ್ಲಿ ಮಧ್ಯಂತರ ವರದಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮುಂಬರುವ ಡಿಸೆಂಬರ್ ನಲ್ಲಿ ಅಂತಿಮ ವರದಿ ಸಿದ್ಧವಾಗಲಿದೆ.
ಈವರೆಗೂ ಕೆನಡಾದ ಆಂತರಿಕ ರಾಜಕೀಯದಲ್ಲಿ ಚೀನಾ ಹಸ್ತಕ್ಷೇಪದ ಬಗ್ಗೆ ಮಾತ್ರ ಗುಪ್ತಚರ ಸಂಸ್ಥೆಗಳು ಕಣ್ಣಿಟ್ಟಿದ್ದವು. ಆದರೆ ಕಳೆದ ಸೆಪ್ಟೆಂಬರ್ 18ರಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಭಾರತೀಯ ಗುಪ್ತಚರರು ಖಾಲಿಸ್ತಾನ ಪರ ಉಗ್ರ ಹರ್ ದೀಪ್ ಸಿಂಗ್ ನಿಜ್ಜಾರ್ ನನ್ನು ಕೊಲೆಗೈದಿದ್ದಾರೆ ಎನ್ನುವ ವಿಶ್ವಾಸಾರ್ಹ ಆರೋಪಗಳಿವೆ ಎಂದು ಸಂಸತ್ತಿನಲ್ಲಿ ತಿಳಿಸಿದ ನಂತರ ಭಾರತ ಮತ್ತು ಕೆನಡಾ ನಡುವೆ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಎರಡೂ ದೇಶಗಳು ಪರಸ್ಪರರ ರಾಜತಾಂತ್ರಿಕರನ್ನು ದೇಶ ತೊರೆಯುವಂತೆ ಸೂಚಿಸಲಾಗಿತ್ತು. ಭಾರತ ಕೆನಡಾ ಪ್ರಜೆಗಳಿಗೆ ವೀಸಾ ನೀಡುವುದನ್ನು ತಡೆಹಿಡಿದಿತ್ತು. ಕೆನಡಾದ ಆರೋಪ ನಿರಾಕರಿಸಿ, ಆ ದೇಶದ ಆಂತರಿಕ ವ್ಯವಹಾರಗಳಲ್ಲಿ ಭಾರತ ಹೇಗೆ ಹಸ್ತಕ್ಷೇಪ ಮಾಡುತ್ತಿದೆ ಎನ್ನುವ ಸಾಕ್ಷ್ಯಗಳನ್ನು ನೀಡುವಂತೆ ಭಾರತ ಕೆನಡಾಗೆ ತಿಳಿಸಿತ್ತು.





