“ಪ್ರಧಾನಿ ಮೋದಿ ಆಡಳಿತದಲ್ಲಿ ದೇಶವು ‘ನಿರಂಕುಶಪ್ರಭುತ್ವ’ದತ್ತ ಸಾಗುತ್ತಿದ್ದು, ದೇಶವನ್ನು ಕಾಪಾಡಲು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ಅನಿವಾರ್ಯ” ಎಂದು ಇಂಡಿಯಾ ಬ್ಲಾಕ್ ರ್ಯಾಲಿಯಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಭಾರತ ಬಣದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. “ನಾವು ಚುನಾವಣಾ ಪ್ರಚಾರಕ್ಕಾಗಿ ಬಂದಿಲ್ಲ, ಪ್ರಜಾಪ್ರಭುತ್ವವನ್ನು ಉಳಿಸಲು ಬಂದಿದ್ದೇವೆ. ನೀವು ಆರೋಪಗಳನ್ನು ಮಾಡಿ ಜನರನ್ನು ಜೈಲಿಗೆ ಕಳುಹಿಸಿದ್ದೀರಿ. ಇದು ಎಂತಹ ಸರ್ಕಾರ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಬೃಹತ್ ಪ್ರತಿಭಟನೆ; ವಿಪಕ್ಷಗಳು ಸಜ್ಜು
“ನಮ್ಮ ಇಬ್ಬರು ಸಹೋದರಿಯರು ನ್ಯಾಯಕ್ಕಾಗಿ ಹೋರಾಡುತ್ತಿರುವಾಗ ಸಹೋದರರು ಹಿಂದೆ ಉಳಿಯುವುದು ಹೇಗೆ? ಆದ್ದರಿಂದ ನಾವು ನಮ್ಮ ಸಹೋದರಿಯರಾದ ಕಲ್ಪನಾ ಮತ್ತು ಸುನೀತಾ ಅವರಿಗಾಗಿ ಇಲ್ಲಿದ್ದೇವೆ. ನಾವಷ್ಟೇ ಅಲ್ಲ ಇಡೀ ದೇಶವು ನಿಮ್ಮೊಂದಿಗಿದೆ” ಎಂದು ಹೇಳಿದರು.
ಕಲ್ಪನಾ ಅವರು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪತ್ನಿ ಮತ್ತು ಕವಿತಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿಯಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸೊರೆನ್ ಇಬ್ಬರನ್ನೂ ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಬಂಧಿಸಿದೆ.
“ಕೆಲವು ಸಮಯದ ಹಿಂದೆ, ನಮ್ಮ ದೇಶವು ನಿರಂಕುಶಾಧಿಕಾರದತ್ತ ಸಾಗುತ್ತಿದೆ ಎಂದು ನಮಗೆ ಅನುಮಾನವಿತ್ತು. ಆದರೆ ಇನ್ನು ಮುಂದೆ ಅದು ಅನುಮಾನವಲ್ಲ, ಇದು ವಾಸ್ತವ. ಹೇಮಂತ್ ಮತ್ತು ಅರವಿಂದ್ ಅವರನ್ನು ಬಂಧಿಸುವ ಮೂಲಕ ಜನರು ಭಯಭೀತರಾಗುತ್ತಾರೆ ಎಂದು ಬಿಜೆಪಿ ಸರ್ಕಾರ ಭಾವಿಸಿದರೆ ಅದು ತಪ್ಪು. ಬಿಜೆಪಿಗೆ ಭಾರತೀಯರ ಬಗ್ಗೆ ತಿಳಿದಿಲ್ಲ. ನಾವು ಹೆದರುವ ಜನರಲ್ಲ, ನಾವು ಹೋರಾಡುತ್ತೇವೆ” ಎಂದು ಠಾಕ್ರೆ ಕಿಡಿಕಾರಿದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ ದಿಕ್ಕು ತಪ್ಪಿಸಲು ಕೇಜ್ರಿವಾಲ್ ಬಂಧನ: ಪಿಣರಾಯಿ ವಿಜಯನ್
“ಬಿಜೆಪಿಯು ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿದೆ” ಎಂದು ಆರೋಪಿಸಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, “ಬಿಜೆಪಿಯು ಈ ಮೂರು ಏಜೆನ್ಸಿಗಳು ತಮ್ಮ ಮಿತ್ರಪಕ್ಷಗಳು ಎಂದು ಘೋಷಿಸಬೇಕು” ಎಂದು ಟಾಂಗ್ ನೀಡಿದರು.
ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುವಂತೆ ಠಾಕ್ರೆ ಎಲ್ಲ ರೈತರಿಗೆ ಮನವಿ ಮಾಡಿದರು. “ರೈತರನ್ನು ದೆಹಲಿಗೆ ಬರಲು ಬಿಡಲಿಲ್ಲ, ರಸ್ತೆಗೆ ಮೊಳೆ ಹೊಡೆದರು, ಅಶ್ರುವಾಯು ಪ್ರಯೋಗಿಸಿದರು. ಸರಕಾರ ರೈತರನ್ನು ಭಯೋತ್ಪಾದಕರು ಎಂದು ಕರೆದು ದೆಹಲಿಗೆ ಬರದಂತೆ ತಡೆಯುತ್ತದೆ. ಆದರೆ ರೈತರು ಅವರು (ಬಿಜೆಪಿ) ಮತ್ತೆ ದೆಹಲಿಗೆ ಬರದಂತೆ ತಡೆಯಿರಿ” ಎಂದು ಉದ್ಧವ್ ಠಾಕ್ರೆ ಕರೆ ನೀಡಿದರು.




