‘ಹಿಜಾಬ್ ನಿಷೇಧ ವಾಪಾಸ್ ಪಡೆಯುತ್ತೇವೆ’ ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, “ಆರ್ಎಸ್ಎಸ್ನವರು ಹಾಕುತ್ತಿದ್ದ ದೊಗಲೆ ಚಡ್ಡಿಗೆ ಯಾರಾದ್ರೂ ಆಕ್ಷೇಪ ಎತ್ತಿದ್ದರಾ?” ಎಂದು ಬಿಜೆಪಿಯವರನ್ನು ಪ್ರಶ್ನಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, “ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಯಲ್ಲಿ ತಪ್ಪೇನಿದೆ? ಬಿಜೆಪಿಯವರು ಕೋಮು ಧ್ರುವೀಕರಣ ಮಾಡಲು ಮಾಡಿದ್ದ ಎಲ್ಲ ಆದೇಶವನನ್ನು ನಮ್ಮ ಸರ್ಕಾರ ವಾಪಸ್ ಪಡೆಯಲಿದೆ. ಅದರಲ್ಲಿ ತಪ್ಪೇನು? ಹಿಜಾಬ್ ವಿಚಾರದಲ್ಲಿ ಬಿಜೆಪಿಯವರು ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ ಅಷ್ಟೇ. ಯಾವ ಶಾಲೆಯಲ್ಲಿ ಯಾವ ಬಣ್ಣದ ಸಮವಸ್ತ್ರ ಇರುತ್ತದೆಯೋ ಅದೇ ಸಮವಸ್ತ್ರ ಶಾಲನ್ನು ಕೆಲವು ಮಕ್ಕಳು ಕೊರಳಲ್ಲಿ ಹಾಕಿಕೊಳ್ಳುತ್ತಾರೆ. ಕೆಲವರು ತಲೆಗೆ ಹಾಕಿಕೊಳ್ಳುತ್ತಾರೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

“ಒಂದೊಂದು ಸಂಘ-ಸಂಸ್ಥೆಗಳು ಒಂದೊಂದು ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ. ಅದೇ ರೀತಿಯ ಆರ್ಎಸ್ಎಸ್ನವರು ಕೂಡ ಈ ಮುಂಚೆ ಖಾಕಿ ಬಣ್ಣದ ದೊಗಲೆ ಚಡ್ಡಿಗಳನ್ನು ಹಾಕಿಕೊಳ್ಳುತ್ತಿದ್ದರು. ಈಗ ಅದನ್ನು ಬದಲಿಸಿ, ಪ್ಯಾಂಟ್ಗೆ ಬಂದಿದ್ದಾರೆ. ಆರ್ಎಸ್ಎಸ್ನವರು ಹಾಕುತ್ತಿದ್ದ ದೊಗಲೆ ಚಡ್ಡಿ ಬದಲಿಸಿ ಪ್ಯಾಂಟ್ಗೆ ಬಂದಾಗ ಯಾರಾದ್ರೂ ಆಕ್ಷೇಪ ಎತ್ತಿದ್ದರಾ? ನೀವು ದೊಗಲೆ ಚಡ್ಡೀನಾದ್ರೂ ಹಾಕೊಳ್ಳಿ, ಸಣ್ಣ ಚಡ್ಡೀನಾದ್ರೂ ಹಾಕೊಳ್ಳಿ. ಅದು ನಿಮ್ಮ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಹಾಗಾಗಿ, ವಿದ್ಯಾರ್ಥಿಗಳ ವಿಚಾರದಲ್ಲಿ ಸಣ್ಣತನ ಮಾಡುವ ಅವಶ್ಯಕತೆ ಕಾಂಗ್ರೆಸ್ನವರಿಗೆ ಇಲ್ಲ. ಸಿಎಂ ನೀಡಿರುವುದು ಬಟ್ಟೆ ಮತ್ತು ಆಹಾರ ಅವರವರ ಸ್ವಾತಂತ್ರ್ಯದ ಬಗ್ಗೆ . ಒಂದು ದುಪ್ಪಟ್ಟದ ಬಗ್ಗೆ ಅಷ್ಟೊಂದು ಚರ್ಚೆ ಮಾಡಬೇಕಾದ ಅವಶ್ಯಕತೆಯೇ ಇಲ್ಲ” ಎಂದು ಸಚಿವರು ಅಭಿಪ್ರಾಯಿಸಿದ್ದಾರೆ.
“ಬಿಜೆಪಿಯವರು ಮಾಡುತ್ತಿರುವುದು ವೋಟ್ ಬ್ಯಾಂಕ್ ರಾಜಕಾರಣ. ನಾವು ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಮಾಡಿರುವ ಆದೇಶವನ್ನು ಹಿಂಪಡೆಯುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ. ಬಿಜೆಪಿಯವರು ಹೇಳಿದ್ದನ್ನೆಲ್ಲ ನಾವು ಕೇಳಕ್ಕಾಗುತ್ತಾ? ಹಿಜಾಬ್, ಹಲಾಲ್ ಕಟ್-ಜಟ್ಕಾ ಕಟ್ ಅಂತ ಮಾಡುತ್ತಿದ್ದ ಕಾರಣಕ್ಕಾಗಿಯೇ ಇವತ್ತು 65ಕ್ಕೆ ತಂದು ನಿಲ್ಲಿಸಿ, ಮನೆಯಲ್ಲಿ ಕೂರಿಸಿದ್ದಾರೆ. ನಾವು ಮಾಡುತ್ತಿರುವುದು ಅಭಿವೃದ್ಧಿಯ ಚಿಂತನೆ. ಹಿಜಾಬ್ ದೊಡ್ಡ ಚರ್ಚೆಯ ವಿಷಯವೇ ಅಲ್ಲ. ಮಾಧ್ಯಮದವರು ಮತ್ತು ಬಿಜೆಪಿಯವರು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ” ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ, ಸಂಸತ್ ಭದ್ರತಾ ಲೋಪ ಘಟನೆಯ ಬಳಿಕ ಬಿಜೆಪಿಯವರು ತಮ್ಮ ಗುಹೆ ಬಿಟ್ಟು ಹೊರಗೆ ಬಂದಿರಲಿಲ್ಲ. ಸಿಎಂ ಅವರು ಹಿಜಾಬ್ ಎಂದ ತಕ್ಷಣ ಸಿಟಿ ರವಿ ಹೊರಗೆ ಬಂದಿದ್ದಾರೆ. ಸಿ ಟಿ ರವಿ ಸಂಸತ್ ಭದ್ರತಾ ಲೋಪ ಘಟನೆಯ ಬಗ್ಗೆ ಒಂದಾದರೂ ಹೇಳಿಕೆ ಕೊಟ್ಟಿದ್ದಾರಾ? ಎಂದು ತಂಗಡಗಿ ಪ್ರಶ್ನಿಸಿದರು.





