ಜಮ್ಮು ಮತ್ತು ಕಾಶ್ಮೀರದ ಹಿರಿಯ ರಾಜಕಾರಣಿ ಮತ್ತು ಮಾಜಿ ಉಪಮುಖ್ಯಮಂತ್ರಿ ಮುಜಾಫರ್ ಹುಸೇನ್ ಬೇಗ್ ಅವರು ಪಿಡಿಪಿ ತೊರೆದಿದ್ದಾರೆ. ಈ ಬೆನ್ನಲ್ಲೇ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಹೆಚ್ಚಾಗಿವೆ. ಅಲ್ಲದೆ, ಅವರು ಮಂಗಳವಾರ ಜಮ್ಮುವಿನಲ್ಲಿ ನಡೆದ ಪ್ರಧಾನಿ ಮೋದಿ ರ್ಯಾಲಿಯಲ್ಲಿ ಭಾಗವಹಿಸಿದ್ದು, ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಮೋದಿ ಅವರ ರ್ಯಾಲಿಯಲ್ಲಿ ಭಾವಹಿಸಿದ್ದು ಮಾತ್ರವಲ್ಲದೆ, ಮೋದಿಯನ್ನು ಬೇಗ್ ಹೊಗಳಿದ್ದಾರೆ. “ಕಳೆದ 10 ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸುವ ಮೂಲಕ, ಭಾರತದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ದೊಡ್ಡ ಸ್ಥಾನವನ್ನು ನೀಡಲು ಪ್ರಧಾನಿ ಬಯಸುತ್ತಾರೆ. ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಮೀರುವುದು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಲ್ಲಿ ಅವರನ್ನು ಬೆಂಬಲಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದಾರೆ.
“ಮೋದಿಯವರ ಅಭಿವೃದ್ಧಿ ಕಾರ್ಯಸೂಚಿಯಿಂದ ನಾನು ಪ್ರಭಾವಿತನಾಗಿದ್ದೇನೆ. ಅವರು ಪಹಾರಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ಭರವಸೆಯನ್ನು ಈಡೇರಿಸಿದ್ದಾರೆ” ಎಂದಿದ್ದಾರೆ.
ಸಂಸತ್ತಿನ ಚುನಾವಣೆಯ ನಂತರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ನೀವು ಭಾವಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬೇಗ್, “ಅವರು ಬಯಸಿದಷ್ಟು ಕಾಲ ಯಾರೂ ಅವರ ಸ್ಥಾನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಪ್ರತಿಯೊಬ್ಬರನ್ನು ಮತ್ತು ಪ್ರತಿ ಸಮುದಾಯವನ್ನು ಮೋದಿ ಅವರು ಜೊತೆಗೆ ಕರೆದುಕೊಂಡು ಹೋಗಿದ್ದಾರೆ ಎಂದ ಬೇಗ್, “ಹಿಂದುಗಳು ಮತ್ತು ಮುಸ್ಲಿಮರ ನಡುವೆ ವ್ಯತ್ಯಾಸವಿದೆ ಎಂದು ಯಾರಾದರೂ ಹೇಳಿದರೆ, ಅದು ಅತ್ಯಂತ ಕ್ರೂರ ಸಂಗತಿ” ಎಂದಿದ್ದಾರೆ.




