ವೈಎಸ್ಆರ್ ಕಾಂಗ್ರೆಸ್ ಪಕ್ಷ(YSRCP) ನಾಯಕ ಮತ್ತು ಮಾಜಿ ಶಾಸಕ ನಲ್ಲಾಪುರರೆಡ್ಡಿ ಪ್ರಸನ್ನ ಕುಮಾರ್ ರೆಡ್ಡಿ ಅವರು ಟಿಡಿಪಿ ಶಾಸಕಿ ವೆಮಿರೆಡ್ಡಿ ಪ್ರಶಾಂತಿ ರೆಡ್ಡಿ ಅವರ ಲೈಂಗಿಕ ನಿಂದನೆ ಮಾಡಿದ್ದು ಸದ್ಯ ವಿವಾದ ಸೃಷ್ಟಿಯಾಗಿದೆ. ಜುಲೈ 7ರಂದು ನೆಲ್ಲೂರು ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಶಾಸಕ ನಲ್ಲಾಪುರರೆಡ್ಡಿ ಅಸಭ್ಯ ಮತ್ತು ಸ್ತ್ರೀದ್ವೇಷದ ಹೇಳಿಕೆ ನೀಡಿದ್ದಾರೆ.
“ಪ್ರಶಾಂತಿ ರೆಡ್ಡಿ ತನ್ನ ಪತಿ, ಸಂಸದ ವೆಮಿರೆಡ್ಡಿ ಪ್ರಭಾಕರ್ ರೆಡ್ಡಿ ಅವರಿಗೆ ಬ್ಲಾಕ್ ಮೇಲ್ ಮಾಡಿ ಮದುವೆಯಾಗಿದ್ದಾರೆ. ಮದುವೆಯ ನಂತರ ಅವರು ನಿದ್ರಿಸುವಾಗ ವಿಷ ನೀಡಬಹುದು. ಪ್ರಶಾಂತಿ ಅವರನ್ನು ಮದುವೆಯಾಗಿರುವುದು ಪ್ರಭಾಕರ್ ರೆಡ್ಡಿ ಅವರು ಬಾವಿಗೆ ಬಿದ್ದಂತೆ” ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ವಿಮಾನ ಹಾರಿಸಲು ಯೋಗ್ಯನಲ್ಲ, ಚಪ್ಪಲಿ ಹೊಲಿ: ಇಂಡಿಗೋದಲ್ಲಿ ದಲಿತ ಪೈಲಟ್ಗೆ ಜಾತಿ ನಿಂದನೆ
“ಉತ್ತರ ಭಾರತದ ಜನರಿಗೆ ಆಕೆ ಏನು ಎಂಬುದು ತಿಳಿದಿದ್ದಾರೆ” ಎಂದೂ ವ್ಯಂಗ್ಯವಾಗಿ ನುಡಿದಿದ್ದಾರೆ. ಈ ವೇಳೆ ವೇದಿಕೆಯಲ್ಲಿದ್ದ YSRCP ಬೆಂಬಲಿಗರು ನಕ್ಕು, ಚಪ್ಪಾಳೆ ತಟ್ಟಿದ್ದಾರೆ.
ಈ ಸಂಬಂಧ ವೇಮಿರೆಡ್ಡಿ ಪ್ರಶಾಂತಿ ರೆಡ್ಡಿ ಪೊಲೀಸ್ ವರಿಷ್ಠಾಧಿಕಾರಿಗೆ ಔಪಚಾರಿಕ ದೂರು ನೀಡಿದ್ದಾರೆ. ನಲ್ಲಾಪುರರೆಡ್ಡಿ ವಿರುದ್ಧ ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ಮಾನನಷ್ಟ, ಕೆಣಕುವುದು ಮತ್ತು ಸಾರ್ವಜನಿಕ ದುಷ್ಕೃತ್ಯವನ್ನು ಹರಡುವುದು ದೂರನ್ನು ನೀಡಿದ್ದಾರೆ.
ದೂರಿನಲ್ಲಿ ಲೈಂಗಿಕ ಕಿರುಕುಳ, ಮಾನನಷ್ಟ, ಅಶ್ಲೀಲ ಸನ್ನೆಗಳು ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಐಪಿಸಿ ಮತ್ತು ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್ಗಳಡಿ ದೂರು ದಾಖಲಾಗಿದೆ. ಅವರು ಘಟನೆಯ ವಿಡಿಯೋವನ್ನು ಸಹ ಹೊಂದಿದ್ದಾರೆ.
ಪ್ರಸನ್ನ ಕೋವೂರಿನಿಂದ ಐದು ಬಾರಿ ಶಾಸಕರಾಗಿದ್ದಾರೆ. ಈ ಹಿಂದೆ ಟಿಡಿಪಿಯಿಂದ ಮತ್ತು ನಂತರ ವೈಎಸ್ಆರ್ಸಿಪಿ ಟಿಕೆಟ್ನಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. 2024ರಲ್ಲಿ ಪ್ರಶಾಂತಿ ರೆಡ್ಡಿ ವಿರುದ್ಧ ಚುನಾವಣೆಯಲ್ಲಿ ಸೋತರು.
ಟಿಡಿಪಿ, ಜನ ಸೇನಾ ಮತ್ತು ಆಂಧ್ರಪ್ರದೇಶ ಮಹಿಳಾ ಆಯೋಗದ ನಾಯಕರು ಪ್ರಸನ್ನ ಕುಮಾರ್ ರೆಡ್ಡಿ ಹೇಳಿಕೆಯನ್ನು ಖಂಡಿಸಿದೆ. ಈ ಹೇಳಿಕೆಗಳನ್ನು ಸಮಾಜಕ್ಕೆ ಅವಮಾನ ಮತ್ತು ಮಹಿಳೆಯರ ಘನತೆಯ ಮೇಲಿನ ದಾಳಿ ಎಂದು ಕರೆದಿದ್ದಾರೆ.





