ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಅರವಿಂದ್ ಕೇಜ್ರಿವಾಲ್ ಅವರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ, ಅದೇ ಪ್ರಕರಣದಲ್ಲಿ ಖುಲಾಸೆಗೊಂಡ ಮತ್ತಿಬ್ಬರು ನಾಯಕರಿದ್ದಾರೆ. ಅವರಲ್ಲಿ, ಒಬ್ಬರು ಕೇಜ್ರಿವಾಲ್ ಅವರ ಬಲಗೈ ಬಂಟ ಮನೀಶ್ ಸಿಸೋಡಿಯಾ. ಮತ್ತೊಬ್ಬರು, ಮಾಜಿ ಬಿಆರ್ಎಸ್ ನಾಯಕಿ, ತೆಲಂಗಾಣ ಜಾಗೃತಿ ಸಂಘಟನೆಯ ಮುಖ್ಯಸ್ಥೆ ಕೆ ಕವಿತಾ.
ಕವಿತಾ ಅವರನ್ನು ಇದೇ ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ 2024ರ ಮಾರ್ಚ್ನಲ್ಲಿ ಬಂಧಿಸಲಾಗಿತ್ತು. ಇದೀಗ, ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರಂತೆ, ಕವಿತಾ ಕೂಡ ಎಲ್ಲ ಆರೋಪಗಳಿಂದ ಮುಕ್ತಗೊಂಡಿದ್ದಾರೆ.
ತಮ್ಮ ಬಂಧನ, ಜೈಲುವಾಸ ಮತ್ತು ಖುಲಾಸೆಯ ಕುರಿತು ಕವಿತಾ ಮಾತಮಾಡಿದ್ದಾರೆ. “…ನನ್ನನ್ನು ಜೈಲಿಗೆ ಕರೆದೊಯ್ಯುವ ದಿನ ನನ್ನ ಕಿರಿಯ ಮಗ ತನ್ನ ಇಂಟರ್ಮೀಡಿಯೇಟ್ ಬೋರ್ಡ್ ಪರೀಕ್ಷೆಗಳನ್ನು ಬರೆಯುತ್ತಿದ್ದನು. ಇಂದಿನ ಮಕ್ಕಳು ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿರುತ್ತಾರೆ. ನನ್ನ ವಿರುದ್ಧದ ದ್ವೇಷದ ವಿಷ ಹೊರಹಾಕುವುದನ್ನು ನನ್ನ ಮಗ ನೋಡಿರಬಹುದೆಂದು ನಾನು ಚಿಂತಿತಳಾಗಿದ್ದೆ” ಎಂದು ಹೇಳಿದ್ದಾರೆ.
“ನನ್ನ ಬಂಧನದ ಸಂದರ್ಭದಲ್ಲಿ ನನ್ನ ಹಿರಿಯ ಮಗ ವಿದೇಶದಲ್ಲಿ ಓದುತ್ತಿದ್ದ. ಕಿರಿಯ ಮಗ ಇಲ್ಲೇ ಇದ್ದ… ನನ್ನನ್ನು ಜೈಲಿಗೆ ಕರೆದೊಯ್ಯುವಾಗ… ಆತ ಮನೆಯಲ್ಲೇ ಇದ್ದ. ನನ್ನ ಬಂಧನ ನಂತರದ ಆ ಮೊದಲ 15 ದಿನಗಳಲ್ಲಿ ನಾನು ಅನುಭವಿಸಿದ ನೋವನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.
“ಅದು ನನ್ನ ಜೀವನದಲ್ಲಿ ತುಂಬಾ ಕೆಟ್ಟ ಹಂತವಾಗಿತ್ತು. ನನ್ನ ಕುಟುಂಬದ ಮೇಲೂ ಪರಿಣಾಮ ಬೀರಿತು. ಅದೇ ನೋವು ಈಗ ನನ್ನನ್ನು ಬಲಪಡಿಸಿದೆ. ನನ್ನ ಮಕ್ಕಳನ್ನು ಬಲಪಡಿಸಿದೆ ಎಂದು ನಾನು ಹೇಳಬಲ್ಲೆ. ಆದರೆ, ಯಾವ ತಪ್ಪೂ ಇಲ್ಲದೆ ಆ ನೋವನ್ನು ನಾನು ಏಕೆ ಅನುಭವಿಸಿದೆ. ಕಾರಣವೊಂದೇ, ನಾವು ಬಿಜೆಪಿ ವಿರುದ್ಧವಿದ್ದೇವೆ ಎಂಬುದಷ್ಟೇ” ಎಂದು ಹೇಳಿದ್ದಾರೆ.
“ಆದರೆ, ಸತ್ಯವು ಒಂದು ದಿನ ಗೆಲ್ಲುತ್ತದೆಂದು ನನಗೆ ವಿಶ್ವಾಸವಿತ್ತು. ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದೆ. ಇಂದು ನ್ಯಾಯಾಂಗವು ನಮ್ಮ ವಿರುದ್ಧದ ಸುಳ್ಳಿನ ಜಾಲವನ್ನು ಗಮನಿಸಿದೆಯೆಂದು ನನಗೆ ಸಂತೋಷವಾಗಿದೆ. ಇಂದು ಒಂದು ರಾಷ್ಟ್ರವಾಗಿ ನಮಗೆಲ್ಲರಿಗೂ ಬಹಳ ದೊಡ್ಡ ಗೆಲುವು” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಕೇಂದ್ರದ ಜಾತಿವಾರು ಸಮೀಕ್ಷೆಯಲ್ಲಿ ಅಲೆಮಾರಿಗಳ ಪ್ರಶ್ನೆ
47 ವರ್ಷದ ಕವಿತಾ ಅವರು ತೆಲಂಗಾಣದ ರಾಜಕೀಯ ರಾಜಮನೆತನದವರು; ಅವರ ತಂದೆ ಕೆ ಚಂದ್ರಶೇಖರ್ ರಾವ್ ಅವರು ತೆಲಂಗಾಣದ ಮೊದಲ ಮುಖ್ಯಮಂತ್ರಿಯಾಗಿದ್ದರು. ಭಾರತೀಯ ರಾಷ್ಟ್ರ ಸಮಿತಿಯ (ಬಿಆರ್ಎಸ್) ಮುಖ್ಯಸ್ಥರು. ಅವರ ಸಹೋದರ ಕೆ ಟಿ ರಾಮರಾವ್ ರಾಜ್ಯದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಆದರೆ, ಕವಿತಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಿಂದಾಗಿ ಬಿಆರ್ಎಸ್ನಿಂದ ಅಮಾನತು ಮಾಡಲಾಯಿತು.
ತಮ್ಮ ವಿಚಾರದಲ್ಲಿ ಪಕ್ಷವು ನಡೆದುಕೊಂಡಿದ್ದರ ಕುರಿತೂ ಮಾತನಾಡಿರುವ ಕವಿತಾ, “ನಾನು ನನ್ನ ಬೆಂಬಲಕ್ಕಾಗಿ ಪಕ್ಷವನ್ನು ವಿನಂತಿಸಿದೆ. ನನ್ನ ಪರವಾಗಿ ಮಾತನಾಡಬೇಕು, ಪತ್ರಿಕಾಗೋಷ್ಠಿ ನಡೆಸಿ ನನ್ನ ಮೇಲಿನ ವಿಶ್ವಾಸವನ್ನು ವ್ಯಕ್ತಪಡಿಸಬೇಕೆಂದು ಕೇಳಿಕೊಂಡೆ. ಆದರೆ ಅದು ಎಂದಿಗೂ ನಡೆಯಲೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ನಾವು ಒಂದೇ ಕುಟುಂಬವಾಗಿದ್ದರೂ, ರಾಜಕೀಯವಾಗಿ ಬೇರ್ಪಟ್ಟಿದ್ದೇವೆ. ನನಗೆ ಬಿಆರ್ಎಸ್ನೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ನನ್ನನ್ನು ಅಮಾನತುಗೊಳಿಸಿದರು. ನನ್ನನ್ನು ಹೊರಹಾಕಿದರು. ಆದರೆ, ಆಗ ಮತ್ತು ಈಗ ನನ್ನ ಏಕೈಕ ಶಕ್ತಿ ಸತ್ಯ ಮಾತ್ರ. ಈಗ, ನಾನು ನನ್ನ ಜನರಿಗಾಗಿ ಕೆಲಸ ಮಾಡಲು ಬಯಸುತ್ತೇನೆ” ಎಂದಿದ್ದಾರೆ.




