ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬುಧವಾರದಿಂದ ಪ್ರತಿಭಟಿಸುತ್ತಿರುವ ಕರ್ನಾಟಕದ ತೆರಿಗೆ ಚಳವಳಿಗೆ ಗುರುವಾರ ಕೇರಳದ ಎಡಪಕ್ಷಗಳು ಮತ್ತು ತಮಿಳುನಾಡಿನ ಡಿಎಂಕೆ ಪಕ್ಷವೂ ಸೇರಿಕೊಂಡಿವೆ. ಕೇಂದ್ರದಿಂದ ತಮ್ಮ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ಪ್ರಶ್ನಿಸಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ದೆಹಲಿಗೆ ಆಗಮಿಸಿದ್ದಾರೆ.
ತಮಿಳುನಾಡಿನ ಆಡಳಿತ ಡಿಎಂಕೆ ಸಂಸದರು ಮತ್ತು ಮಿತ್ರ ಪಕ್ಷಗಳ ನಾಯಕರು ಸಂಸತ್ತಿನ ಆವರಣದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟಿಸಲಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸದಸ್ಯರು ಹಾಗೂ ಅವರ ಎಡಪಕ್ಷಗಳ ಸರ್ಕಾರ ಜಂತರ್ಮಂತರ್ನಲ್ಲಿ ಸೇರಿ ಪ್ರತಿಭಟಿಸಲಿದ್ದಾರೆ. ಈ ಬಗ್ಗೆ ಪಿಣರಾಯಿ ವಿಜಯನ್ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಪಕ್ಷದ ಸಚಿವರು, ಶಾಸಕರು ಜಂತರ್ಮಂತರ್ನಲ್ಲಿ ಕೇರಳ-ಕರ್ನಾಟಕದ ಪ್ರತಿಭಟನೆಗೆ ಜೊತೆಗೂಡಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಗುರುವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ವಿವರ ನೀಡಿದ್ದಾರೆ.
Salutes to Thiru @mkstalin & @arivalayam for extending solidarity & support for Kerala’s protest on February 8th at Delhi against the Centre’s discrimination towards states’ functioning & fiscal autonomy. This gesture boosts our efforts to stand up & resist the vicious efforts to… https://t.co/eQDxyS31uo
— Pinarayi Vijayan (@pinarayivijayan) February 6, 2024
ಬುಧವಾರ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ವಿರುದ್ಧ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದರು.




