ತಿರುವನಂತಪುರದ ವಟ್ಟಿಯೂರ್ಕಾವು ಕ್ಷೇತ್ರದ ಶಾಸಕ ವಿ.ಕೆ ಪ್ರಶಾಂತ್ ಅವರಿಗೆ ತಮ್ಮ ಕಚೇರಿಯನ್ನು ಖಾಲಿ ಮಾಡುವಂತೆ ಬಿಜೆಪಿ ಕೌನ್ಸಿಲರ್ ಆರ್ ಶ್ರೀಲೇಖಾ ಅವರು ದುಂಬಾಲು ಬಿದಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ತಿರುವನಂತಪುರಂ ಪುರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ, ಅಧಿಕಾರ ಹಿಡಿದಿದೆ. ಈ ಬೆನ್ನಲ್ಲೇ, ಸಿಪಿಐ(ಎಂ) ಶಾಸಕ ಪ್ರಶಾಂತ್ ಅವರಿಗೆ ಬಿಜೆಪಿ ಕೌನ್ಸಿಲರ್ ಕಚೇರಿ ತೆರವಿಗೆ ತಾಕೀತು ಮಾಡಿದ್ದಾರೆ.
ನಿವೃತ್ತ ಡಿಜಿಪಿ ಶ್ರೀಲೇಖಾ ಅವರು ಇತ್ತೀಚೆಗೆ ನಡೆದ ತಿರುವನಂತಪುರಂ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ವಟ್ಟಿಯೂರ್ಕಾವು ಶಾಸಕ ವಿ.ಕೆ ಪ್ರಶಾಂತ್ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದು, “ಬಿಜೆಪಿ ಕೌನ್ಸಿಲರ್ ಆರ್ ಶ್ರೀಲೇಖಾ ಅವರು ದೂರವಾಣಿ ಮೂಲಕ ನನಗೆ ಕರೆ ಮಾಡಿದ್ದರು. ಸಾಸ್ತಮಂಗಲಂನಲ್ಲಿರುವ ಕಾರ್ಪೊರೇಷನ್ ಕಟ್ಟಡದಲ್ಲಿರುವ ನನ್ನ ಕಚೇರಿಯನ್ನು ಖಾಲಿ ಮಾಡುವಂತೆ ಅವರು ದುಂಬಾಲು ಬಿದಿದ್ದಾರೆ” ಎಂದು ಆರೋಪಿಸಿದ್ದಾರೆ.
“ನನ್ನ ಕಚೇರಿಯನ್ನು ಖಾಲಿ ಮಾಡುವಂತೆ ಅವರು ನನಗೆ ಕರೆ ಮಾಡಿದ್ದಾರೆ. ಅದೇ ಕಟ್ಟಡದಲ್ಲಿರುವ ಕೌನ್ಸಿಲರ್ ಕಚೇರಿಯಲ್ಲಿ ಸಾಕಷ್ಟು ಸೌಲಭ್ಯಗಳಿಲ್ಲ. ಹೀಗಾಗಿ, ಅವರು ನಮ್ಮ ಕಚೇರಿಯನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿದ್ದಾರೆ” ಎಂದು ಪ್ರಶಾಂತ್ ಹೇಳಿದ್ದಾರೆ.
“ಕಳೆದ ಏಳು ವರ್ಷಗಳಿಂದ ತಾವು ಅದೇ ಕಟ್ಟಡದಲ್ಲಿ ನನ್ನ ಶಾಸಕರ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆ ಬಿಜೆಪಿ ಕೌನ್ಸಿಲರ್ ಕೂಡ ಅದೇ ಕಟ್ಟಡದ ಒಂದು ಭಾಗವನ್ನು ಕಚೇರಿಯಾಗಿ ಬಳಸುತ್ತಿದ್ದರು” ಎಂದು ಪ್ರಶಾಂತ್ ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ವಿಜಯ್ ಕೊನೆಯ ಚಿತ್ರ ‘ಜನ ನಾಯಗನ್’ ಮತ್ತು ತಮಿಳುನಾಡಿನ ರಾಜಕಾರಣ
ಒಂದು ವೇಳೆ, ನಾನು ಕಚೇರಿ ಖಾಲಿ ಮಾಡಬೇಕೆಂದರೆ, ಕಾರ್ಯವಿಧಾನದ ಪ್ರಕಾರ ನಿಗಮ ಕಾರ್ಯದರ್ಶಿಯಿಂದ ತೆರವು ನೋಟಿಸ್ ಕೊಡಬೇಕು. ಆದರೆ, ಬಿಜೆಪಿ ಕೌನ್ಸಿಲರ್ ನೇರವಾಗಿ ನನಗೆ ಕರೆ ಮಾಡಿ, ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದು, ಪೊಲೀಸ್ ಠಾಣೆಯ ಮೆಟ್ಟಿಲೇರುವ ವಿಷಯಗಳನ್ನು ನಿಭಾಯಿಸುವ ರೀತಿಯಲ್ಲಿದೆ” ಎಂದು ಪ್ರಶಾಂತ್ ಹೇಳಿದ್ದಾರೆ.
“ಅವರು ನನ್ನನ್ನು ಸಂಪರ್ಕಿಸುವ ಮೊದಲು ಇತರರೊಂದಿಗೆ ಸಮಾಲೋಚಿಸಿರಬಹುದು. ಮುಂದಿನ ವರ್ಷ (2026) ಮಾರ್ಚ್ ವರೆಗೆ ಜಾಗವನ್ನು ನನಗೆ ಮಂಜೂರು ಮಾಡಲಾಗಿದೆ. ಅದಕ್ಕೂ ಮೊದಲು ಅದನ್ನು ಖಾಲಿ ಮಾಡಲು ಸಾಧ್ಯವಿಲ್ಲ. ಅವರು ತಕ್ಷಣದ ತೆರವು ಬಯಸಿದರೆ, ಅವರು ಕಾನೂನು ಕ್ರಮಗಳನ್ನು ಅನುಸರಿಸಲಿ. ನಾವು ಕಾನೂನುಬದ್ಧವಾಗಿ ಎದುರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.




