ಇತರೆ ರಾಜ್ಯಗಳಲ್ಲಿ ಹಿಂದೂಗಳನ್ನು ಮಾತ್ರ ತನ್ನತ್ತ ಸೆಳೆಯುವ ಯತ್ನ ಮಾಡುವ, ಹಿಂದೂ ನಾವೆಲ್ಲ ಒಂದು ಎಂದು ನೆಪ ಮಾತ್ರದ ಘೋಷಣೆಗಳನ್ನು ಕೂಗುವ ಬಿಜೆಪಿ ಕೇರಳದಲ್ಲಿ ಮಾತ್ರ ತನ್ನ ಮಗ್ಗಲು ಬದಲಾಯಿಸಿಕೊಂಡಿದೆ. ಕಮ್ಯೂನಿಸ್ಟ್ ಭದ್ರಕೋಟೆಯಾದ ಕೇರಳದಲ್ಲಿ ಕೆಲವು ಸೀಟುಗಳನ್ನು ಗೆಲ್ಲಲೆಂದು ಕ್ರೈಸ್ತ ಸಮುದಾಯದ ಮತದಾರರನ್ನು ಸೆಳೆಯುವ ಯತ್ನವನ್ನು ಬಿಜೆಪಿ ಮಾಡುತ್ತಿದೆ.
ಇತ್ತೀಚೆಗೆ ನಡೆದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ವಿಜಯ ಸಾಧಿಸಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. 45 ವರ್ಷಗಳಿಂದ ಎಡ ಪ್ರಜಾಸತ್ತಾತ್ಮಕ ರಂಗದ (LDF) ಭದ್ರಕೋಟೆಯಾಗಿದ್ದ ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಗೆದ್ದಿದೆ. 10 ವಾರ್ಡ್ಗಳಿರುವ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) 50 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸಿದೆ. ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾಗಿರುವ ರಾಜ್ಯ ಕೇರಳ. ಇಲ್ಲಿ ಕೋಮು ವಿಭಜನೆ ಮೂಲಕವೇ ರಾಜಕೀಯ ಮಾಡುತ್ತಾ ಬಂದಿರುವ ಬಿಜೆಪಿಯ ಗೆಲುವು ಕಂಡಿದೆ. ಹಾಗಿರುವಾಗ ಸದ್ಯ ಎಡರಂಗ ಗಂಭೀರವಾಗಿ ಚಿಂತನೆ ನಡೆಸಬೇಕಾದ ಸಮಯವಿದು.
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಎಂಬ ಹುಸಿ ಭರವಸೆ, ರಾಮಮಂದಿರ ನಿರ್ಮಾಣದ ಕೋಮು ರಾಜಕೀಯ ಆಟವಾಡಿ ಬಿಜೆಪಿ ನೇತೃತ್ವದ ಎನ್ಡಿಎ ದೇಶದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರವನ್ನು ಪಡೆದುಕೊಂಡಿದೆ. ಪ್ರಮುಖವಾಗಿ ಹಿಂದೂಪರ ಎಂದು ಹೇಳಿಕೊಂಡೇ ಪರಸ್ಪರ ಹಿಂದೂ-ಮುಸ್ಲಿಮರನ್ನು ಎತ್ತಿಕಟ್ಟಿ ರಾಜಕೀಯ ಮಾಡುತ್ತಾ ಬಂದ ಬಿಜೆಪಿ, ಕೇರಳದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ, ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದು, ಬಿಜೆಪಿ ಮೊದಲ ಬಾರಿಗೆ ಕೇರಳದಲ್ಲಿ ತನ್ನ ಖಾತೆ ತೆರೆದಿದೆ.
ಇದನ್ನು ಓದಿದ್ದೀರಾ? ತಿರುವನಂತಪುರಂ ಬಿಜೆಪಿ ಪಾಲಾದದ್ದು ಹೇಗೆ?
ಅದಾದ ಬಳಿಕ 2025ರಲ್ಲಿ ನಡೆದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿನ ಗೆಲುವು ಬಿಜೆಪಿಗೆ ಇನ್ನಷ್ಟೂ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಇದೀಗ ಬಿಜೆಪಿ ಕೇರಳದ 2026ರ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಹತ್ತು ಸ್ಥಾನಗಳನ್ನು ಗೆಲ್ಲಲು ತಯಾರಿ ನಡೆಸುತ್ತಿದೆ. ಅದಕ್ಕಾಗಿ ಕೇರಳದ ಸುಮಾರು 60 ವಿಧಾನಸಭೆ ಕ್ಷೇತ್ರಗಳ ಮೇಲೆ ಬಿಜೆಪಿ ವಿಶೇಷ ಗಮನ ಹರಿಸಿದ್ದು, ಈ ಪ್ರದೇಶಗಳಲ್ಲಿ ಸಂಘಟನೆಯನ್ನು ಬಲಪಡಿಸಲು ಯೋಜನೆಗಳನ್ನು ರೂಪಿಸುತ್ತಿದೆ.
ಇತರೆ ರಾಜ್ಯಗಳಲ್ಲಿ ಹಿಂದೂಗಳನ್ನು ಮಾತ್ರ ತನ್ನತ್ತ ಸೆಳೆಯುವ ಯತ್ನ ಮಾಡುವ, ಹಿಂದೂ ನಾವೆಲ್ಲ ಒಂದು ಎಂದು ನೆಪ ಮಾತ್ರದ ಘೋಷಣೆಗಳನ್ನು ಕೂಗುವ ಬಿಜೆಪಿ ಕೇರಳದಲ್ಲಿ ಮಾತ್ರ ತನ್ನ ಮಗ್ಗಲು ಬದಲಾಯಿಸಿಕೊಂಡಿದೆ. ಕಮ್ಯೂನಿಸ್ಟ್ ಭದ್ರಕೋಟೆಯಾದ ಕೇರಳದಲ್ಲಿ ಕೆಲವು ಸೀಟುಗಳನ್ನು ಗೆಲ್ಲಲೆಂದು ಕ್ರೈಸ್ತ ಸಮುದಾಯದ ಮತದಾರರನ್ನು ಸೆಳೆಯುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಈಗಾಗಲೇ ವಿಧಾನಸಭೆ ಚುನಾವಣೆಗಳಿಗೆ ಬೇಕಾದ ಸಿದ್ಧತೆಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇರಳದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸೇರಿದಂತೆ ಇತರ ನಾಯಕರು ಸಭೆಗಳನ್ನು ನಡೆಸಿ ಕಾರ್ಯತಂತ್ರಗಳನ್ನು ಚರ್ಚಿಸಿದ್ದಾರೆ.
ದಕ್ಷಿಣ ಕರ್ನಾಟಕಕ್ಕೆ ಒತ್ತಿಕೊಂಡ ಜಿಲ್ಲೆಗಳತ್ತ ಬಿಜೆಪಿ ಚಿತ್ತ
ದಕ್ಷಿಣ ಕರ್ನಾಟಕಕ್ಕೆ ಒತ್ತಿಕೊಂಡಿರುವ ಕ್ಷೇತ್ರವನ್ನೇ ತನ್ನ ಮೊದಲ ಗುರಿಯಾಗಿಸಲು ಬಿಜೆಪಿ ಸನ್ನದ್ಧವಾಗುತ್ತಿದೆ. ದಕ್ಷಿಣ ಕರ್ನಾಟಕದ ದಕ್ಷಿಣ ಕನ್ನಡದ ಗಡಿ ಕಾಸರಗೋಡು. ಈಗಾಗಲೇ ಈ ಪ್ರದೇಶದಲ್ಲಿ ಆರ್ಎಸ್ಎಸ್ ಬೇರು ಆಳವಾಗಿ ನೆಡುವ ಪ್ರಯತ್ನವನ್ನು ಸರಿಸುಮಾರು ಯಶಸ್ವಿಯಾಗಿಯೇ ಬಲಪಂಥೀಯರು ನಡೆಸಿದ್ದಾರೆ. ಹಿಂದೂಗಳೇ ಬಹುಸಂಖ್ಯಾತರು ಆಗಿರುವ ಕಾಸರಗೋಡು ವಿಧಾನಸಭೆ ಕ್ಷೇತ್ರದ ಮೂಲಕವೇ ತನ್ನ ವಿಧಾನಸಭೆ ಕ್ಷೇತ್ರವನ್ನು ವಿಸ್ತರಿಸುವ ಯೋಜನೆ ಬಿಜೆಪಿಯದ್ದು.
ಕಾಸರಗೋಡು ಜಿಲ್ಲೆಯಲ್ಲಿ ಬಹುಸಂಖ್ಯಾತರು ಹಿಂದೂಗಳಾಗಿದ್ದು, ಮುಸ್ಲಿಮರು ಗಣನೀಯ ಅಲ್ಪಸಂಖ್ಯಾತರಾಗಿದ್ದಾರೆ. ಆದರೆ ಕಾಸರಗೋಡು ಪುರಸಭೆ ವ್ಯಾಪ್ತಿಯಲ್ಲಿ ಮುಸ್ಲಿಂ ಸಮುದಾಯ ಬಹುಸಂಖ್ಯಾತರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಹಿಂದೂಗಳು ಶೇ.55.84ರಷ್ಟಿದ್ದರೆ, ಮುಸ್ಲಿಮರು 37.24ರಷ್ಟಿದ್ದಾರೆ. ಹಾಗೆಯೇ ಕಾಸರಗೋಡು ಕೇರಳದ ರಾಜಕೀಯ ಭೂಪಟದಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಕ್ಷೇತ್ರ. ಇಲ್ಲಿ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಐಎಂ ನೇತೃತ್ವದ ಎಲ್ಡಿಎಫ್ ನಡುವೆ ತೀವ್ರ ಪೈಪೋಟಿ ಇದೆ. ಆದರೆ ಇತ್ತೀಚೆಗೆ ಬಿಜೆಪಿಯೂ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿದೆ.
ಇದನ್ನು ಓದಿದ್ದೀರಾ? ಕೇರಳ | ಬಿಜೆಪಿ ರಾಜಕೀಯಕ್ಕೆ ಬೇಸರ: ಕರ್ನಾಟಕದ ನೆರವು ಬೇಡವೆಂದ ಸಂತ್ರಸ್ತ ಕುಟುಂಬ
ಕಾಸರಗೋಡು ಜಿಲ್ಲೆಯು ಕೇರಳ ವಿಧಾನಸಭೆಯಲ್ಲಿ ಮಂಜೇಶ್ವರ, ಕಾಸರಗೋಡು, ಉದ್ಮ, ಕಾಂಞಂಗಾಡ್, ತ್ರಿಕರಿಪುರ – ಹೀಗೆ ಒಟ್ಟು 5 ಕ್ಷೇತ್ರಗಳನ್ನು ಹೊಂದಿದೆ. ಈ ಪೈಕಿ ಸದ್ಯ ಮಂಜೇಶ್ವರ, ಕಾಸರಗೋಡು ಯುಡಿಎಫ್ ಕೈಯಲ್ಲಿದ್ದರೆ, ಉದ್ಮ, ಕಾಂಞಂಗಾಡ್, ತ್ರಿಕರಿಪುರದಲ್ಲಿ ಎಡರಂಗ ಅಧಿಕಾರದಲ್ಲಿದೆ. ಸದ್ಯ ಕಾಸರಗೋಡು ಮತ್ತು ಮಂಜೇಶ್ವರಂ ಕ್ಷೇತ್ರಗಳಲ್ಲಿ ಬಿಜೆಪಿ ಕೊಂಚ ಅಧಿಕ ಪ್ರಭಾವವನ್ನು ಹೊಂದಿದೆ. ಈ ಪ್ರದೇಶಗಳಲ್ಲಿ ಬಲವಾದ ಅಸ್ತಿತ್ವವನ್ನು ಸ್ಥಾಪಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಸ್ಪರ್ಧೆ ನೀಡಿದ್ದರು. ಇದೀಗ ಈ ಕ್ಷೇತ್ರಗಳಲ್ಲಿ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಪ್ರಚಾರಕ್ಕೆ ಇಳಿದಿದೆ. ಆದರೆ ಇವೆಲ್ಲವೂ ಇದು ಗಂಭೀರ ಮತ್ತು ಅಪಾಯಕಾರಿ ಎಂಬುದು ಎಡರಂಗಗಳ ಅಭಿಪ್ರಾಯ.
ಬಿಜೆಪಿ ಗೆಲುವು ಗಂಭೀರ ವಿಚಾರವೇಕೆ?
ಬಿಜೆಪಿಯ ತಿರುವನಂತಪುರಂ ಗೆಲುವು ಮತ್ತು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆಯು ಕೇರಳದ ರಾಜಕೀಯದಲ್ಲಿ ಒಂದು ಗಂಭೀರ ಮತ್ತು ಐತಿಹಾಸಿಕ ತಿರುವು ಎಂದು ಪರಿಗಣಿಸಲಾಗುತ್ತದೆ. 45 ವರ್ಷಗಳಿಂದ ಎಲ್ಡಿಎಫ್ ಹಿಡಿತದಲ್ಲಿದ್ದ ಪಾಲಿಕೆಯನ್ನು ತನ್ನ ತೆಕ್ಕೆಗೆ ಬಿಜೆಪಿ ಪಡೆದಿರುವುದೇ ದೊಡ್ಡ ಬದಲಾವಣೆ. ಇತ್ತೀಚೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕ ಬಿನೋಯ್ ವಿಶ್ವಂ ಅವರೂ ಇದೇ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ಸಂದರ್ಶನದಲ್ಲಿ ಬಿನೋಯ್ ವಿಶ್ವಂ ಕೇರಳದಲ್ಲಿ ಬಿಜೆಪಿಯ ಉದಯದ ಬಗ್ಗೆ ಮಾತನಾಡಿ, “ನಾವಿದ್ದನ್ನು ಗಂಭೀರ ವಿಷಯವಾಗಿ ಪರಿಗಣಿಸಬೇಕಾಗುತ್ತದೆ. ಬಿಜೆಪಿ ಚಾತುರ್ವರ್ಣ ವ್ಯವಸ್ಥೆಯನ್ನು ನಂಬುತ್ತದೆ. ಕೇರಳದಲ್ಲಿ ಈ ಸಿದ್ಧಾಂತ ದೊಡ್ಡ ಬೆದರಿಕೆಯಾಗಿದೆ. ಇದನ್ನು ಎದುರಿಸಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು. ಬಹುಶಃ ಕಮ್ಯುನಿಸ್ಟ್ ಚಳುವಳಿಯು ಸವಾಲು ಮತ್ತು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.
ಬಿನೋಯ್ ವಿಶ್ವಂ ಅವರು ಹೇಳುವಂತೆಯೇ ಬಿಜೆಪಿ ಚಾತುರ್ವರ್ಣ ವ್ಯವಸ್ಥೆಯನ್ನು ನಂಬಿಕೊಂಡು ಬಂದಿರುವ ಪಕ್ಷ. ಬಿಜೆಪಿಯ ಹಲವು ನಾಯಕರು ಸಂವಿಧಾನ ಬದಲಾಯಿಸಿ ಮನುಸ್ಮೃತಿ ಆಧಾರಿತ ಪರ್ಯಾಯ ಸಂವಿಧಾನ ಜಾರಿಗೆ ತರುವ ಬಗ್ಗೆ ನೇರವಾಗಿ ಅಥವಾ ಪರೋಕ್ಷವಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಈಗಾಗಲೇ ಕೇರಳ ಸೇರಿ ಕೆಲವು ರಾಜ್ಯಗಳನ್ನು ಹೊರತುಪಡಿಸಿ ದೇಶದಾದ್ಯಂತ ಬಿಜೆಪಿ ಕೋಮುವಾದವನ್ನೇ ಅಸ್ತ್ರವನ್ನಾಗಿಸಿ ಅಧಿಕಾರಕ್ಕೆ ಏರಿದೆ. ಕೇರಳಕ್ಕೆ ಸಮೀಪವಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಿಂದುತ್ವವನ್ನು ಮುಂದಿಟ್ಟುಕೊಂಡು ಬಿಜೆಪಿ 8 ವಿಧಾನಸಭೆ ಕ್ಷೇತ್ರದಲ್ಲಿ 7ರಲ್ಲಿ ಗೆಲುವು ಕಂಡಿದೆ. ಈವರೆಗೂ ಕೋಮು ಸೌಹಾರ್ದಕ್ಕೆ ಹೆಸರಾಗಿರುವ ಕೇರಳ ಬಿಜೆಪಿಯ ಕೋಮು ವಿಭಜನೆಗೆ ಸಿಲುಕುವ ಅಪಾಯ ಯುಡಿಎಫ್, ಎಲ್ಡಿಎಫ್ ನಾಯಕರದ್ದು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




