ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನೀಡಿದ, ಗರ್ಭಪಾತ ಮಾಡಿಸಲು ಒತ್ತಾಯಿಸಿದ ಆರೋಪದ ಮೇಲೆ ಕೇರಳದ ಪಾಲಕ್ಕಾಡ್ ಶಾಸಕ ರಾಹುಲ್ ಮಮ್ಕೂಟತಿಲ್ ವಿರುದ್ಧ ಪೊಲೀಸರು ನವೆಂಬರ್ 28ರ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಮಮ್ಕೂಟತಿಲ್ ವಿರುದ್ಧ ಹಲವು ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ಇದರಿಂದಾಗಿ ಈಗಾಗಲೇ ಆಗಸ್ಟ್ 25ರಂದು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಂಡಿರುವ ಮಮ್ಕೂಟತಿಲ್ ವಿರುದ್ಧ ದಾಖಲಾದ ಮೊದಲ ದೂರು ಇದಾಗಿದೆ.
ಇದನ್ನು ಓದಿದ್ದೀರಾ? ಲೈಂಗಿಕ ಕಿರುಕುಳ ಆರೋಪ; ಕೇರಳದ ಕಾಂಗ್ರೆಸ್ ಶಾಸಕ ಪಕ್ಷದಿಂದ ಅಮಾನತು
ಗುರುವಾರ ತಡರಾತ್ರಿ ಮಹಿಳೆಯೊಬ್ಬರು ನೀಡಿದ ಹೇಳಿಕೆಯ ಆಧಾರದಲ್ಲಿ ಶುಕ್ರವಾರ ವಲಿಯಮಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಅಮಾನತುಗೊಂಡಿರುವ ಕಾಂಗ್ರೆಸ್ ಶಾಸಕರ ವಿರುದ್ಧ ದೂರುದಾರರು ಗುರುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸಂಪರ್ಕಿಸಿ ದೂರು ನೀಡಿದ್ದರು.
ನಂತರ ತಿರುವನಂತಪುರಂ ಗ್ರಾಮೀಣ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಮಹಿಳೆಯಿಂದ ವಿವರವಾದ ಹೇಳಿಕೆಯನ್ನು ಪಡೆದಿದ್ದಾರೆ. ತಡರಾತ್ರಿಯವರೆಗೂ ಕಾರ್ಯವಿಧಾನಗಳು ಮುಂದುವರೆದಿದ್ದು, ಬಳಿಕ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ.
ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಬಲವಂತವಾಗಿ ಗರ್ಭಪಾತ ಮಾಡಿಸಿರುವ ಮತ್ತು ಬೆದರಿಕೆ ಹಾಕಿರುವ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ದೂರುದಾರರ ಗೌಪ್ಯ ಹೇಳಿಕೆಯನ್ನು ದಾಖಲಿಸಲು ಪೊಲೀಸರು ತಿರುವನಂತಪುರಂ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಸಂಪರ್ಕಿಸಲಿದ್ದಾರೆ. ವೈದ್ಯರ ತಂಡವು ಶೀಘ್ರದಲ್ಲೇ ಮಹಿಳೆಯ ವೈದ್ಯಕೀಯ ಪರೀಕ್ಷೆ ಮಾಡಲಿದೆ ಎಂದು ವರದಿಯಾಗಿದೆ.
ಇನ್ನು ಮಹಿಳೆ ಮುಖ್ಯಮಂತ್ರಿಯನ್ನು ಸಂಪರ್ಕಿಸಿದ ನಂತರ ಮಮ್ಕೂಟತಿಲ್ ತಲೆಮರೆಸಿಕೊಂಡಿರುವುದಾಗಿ ವರದಿಯಾಗಿದೆ. ಸದ್ಯ ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಪಾಲಕ್ಕಾಡ್ನ ಕಾಂಗ್ರೆಸ್ ನಾಯಕರು ಮತ್ತು ಮಮ್ಕೂಟತಿಲ್ ಗುರುವಾರ ಸಂಜೆ ಸುಮಾರು 4 ಗಂಟೆಯವರೆಗೆ ಕನಾಡಿ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದರು. ಅದಾದ ಬಳಿಕ ನಾಪತ್ತೆಯಾಗಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ: ಬಿಜೆಪಿ ನಾಯಕ ಸಿ ಕೃಷ್ಣಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಇನ್ನು ಇದಕ್ಕೂ ಮೊದಲು ಪೊಲೀಸ್ ಪ್ರಧಾನ ಕಚೇರಿಗೆ ಬಂದ ಅನಾಮಧೇಯ ಇಮೇಲ್ನಲ್ಲಿ ಆಡಿಯೊ ಕ್ಲಿಪ್ಗಳು ಮತ್ತು ಸಂದೇಶಗಳ ವಿವರವಿದ್ದು ಇದರ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಆ ಸಂದರ್ಭದಲ್ಲಿ ಮಹಿಳೆ ನೇರವಾಗಿ ದೂರು ನೀಡಿರಲಿಲ್ಲ. ಎರಡು ದಿನಗಳ ಹಿಂದೆ, ಮತ್ತೊಂದು ಆಡಿಯೊ ಕ್ಲಿಪ್ ಬಿಡುಗಡೆಯಾಗಿದ್ದು, ಇದರಲ್ಲಿ ಶಾಸಕರು ಮಗು ತನಗೂ ಇಷ್ಟ ಎಂದು ಹೇಳಿರುವುದು, ಆದರೆ ನಂತರ ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಯನ್ನು ಒತ್ತಾಯಿಸಿರುವುದು ಬಹಿರಂಗವಾಗಿದೆ.
ಈ ಹಿಂದೆ ಮಮ್ಕೂಟತಿಲ್ ಅನುಚಿತವಾಗಿ ವರ್ತಿಸಿರುವುದಾಗಿ ಮಲಯಾಳಂ ನಟಿ ರಿನಿ ಆನ್ ಜಾರ್ಜ್ ದೂರಿದ್ದು, ಅದಾದ ಬಳಿಕ ಮಮ್ಕೂಟತಿಲ್ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಘಟನೆ ಬೆನ್ನಲ್ಲೇ ಬಿಜೆಪಿ ಮತ್ತು ಸಿಪಿಐ(ಎಂ) ನ ಯುವ ಘಟಕವಾದ ಡಿವೈಎಫ್ಐ ಪ್ರತಿಭಟನೆಗಳನ್ನು ನಡೆಸಿದ್ದವು. ಅದಾದ ಬಳಿಕ ಹಲವು ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರೊಬ್ಬರೂ ಮಮ್ಕೂಟತಿಲ್ ವಿರುದ್ಧ ಆರೋಪಗಳನ್ನು ಹೊರಿಸಿದ್ದಾರೆ.





