- ಸಂತಾಪ ಸೂಚಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್,
- 2020ರಲ್ಲಿ ಕೇಂದ್ರ ಸರ್ಕಾರದ ನಾರಿಶಕ್ತಿ ಪ್ರಶಸ್ತಿ ಪಡೆದಿದ್ದ 101ರ ಹರೆಯದ ವಿದ್ಯಾರ್ಥಿನಿ
ದೇಶದ ಅತೀ ಹಿರಿಯ ಸಾಕ್ಷರತಾ ವಿದ್ಯಾರ್ಥಿನಿ, ನಾರಿಶಕ್ತಿ ಪ್ರಶಸ್ತಿ ವಿಜೇತೆಯಾಗಿದ್ದ ಕೇರಳದ ಕಾರ್ತ್ಯಾಯಿನಿ ಅಮ್ಮ ನಿಧನರಾಗಿದ್ದಾರೆ. ಅವರಿಗೆ 101 ವಯಸ್ಸಾಗಿತ್ತು. ಕೇರಳದ ಆಲಪ್ಪುಝ ಜಿಲ್ಲೆಯ ಹರಿಪಾಡ್ ಮುತ್ತುಲ್ಲದ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಕೇರಳ ಸರ್ಕಾರದ ‘ಅಕ್ಷರಲಕ್ಷಂ’ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ 101ರ ಹರೆಯದ ಕಾರ್ತ್ಯಾಯಿನಿ ಅಮ್ಮ, 2020ರಲ್ಲಿ ಕೇಂದ್ರ ಸರ್ಕಾರದ ನಾರಿಶಕ್ತಿ ಪ್ರಶಸ್ತಿ ಪಡೆದಿದ್ದರು.
ಕಾರ್ತ್ಯನಿಯಮ್ಮ ನಿಧನಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು,’ಕಾರ್ತ್ಯಾನಿಯಮ್ಮ ತಾನು 10ನೇ ತರಗತಿ ತೇರ್ಗಡೆಯಾದ ಮೇಲೆ ಉದ್ಯೋಗ ಪಡೆಯಬೇಕೆಂದು ಹೇಳಿದ್ದರು. ಆ ಮಾತುಗಳಲ್ಲಿ ಆತ್ಮವಿಶ್ವಾಸ ಮತ್ತು ದೃಢತೆ ಇತ್ತು. ನಾರಿಶಕ್ತಿ ಪ್ರಶಸ್ತಿ ಪಡೆದ ನಂತರ ಖುದ್ದಾಗಿ ಭೇಟಿಯಾಗಲು ಬಂದಿದ್ದರು’ ಎಂದು ನೆನಪಿಸಿದ್ದಾರೆ.
Deeply saddened by the passing of Karthyayani Amma, who made history by becoming the oldest learner under the State Literacy Mission. She served as an inspiring role model for many, showing unwavering determination to pursue education despite challenges. Her demise is a… pic.twitter.com/1mXVRvWD7a
— Pinarayi Vijayan (@pinarayivijayan) October 11, 2023
‘ವಯಸ್ಸಿನ ಹೊರತಾಗಿಯೂ, ಕಲಿಯುವ ಇಚ್ಛೆಯು ನೂರಾರು ಮಹಿಳೆಯರಿಗೆ ಅವರು ಸ್ಫೂರ್ತಿಯಾಗಿದ್ದರು. ಕಾರ್ತ್ಯಾನಿಯಮ್ಮ ಕೇರಳದ ಹೆಮ್ಮೆ. ನಾವು ಆದರ್ಶಪ್ರಾಯ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದೇವೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಯಾರು ಈ ಕಾರ್ತ್ಯಾಯಿನಿ ಅಮ್ಮ?
2018ರಲ್ಲಿ ಗ್ರಾಮ ಪಂಚಾಯತ್ನ ಸಾಕ್ಷರತಾ ಮಿಷನ್ ತಂಡವು ಕಾರ್ತ್ಯಾಯಿನಿ ಅಮ್ಮನವರ ಮನೆಗೆ ಬಂದಾಗ ಬಹಳ ಉತ್ಸಾಹದಿಂದಲೇ ಈ ಕಾರ್ಯಕ್ರಮಕ್ಕೆ ಸೇರಿಕೊಂಡಿದ್ದರು. ಸಾಕ್ಷರತಾ ಮಿಷನ್ನ ಕೇರಳದ ಅತ್ಯಂತ ಹಳೆಯ ವಿದ್ಯಾರ್ಥಿಯಾಗಿಯೂ ಗುರುತಿಸಿಕೊಂಡರು.
ಆ ಬಳಿಕ ಕೇರಳ ಸರ್ಕಾರವು ನಡೆಸಿದ್ದ ‘ಅಕ್ಷರಲಕ್ಷಂ’ ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಸುಮಾರು 40,000 ಮಂದಿ ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದು, ಇದರಲ್ಲಿ ಕಾರ್ತ್ಯಾಯಿನಿ ಅವರು 98 ಶೇ. ಅಂಕ ಪಡೆಯುವ ಮೂಲಕ ಸುದ್ದಿಯಾಗಿದ್ದರು. ಅಲ್ಲದೇ, ಇವರ 60ರ ಹರೆಯ ಮಗಳು ಭಾಗೀರಥಿ ತಾಯಿ 96ನೇ ವಯಸ್ಸಿನಲ್ಲಿ ಕಲಿಯಲು ಪ್ರೇರಣೆ ನೀಡಿದ್ದರು.
ಮನೆಯಲ್ಲಿರೋ ಆರ್ಥಿಕ ಸಮಸ್ಯೆಯಿಂದಾಗಿ ಕಾರ್ತ್ಯಾಯಿನಿ, ಚಿಕ್ಕಂದಿನಲ್ಲೇ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿದ್ದರು. ಗಂಡನ ಸಾವಿನ ನಂತರ ಕಸಗುಡಿಸುವ ಕೆಲಸ ಮಾಡಿ ತಮ್ಮ ಆರು ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡು ಸಮರ್ಥವಾಗಿ, ನಿಭಾಯಿಸಿದ್ದರು. ಬಡತನವಿದ್ದರೂ ಕಷ್ಟಪಟ್ಟು ಎಲ್ಲರನ್ನೂ ಬೆಳೆಸಿದ್ದರು.
ತಮ್ಮ 96ನೇ ವಯಸ್ಸಿನಲ್ಲಿ ಪರೀಕ್ಷೆ ಬರೆಯುವ ಮೂಲಕ ಎಲ್ಲರಿಗೂ ಮಾದರಿ ಅನಿಸಿಕೊಂಡರು. 2020ರಲ್ಲಿ ಮಹಿಳಾ ದಿನಾಚರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಾರಿಶಕ್ತಿ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದ್ದರು.
ಅಲ್ಲದೇ, ಕೇರಳ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಕಂಪ್ಯೂಟರ್ ಕಲಿಯುವ ಆಸೆಯನ್ನೂ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಬೇಡಿಕೆಯನ್ನು ಪೂರೈಸಿದ್ದ ಅಂದಿನ ಶಿಕ್ಷಣ ಸಚಿವ ಪ್ರೊ.ಸಿ.ರವೀಂದ್ರನಾಥ್, ಸ್ವತಃ ಲ್ಯಾಪ್ ಟಾಪ್ ಹಿಡಿದು ಕಾರ್ತ್ಯಾಯಿನಿಯಮ್ಮ ಮನೆಗೆ ಬಂದು ಬಂದಿದ್ದರು. ವಿದ್ಯಾಭ್ಯಾಸಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದ ಇವರ ಸಾಧನೆಯನ್ನು ಗುರುತಿಸಿ, 2019ರಲ್ಲಿ 53 ದೇಶಗಳನ್ನು ಒಳಗೊಂಡಿರುವ ಕಾಮನ್ವೆಲ್ತ್ ಕಲಿಕೆಯ ಸದ್ಭಾವನಾ ರಾಯಭಾರಿಯಾಗಿಯೂ ಕಾರ್ತ್ಯಾಯಿನಿಯಮ್ಮ ಆಯ್ಕೆಯಾಗಿದ್ದರು.





